ಪ್ರತಾಪ್ ಸಿಂಹ ಆಗ್ರಹದಂತೆ ಜೆಎಸ್ಎಸ್ ಕಾಲೇಜು ಬಸ್ ನಿಲ್ದಾಣದ ಗುಂಬಜ್ ತೆರವು
ಮೈಸೂರು, ನವೆಂಬರ್ 27: ವಿವಾದ ಸೃಷ್ಟಿಸಿದ್ದ ಮೈಸೂರು ಜೆಎಸ್ಎಸ್ ಕಾಲೇಜು ಬಸ್ ನಿಲ್ದಾಣದಲ್ಲಿದ್ದ ಮೂರು ಗುಂಬಜ್ನಲ್ಲಿ ಎರಡು ಚಿಕ್ಕ ಗುಂಬಜ್ಗಳನ್ನು ತೆರವುಗೊಳಿಸಲಾಗಿದೆ.
ಮೈಸೂರಿನ ಊಟಿ ಮುಖ್ಯ ರಸ್ತೆಯಲ್ಲಿ ಗುಂಬಜ್ ಮಾದರಿಯ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಭಾರೀ ವಿವಾದ ಸೃಷ್ಟಿಸಿತ್ತು. ಆ ಬಳಿಕ ಬಸ್ ನಿಲ್ದಾಣಕ್ಕೆ ಜೆಎಸ್ಎಸ್ ಕಾಲೇಜ್ ಬಸ್ ನಿಲ್ದಾಣ ಎಂದು ನಾಮಫಲಕ ಅಳವಡಿಸಲಾಗಿತ್ತು.
ಶಾರೀಕ್ ಮನೆ ಮಾಲೀಕನ ವಶಕ್ಕೆ ಪಡೆದ ಪೊಲೀಸರು
ಅಲ್ಲದೇ ಫಲಕದ ಒಂದು ಬದಿಯಲ್ಲಿ ಸುತ್ತೂರು ಆದಿ ಜಗದ್ಗುರುಗಳ ಹಾಗೂ ಸುತ್ತೂರು ಶ್ರೀರಾಜೇಂದ್ರ ಸ್ವಾಮೀಜಿಗಳ ಫೋಟೋ ಹಾಕಲಾಗಿತ್ತು. ಮತ್ತೊಂದು ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೋಟೋವನ್ನು ಹಾಕಲಾಗಿತ್ತು.
"ಬಸ್ ನಿಲ್ದಾಣದಲ್ಲಿ ಗುಂಬಜ್ ಇದೆ. ಮಧ್ಯದಲ್ಲಿ ಒಂದು ದೊಡ್ಡ ಗುಂಬಜ್ ಹಾಗೂ ಅಕ್ಕಪಕ್ಕ ಎರಡು ಸಣ್ಣ ಗುಂಬಜ್ ಇದ್ದರೆ ಅದು ಮಸೀದಿಯೇ. ಹಾಗಾಗಿ ಈಗಾಗಲೇ ಅದನ್ನು ತೆರವುಗೊಳಿಸಬೇಕು. ಒಂದು ವೇಳೆ ಬಸ್ ನಿಲ್ದಾಣದಲ್ಲಿರುವ ಗುಂಬಜ್ ತೆಗೆಯದಿದ್ದರೆ ನಾನೇ ತೆರವುಗೊಳಿಸುತ್ತೇನೆ" ಎಂದು ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ಪ್ರತಾಪ್ ಸಿಂಹ
ಇದೀಗ ಸಂಸದ ಪ್ರತಾಪ್ ಸಿಂಹ ಆಗ್ರಹದಂತೆ ಜೆಎಸ್ಎಸ್ ಕಾಲೇಜು ಬಸ್ ನಿಲ್ದಾಣದಲ್ಲಿದ್ದ ಎರಡು ಚಿಕ್ಕ ಗೋಪುರಗಳನ್ನು ತೆರವುಗೊಳಿಸಲಾಗಿದೆ. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, "ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ. ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗೂ ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಅವರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಅಭಿವೃದ್ಧಿ ದೃಷ್ಟಿಯಿಂದ ಗೋಪುರ ತೆರವು ಎಂದ ರಾಮದಾಸ್
ಬಸ್ ನಿಲ್ದಾಣದ ಗುಂಬಜ್ ತೆರವು ವಿಚಾರ ಮೈಸೂರು ರಾಜಕೀಯದಲ್ಲಿ ಹೊಸ ಅಸಮಾಧಾನವನ್ನೇ ಹುಟ್ಟುಹಾಕಿತ್ತು. ಗುಂಬಜ್ ತೆರವು ವಿಚಾರದಲ್ಲಿ ಕ್ಷೇತ್ರದ ಶಾಸಕ ರಾಮದಾಸ್ ಬಹಳ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಅರಮನೆ ಮಾದರಿ ನಿರ್ಮಾಣ ನನ್ನ ಉದ್ದೇಶವಾಗಿತ್ತು. ಆದರೆ ಅನವಶ್ಯಕ ಧರ್ಮದ ಲೇಪನ ನೀಡಿದ್ದು ನನಗೆ ನೋವಾಗಿದೆ. ಹೀಗಾಗಿ ವಿವಾದಿತ ಕೇಂದ್ರವಾಗಬಾರದು ಎಂಬ ಉದ್ದೇಶದಿಂದ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಗುಂಬಜ್ ತೆರವುಗೊಳಿಸಿರುವುದಾಗಿ ರಾಮದಾಸ್ ಸ್ಪಷ್ಟನೆ ನೀಡಿದ್ದಾರೆ.
