ವಿಶ್ವನಾಥ್ 'ಅಭಿಮಾನಿ'ಯಿಂದ ಸಚಿವ ಸಾ. ರಾ. ಮಹೇಶ್ ಗೆ ಆವಾಜ್; ಆಡಿಯೋ ವೈರಲ್
ಮೈಸೂರು, ಜುಲೈ 21 : ಸಚಿವ ಸಾ. ರಾ. ಮಹೇಶ್ ಹಾಗೂ ಶಾಸಕ ಎಚ್. ವಿಶ್ವನಾಥ್ ಮಧ್ಯದ ಮಾತಿನ ಗುದ್ದಾಟ ಸದ್ಯಕ್ಕೆ ಅವರ ಅಭಿಮಾನಿಗಳ ಹಂತಕ್ಕೂ ಇಳಿದಿದೆ. ಇದಕ್ಕೆ ಸಾಕ್ಷಿಯೆಂಬಂತೆ ಜೆಡಿಎಸ್ ಕಾರ್ಯಕರ್ತರೊಬ್ಬರು ಸಚಿವ ಸಾ. ರಾ. ಮಹೇಶ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು ಮೊಬೈಲ್ನಲ್ಲಿ ಮಾತನಾಡುವ ವೇಳೆ ನಡೆಸಿದ ಮಾತಿನ ಜಟಾಪಟಿಯ 1.30 ನಿಮಿಷದ ಆಡಿಯೋ ಕ್ಲಿಪ್ಪಿಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆತ್ಮಸಾಕ್ಷಿ ಇದ್ದರೆ ಸದನಕ್ಕೆ ಬನ್ನಿ; ವಿಶ್ವನಾಥ್ ಗೆ ಸವಾಲೆಸೆದ ಸಚಿವ ಸಾ ರಾ ಮಹೇಶ್
ಸಚಿವರಿಗೆ ಮೊಬೈಲ್ ಕರೆ ಮಾಡಿದ ವ್ಯಕ್ತಿ ಸಚಿವರ ಮಧ್ಯೆ ವಾಕ್ಸಮರ ನಡೆದಿದ್ದು, ಈ ಆಡಿಯೋದಲ್ಲಿ ಕಾರ್ಯಕರ್ತ, " ವಿಶ್ವನಾಥ್ ಏನೂ ಗತಿ ಇಲ್ಲದೇ ನಿಮ್ಮ ಬಳಿ 28 ಕೋಟಿ- 30 ಕೋಟಿ ಸಾಲ ಕೇಳಿದ್ದರಾ? ಸಾಲ ಕೇಳೋಕೆ ಬಂದಿದ್ರಾ? ವಿಶ್ವನಾಥ್ ನಿಮ್ಮ ಬಳಿ ಭಿಕ್ಷೆ ಕೇಳಲು ಬಂದಿದ್ರಾ?" ಎಂದಾಗ, ಸಚಿವರು: "ಎಲ್ಲೋ ಮಾತನಾಡಬೇಡ. ಎದುರುಗಡೆ ಬನ್ನಿ. ಇನ್ನೊಂದು ಮಾತನಾಡಿದ್ರೆ. ಮೈಸೂರು ಆಫೀಸ್ನಲ್ಲಿ ಇದ್ದೀನಿ. ಬಾ" ಎಂದಿದ್ದಾರೆ.
ಇದಕ್ಕೂ ಉತ್ತರಿಸಿದ ಕಾರ್ಯಕರ್ತ, "ಮೈಸೂರಲ್ಲ, ನವ ದೆಹಲಿಗೂ ಬರ್ತೀನಿ. ವಿಶ್ವನಾಥ್ ಸಾಹೇಬ್ರ ಬಗ್ಗೆ ಮಾತನಾಡಲು ನೀವ್ಯಾರು? " ಎಂದು ಮೊಬೈಲ್ ಕರೆ ಕಡಿತಗೊಳಿದ್ದಾರೆ. ವಾಕ್ಸಮರ ಹಾಗೂ ಆಡಿಯೋ ಕ್ಲಿಪ್ಪಿಂಗ್ ಬಹಿರಂಗಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಗೆ ಯತ್ನಿಸಿದರೂ ಸಾ. ರಾ. ಮಹೇಶ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಸದ್ಯಕ್ಕೆ ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.