ಇಲ್ಲಿಗೆ ಎಲ್ಲವೂ ಮುಗಿಯಲಿ; ಸಾರಾ ಮಹೇಶ್ ಜೊತೆ ರಾಜಿಗೆ ಮುಂದಾದ ವಿಶ್ವನಾಥ್
ಮೈಸೂರು, ಸೆಪ್ಟೆಂಬರ್ 24: ಸಾರ್ವಜನಿಕವಾಗಿ ಪರಸ್ಪರ ವೈಯಕ್ತಿಕವಾಗಿ ನಿಂದಿಸಿಕೊಳ್ಳುವುದು ಇಬ್ಬರಿಗೂ ಶ್ರೇಯಸ್ಸಲ್ಲ ಎಂದಿರುವ ಮಾಜಿ ಸಚಿವ ಎಚ್ ವಿಶ್ವನಾಥ್ ಸಾರಾ ಮಹೇಶ್ ಜತೆ ರಾಜಿಗೆ ಮುಂದಾಗಿದ್ದಾರೆ. ಇಬ್ಬರೂ ತಪ್ಪು ಮಾಡಿದ್ದೇವೆ, ವೈಯಕ್ತಿಕ ಟೀಕೆಗಳನ್ನು ನಿಲ್ಲಿಸೋಣ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಸಾ ರಾ ಮಹೇಶ್ ಕೊಚ್ಚೆಗುಂಡಿ ಇದ್ದಂತೆ: ಶಾಸಕ ಎಚ್. ವಿಶ್ವನಾಥ್
ಇಷ್ಟು ದಿನ ಸಾರಾ ಮಹೇಶ್ ಹೇಳಿಕೆಗಳಿಗೆ ಮಾತಿನ ಚಾಟಿ ಬೀಸಿ ತಿರುಗೇಟು ನೀಡುತ್ತಿದ್ದ ವಿಶ್ವನಾಥ್ ಈಗ ಅವರ ಜೊತೆಗೆ ರಾಜಿಗೆ ಮುಂದಾಗಿದ್ದಾರೆ.
ವೈಯಕ್ತಿಕ ಟೀಕೆ ಇಬ್ಬರಿಗೂ ಒಳ್ಳೆಯದಲ್ಲ
ಹೌದು. ಇಷ್ಟು ದಿನ ಹಾವು ಮುಂಗುಸಿಯಂತೆ ವಿಶ್ವನಾಥ್ ಹಾಗೂ ಸಾರಾ ಮಹೇಶ್ ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಂಡು ಬಂದಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ವಿಶ್ವನಾಥ್ ಅವರು ಸಾರಾ ಮಹೇಶ್ ಜೊತೆ ರಾಜಿಗೆ ನಿಂತಿದ್ದಾರೆ. "ಇಬ್ಬರು ಗಾಜಿನ ಮನೆಯಲ್ಲಿ ಇದ್ದೇವೆ. ಜನರು ನಮ್ಮನ್ನು ನೋಡುತ್ತಿದ್ದಾರೆ. ಅವರ ಮುಂದೆ ನಾವು ಜಾರಿ ಬೀಳುವುದು ಬೇಡ. ಇಬ್ಬರೂ ತಪ್ಪು ಮಾಡುತ್ತಿದ್ದೇವೆ ಅಂತ ನನಗೆ ಅನಿಸುತ್ತಿದೆ. ನಾವಿಬ್ಬರು ಒಂದೇ ಊರಿನವರು, ಪರಸ್ಪರ ಈ ರೀತಿ ಮಾತನಾಡುವುದು ಬೇಡ. ನೀವೇನೋ ಮಾಡುತ್ತೀರಾ ಅಂತ ಹೆದರಿ ಈ ಮಾತುಗಳನ್ನ ಹೇಳುತ್ತಿಲ್ಲ. ನೀವು ಬೆಳೆಯಬೇಕಿರುವ ರಾಜಕಾರಣಿ. ನನ್ನದು ನಿವೃತ್ತಿಯ ರಾಜಕಾರಣ. ಆದ್ದರಿಂದ ಇಂತಹ ಪರಸ್ಪರ ವೈಯುಕ್ತಿಕ ಮಾತುಗಳು ನಮಗೆ ಒಳ್ಳೆಯದಲ್ಲ. ಅಭಿವೃದ್ಧಿ ಹಾಗೂ ವಿಷಯಾಧಾರಿತವಾಗಿ ಮಾತನಾಡೋಣ. ಇಲ್ಲಿಗೆ ಎಲ್ಲವನ್ನು ನಿಲ್ಲಿಸೋಣ" ಎಂದು ಸಾ.ರಾ.ಮಹೇಶ್ ಅವರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ ವಿಶ್ವನಾಥ್
ಯಡಿಯೂರಪ್ಪ ಸಿಎಂ ಆಗಲು ಸಿದ್ದರಾಮಯ್ಯ, ಕುಮಾರಸ್ವಾಮಿ ಕಾರಣ. ಇದನ್ನು ಸ್ವತಃ ಅವರಿಬ್ಬರೇ ಒಪ್ಪಿಕೊಂಡಿದ್ದಾರೆ. ಇದಕ್ಕೆ 17 ಜನ ಅನರ್ಹ ಶಾಸಕರು ಕಾರಣರಲ್ಲ. ನಮ್ಮ ಮೇಲೆ ಸರ್ಕಾರ ಬೀಳಿಸಿದ ಗೂಬೆ ಕೂರಿಸಿದ್ದಿರಿ ಇಷ್ಟು ದಿನ. ಈಗ ನಿಮ್ಮ ಮಾತಿನ ಮೂಲಕ ಸರ್ಕಾರ ಪತನಕ್ಕೆ ನೀವೇ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಪರಸ್ಪರ ಅಸಮಾಧಾನ ಅಪನಂಬಿಕೆಯಲ್ಲಿ ಸರ್ಕಾರ ನಡೆಸಿದವರು ನೀವು. ಅದರ ಪರಿಣಾಮ ಸರ್ಕಾರ ಪತನವಾಯಿತು. ಈಗ ನೀವು ಹದ್ದು ಗಿಣಿ ಎಂಬ ಟೀಕೆ ಮಾಡಿಕೊಳ್ಳುತ್ತಿದ್ದೀರಿ. ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಕಾರಣ ಸಿದ್ದರಾಮಯ್ಯ, ಕುಮಾರಸ್ವಾಮಿ. ಕುಮಾರಸ್ವಾಮಿಯೇ ತಮ್ಮದು ಕೆಟ್ಟ ಸರ್ಕಾರ ಎಂದು ಹೇಳಿದ್ದಾರೆ. ನಾವು ಅದನ್ನ ಹೇಳಿಯೇ ಸರ್ಕಾರದಿಂದ ಹೊರ ಬಂದಿದ್ದು. ಈಗ ಅದನ್ನು ನೀವೇ ಖಚಿತ ಪಡಿಸುತ್ತಿದ್ದೀರಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
"ನೀವು ಬ್ಲೂಬಾಯ್, ಯಾವ ಹೀರೋಯಿನ್ ಜೊತೆ ಮಾತಾಡಿದ್ದೀರಿ ಅನ್ನೋ ದಾಖಲೆ ಇದೆ"; ಸಾರಾ ಮಹೇಶ್
ಖಾತೆಗೆ ಕೈಯಾಡಿಸುತ್ತಾರೆ; ರೇವಣ್ಣಗೆ ಟಾಂಗ್
ಮಾಜಿ ಸಚಿವ ರೇವಣ್ಣರನ್ನ ಹೊಗಳುವುದರ ಜೊತೆಗೆ ವಿಶ್ವನಾಥ್ ಅವರು ಟಾಂಗ್ ಕೊಟ್ಟಿದ್ದಾರೆ. ಅವರು ಕೆಲಸ ಮಾಡುವುದರಲ್ಲಿ ದೈತ್ಯರು. ಅವರ ಕೆಲಸದ ಬಗ್ಗೆ ಯಾವುದೇ ಅನುಮಾನ ಬೇಡ. ಯಾವುದೇ ಖಾತೆ ಇದ್ದರು ಅದನ್ನ ಮಾಡುತ್ತಾರೆ. ಜೊತೆಗೆ ಎಲ್ಲಾ ಖಾತೆಗೂ ಕೈಯಾಡಿಸುತ್ತಾರೆ ಎಂದು ಕಾಲೆಳೆದಿದ್ದಾರೆ.
ಉಪಚುನಾವಣೆಗೆ ತಯಾರಿ
15 ಕ್ಷೇತ್ರಗಳಿಗೆ ಉಪಚುನಾವಣೆ ವಿಚಾರವಾಗಿ ಮಾತನಾಡಿ, ಉಪಚುನಾವಣೆಯಲ್ಲಿ ಅನರ್ಹ ಶಾಸಕರ ಸ್ಪರ್ಧೆಗೆ ಅವಕಾಶ ನೀಡಿರುವ ಆಯೋಗದ ನಿರ್ಧಾರ ಸ್ವಾಗತಾರ್ಹ. ಆದರೆ ಚುನಾವಣೆ ಮುಂದೂಡಿಕೆ ಮಾಡಿ ಎನ್ನುವುದೇ ನಮ್ಮ ಮನವಿ ಎಂದು ಹೇಳಿದರು. ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ಈಗ ನಡೆಯುತ್ತಿರುವ ಚುನಾವಣೆ ತರಾತುರಿಯಲ್ಲಿ ನಡೆಯುತ್ತಿದೆ. ಹಾಗಾಗಿ ಉಪಚುನಾವಣೆ ಈಗ ಬೇಡ ಎನ್ನುವುದು ನಮ್ಮ ಅಭಿಪ್ರಾಯ. ಅದೇನೆ ಇದ್ದರೂ ಬುಧವಾರ ಹಾಗೂ ಶುಕ್ರವಾರದವರೆಗೆ ಕಾಯಬೇಕು. ಸುಪ್ರೀಂಕೋರ್ಟ್ ತೀರ್ಮಾನದ ನಂತರ ಎಲ್ಲವು ನಿರ್ಧಾರ ಆಗಲಿದೆ. ಉಪ ಚುನಾವಣೆಗೆ ನಾನು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಹುಣಸೂರಿನ ಹಿರಿಯರು, ಮುಖಂಡರ ಜೊತೆ ಚರ್ಚೆ ಮಾಡುತ್ತೇನೆ. ಅವರ ಅಭಿಪ್ರಾಯ ಪಡೆದು ಮುಂದುವರಿಯುತ್ತೇನೆ. ಉಪಚುನಾವಣೆಗೆ ಸಮಯ ಕಡಿಮೆ ಇದೆ. ಹೀಗಾಗಿ ತಯಾರಿ ಮಾಡಿಕೊಳ್ಳಲೇಬೇಕು ಅಲ್ಲವೇ ಎಂದು ಹೇಳಿದರು.
"ಅತೃಪ್ತ ಪ್ರೇತ ತೃಪ್ತಿಪಡಿಸಲು ಯಡಿಯೂರಪ್ಪ ಯತ್ನ"; ಸಾರಾ ಮಹೇಶ್ ವ್ಯಂಗ್ಯ