ಪ್ರತಾಪ್ ಸಿಂಹ ಆರೋಪಕ್ಕೆ ಶಾಸಕ ರಾಮದಾಸ್ ಸ್ಪಷ್ಟನೆ
ಇನ್ನು ಈ ಬಗ್ಗೆ ಈ ಹಿಂದೆ ಮಾತನಾಡಿದ್ದ ಶಾಸಕ ರಾಮದಾಸ್, ಮೈಸೂರು ಪಾರಂಪರಿಕ ನಗರಿ. ಇದರ ಮಹತ್ವವನ್ನು ಸಾರುವ ದೃಷ್ಟಿಯಲ್ಲಿ ಬಸ್ ತಂಗುದಾಣಗಳನ್ನು ಅರಮನೆ ಮಾದರಿಯಲ್ಲಿ ನಿರ್ಮಿಸಲು ತೀರ್ಮಾನಿಸಿ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ವಿವಿಧ ವಿನ್ಯಾಸಗಳಲ್ಲಿ ಶಾಸಕರ ಅನುದಾನದಲ್ಲಿ 10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದರು.
ಬೆಂಗಳೂರು-ನೀಲಗಿರಿ ರಸ್ತೆಯಲ್ಲಿ (ಊಟಿ ರಸ್ತೆ) ಬರುವ ವಾರ್ಡ್ ನಂ 54 ರ ವ್ಯಾಪ್ತಿಗೆ ಬರುವ ಬಸ್ ನಿಲ್ದಾಣವನ್ನು ಅರಮನೆ ಮಾದರಿಯಲ್ಲಿ ವಿನ್ಯಾಸ ಮಾಡಿ ಕಾಮಗಾರಿ ನಡೆಸಲಾಗಿತ್ತು. ಮೈಸೂರಿನ ಪಾರಂಪರಿಕತೆಯನ್ನು ತೋರಿಸುವ ದೃಷ್ಟಿಯಲ್ಲಿ, ಅರಮನೆಯ ಮಾದರಿಯಲ್ಲಿ ಇರುವ ಈ ಬಸ್ ತಂಗುದಾಣವನ್ನು ತಪ್ಪಾಗಿ ಅರ್ಥೈಸಿ ಸಾಮಾಜಿಕ ಜಾಲತಾಣಗಳಲ್ಲಿ ಮಸೀದಿ ರೀತಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಹಾಗೂ ಈ ಕಾಮಗಾರಿಯ ಗುತ್ತಿಗೆಗಾರ ಒಬ್ಬ ಮುಸ್ಲಿಂ ಇವನು ಮಸೀದಿ ರೀತಿಯಲ್ಲಿ ಕಾಮಗಾರಿ ಮಾಡಿರುತ್ತಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸುವ ಹುನ್ನಾರ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ನಷ್ಟದ ಹಣವನ್ನು ನನ್ನ ಸಂಬಳದಿಂದ ಭರಿಸುತ್ತೇನೆ: ರಾಮದಾಸ್
ನಾನು 30 ವರ್ಷದ ಹಿಂದೆ ರಾಜಕೀಯಕ್ಕೆ ಬಂದಾಗ 11 ಜನ ಬಿಜೆಪಿ ಶಾಸಕರು ಇದ್ದರು. ಇದೀಗ ಹಲವು ಕಿರುಕುಳದಿಂದ 10 ಜನ ಪಕ್ಷ ಬಿಟ್ಟಿದ್ದಾರೆ. ಉಳಿದಿರುವವನು ನಾನೊಬ್ಬನೇ. ನನ್ನನ್ನು ಪಕ್ಷದಿಂದ ಬಿಡಿಸುವ ಹುನ್ನಾರ ನಡೆಯುತ್ತಿದೆ. ನನ್ನನ್ನು ದಯಮಾಡಿ ಬಿಟ್ಟು ಬಿಡಿ. ನಾನು ಈ ವಿಚಾರದಲ್ಲಿ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ನಷ್ಟದ ಹಣವನ್ನು ನನ್ನ ಸಂಬಳದಿಂದ ಭರಿಸುತ್ತೇನೆ. ದಯಮಾಡಿ ನನ್ನನ್ನು ಬಿಟ್ಟು ಎಂದು ಕೈ ಮುಗಿದು ಮನವಿ ಮಾಡಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪ್ರತಾಪ್ ಸಿಂಹ, ರಾಮದಾಸ್ ಅವರಿಗೆ ಕಿರುಕುಳ ಕೊಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಬಸ್ ನಿಲ್ದಾಣದಲ್ಲಿದ್ದ ಗುಂಬಜ್ ತೆರವು ಮಾಡುವುದರಿಂದ ಹಿಂದೆ ಸರಿವ ಮಾತೇ ