ವಿಶ್ವನಾಥ್ ಮುಂದಿನ ನಡೆ ಅಷ್ಟು ಸುಲಭವಾಗಿಲ್ಲ
ಮೈಸೂರು, ಜುಲೈ 13: ಹುಣಸೂರು ಕ್ಷೇತ್ರದ ಶಾಸಕ, ಹಿರಿಯ ರಾಜಕಾರಣಿ ಎಚ್.ವಿಶ್ವನಾಥ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಇಂದಿಗೆ ಒಂದು ವಾರ ಕಳೆದಿದೆ. ರಾಜೀನಾಮೆ ನಂತರ ತಾಲ್ಲೂಕಿನಲ್ಲಿ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆಯೂ ಜೋರಾಗಿದೆ.
ವಿಶ್ವನಾಥ್ ಅವರು ಬಿಜೆಪಿಗೆ ಸೇರುವುದು ಖಚಿತ ಎಂಬ ಮಾತು ಒಂದೆಡೆ ಕೇಳಿ ಬರುತ್ತಿದ್ದರೆ, ಅವರ ರಾಜೀನಾಮೆಯಿಂದ ತೆರವಾಗುವ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಮತ್ತೆ ವಿಶ್ವನಾಥ್ ಸ್ಪರ್ಧಿಸುತ್ತಾರೋ ಅಥವಾ ತಮ್ಮ ಪುತ್ರನನ್ನು ಕಣಕ್ಕಿಳಿಸುತ್ತಾರೋ ಎಂಬ ಕುತೂಹಲದ ಚರ್ಚೆಯೂ ನಡೆಯುತ್ತಿದೆ. ಆದರೆ ಯಾರೇ ಸ್ಪರ್ಧಿಸಿದರೂ ಗೆಲುವು ಅಷ್ಟು ಸುಲಭವಲ್ಲ ಎಂಬುದೂ ಜನರ ಅಭಿಪ್ರಾಯವಾಗಿದೆ.
ವ್ಯಂಗ್ಯವಾಗಿ ಸಿದ್ದರಾಮಯ್ಯಗೆ ಥ್ಯಾಂಕ್ಸ್ ಹೇಳಿದ ವಿಶ್ವನಾಥ್
ಈಗಾಗಲೇ ಅತೃಪ್ತ ಶಾಸಕರ ನಾಯಕ ಎನಿಸಿಕೊಂಡ ವಿಶ್ವನಾಥ್ ಅವರನ್ನು ಸೋಲಿಸಲು ಜೆಡಿಎಸ್ ರಾಜಕೀಯ ದಾಳ ಉರುಳಿಸುವುದಂತೂ ನಿಜ. ವಿಶ್ವನಾಥ್ ಅವರಿಗೆ ಇದು ಉಪಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಆದರೆ ಬಿಜೆಪಿ ವರಿಷ್ಠರು ನೇರವಾಗಿ ಅಖಾಡಕ್ಕಿಳಿದು ಪ್ರಚಾರದಲ್ಲಿ ಪಾಲ್ಗೊಂಡರೆ ಸವಾಲಿನೊಂದಿಗೆ ವಿಶ್ವನಾಥ್ ಅವರು ಗೆಲುವಿನ ದಡ ಸೇರುವ ಸಂಭವ ತಳ್ಳಿಹಾಕುವಂತಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಕೆಲವೇ ಸಾವಿರ ಅಂತರದಲ್ಲಿ ವಿಶ್ವನಾಥ್ ಅವರು ಗೆಲವು ಸಾಧಿಸಿದ್ದರು.
ಮತ್ತೊಂದು ಮೂಲಗಳ ಪ್ರಕಾರ, ವಿಶ್ವನಾಥ್ ಮತ್ತೆ ಹುಣಸೂರಿನಿಂದ ಸ್ಪರ್ಧಿಸುವುದು ಅನುಮಾನವಾಗಿದ್ದು, ಅವರ ಬದಲಿಗೆ ಅವರ ಪುತ್ರ ಜಿಲ್ಲಾ ಪಂಚಾಯಿತಿ ಸದಸ್ಯ ಅಮಿತ್ ಅವರನ್ನೇ ಕಣಕ್ಕಿಳಿಸಬಹುದು ಎಂಬ ಮಾತು ಕೇಳಿಬರುತ್ತಿವೆ.
ಮಹಿಳೆ ಜೊತೆ ಎಚ್ ವಿಶ್ವನಾಥ್ ಧ್ವನಿಯಂತಿರುವ ಅಸಭ್ಯ ಆಡಿಯೋ ವೈರಲ್ : ಸ್ಪಷ್ಟನೆ
ಇವೆಲ್ಲದರೊಂದಿಗೆ ಮುಖ್ಯವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಸಿದ್ದರಾಮಯ್ಯ ಅವರ ಆಪ್ತ ಮಂಜುನಾಥ್ ಮತ್ತೆ ಈ ಕ್ಷೇತ್ರವನ್ನು ವಶಕ್ಕೆ ಪಡೆಯಲು ಇನ್ನಿಲ್ಲದ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇವೆಲ್ಲವನ್ನೂ ಮೀರಿ ವಿಶ್ವನಾಥ್ ಯಾವ ಹಾದಿಯನ್ನು ರೂಪಿಸಿಕೊಳ್ಳುತ್ತಾರೆ ಎಂಬುದೇ ಮುಂದಿನ ಪ್ರಶ್ನೆಯಾಗಿದೆ.