ಗುಂಡ್ಲುಪೇಟೆಯಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ: ಸಾಲವಿದ್ದರೂ ಐಷಾರಾಮಿ ಜೀವನ
ಮೈಸೂರು, ಆಗಸ್ಟ್ 19 :ಆ.16ರಂದು ನಡೆದ ಮೈಸೂರು ನಿವಾಸಿ ಉದ್ಯಮಿ ಓಂಪ್ರಕಾಶ್ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಗನ್ ಮ್ಯಾನ್ ಒಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ : ಭೂಗತಲೋಕದ ಹೆಸರು ತಳುಕು
ಗುಂಡ್ಲುಪೇಟೆಯ ಊಟಿ ರಸ್ತೆಯಲ್ಲಿರುವ ಜಮೀನೊಂದರಲ್ಲಿ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಸಿಕ್ಕಿದ್ದ ಪಿಸ್ತೂಲ್ ಓಂಪ್ರಕಾಶ್ ಅವರಿಗೆ ಗನ್ಮನ್ ಆಗಿ ಕೆಲಸ ಮಾಡುತ್ತಿದ್ದ ನಾಗೇಶ್ ಎಂಬುವರಿಗೆ ಸೇರಿದ್ದು ಎಂದು ತಿಳಿದುಬಂದಿರುವುದರಿಂದ ತಕ್ಷಣ ಅವರನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಗುಂಡ್ಲುಪೇಟೆ ಸರ್ಕಲ್ ಇನ್ ಸ್ಪೆಕ್ಟರ್ ಎಚ್.ಆರ್.ಬಾಲಕೃಷ್ಣ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಓಂಪ್ರಕಾಶ್ ಬಳಿ ಗನ್ ಮ್ಯಾನ್ ಗಳಾಗಿ ಕೆಲಸ ಮಾಡುತ್ತಿದ್ದ ನಾಗೇಶ್ ಮತ್ತು ಇನ್ನಿಬ್ಬರು ಮಾಜಿ ಸೈನಿಕರಾಗಿದ್ದು, ದೃಢಕಾಯ ಹೊಂದಿದ್ದಾರೆ. ಎಲ್ಲರಿಗೂ ಗನ್ ಪರವಾನಗಿ ಮಂಜೂರಾಗಿದೆ. ಕಳೆದ 7 ತಿಂಗಳಿಂದ ಮೂವರು ಮಾಜಿ ಸೈನಿಕರು ಓಂಪ್ರಕಾಶ್ ಬಳಿ ರಕ್ಷಣಾ ಕೆಲಸ ಮಾಡುತ್ತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಬೆಲೆ ಬಾಳುವ ಶರ್ಟ್, ಪ್ಯಾಂಟ್, ಶೂಗಳನ್ನೇ ಧರಿಸುತ್ತಿದ್ದ ಓಂಪ್ರಕಾಶ್, ಐಷಾರಾಮಿ ಕಾರುಗಳಲ್ಲೇ ಸುತ್ತಿ ಗನ್ ಮ್ಯಾನ್ ಗಳೊಂದಿಗೆ ಓಡಾಡಿಕೊಂಡು ಶ್ರೀಮಂತ ಉದ್ಯಮಿಯಂತೆ ಇದ್ದರು ಎಂಬುದು ವಿಚಾರಣೆಯಿಂದ ಸ್ಪಷ್ಟವಾಗಿದೆ.
ಐವರ ಸಾಮೂಹಿಕ ಆತ್ಮಹತ್ಯೆ ಪ್ರಕರಣ: ಸಾವಿನ ಸುತ್ತ ಅನುಮಾನಗಳ ಹುತ್ತ
ಮೈಸೂರು, ಬೆಂಗಳೂರು, ಮಂಗಳೂರು ನಗರದ ಐಷಾರಾಮಿ ಸ್ಟಾರ್ ಹೋಟೆಲ್ ಗಳಲ್ಲೇ ಉಳಿದುಕೊಳ್ಳುತ್ತಿದ್ದ ಇವರು, ಸಿನೆಮಾ, ಡೇಟಾ ಬೇಸ್ ಕಂಪನಿ ಮೂಲಕ ಸಾಫ್ಟ್ ವೇರ್ ಡೆವಲಪ್ ಮಾಡುವ ಹಾಗೂ ರಿಯಲ್ ಎಸ್ಟೇಟ್ ಬಿಸಿನೆಸ್ ಮೇಲೆ 500 ಕೋಟಿ ರೂಪಾಯಿ ತೊಡಗಿಸಿದ್ದೇನೆಂದು ಹೇಳಿ ಸಣ್ಣಪುಟ್ಟ ಉದ್ಯಮಿಗಳಿಂದ ಸುಮಾರು 88 ಕೋಟಿ ರೂಗಳಷ್ಟು ಹಣ ವಸೂಲು ಮಾಡಿದ್ದಾರೆ ಎಂಬ ವಿಷಯವೂ ಪೊಲೀಸರಿಗೆ ತಿಳಿದು ಬಂದಿದೆ.
ಅಮಾಯಕರಿಂದ ಪಡೆದಿದ್ದ ಹಣವನ್ನೆಲ್ಲಾ ಓಂಪ್ರಕಾಶ್ ಉಳಿಸದೆ ಐಷಾರಾಮಿ ಜೀವನಕ್ಕಾಗಿ ಮನಸೋ ಇಚ್ಛೆ ಖರ್ಚು ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.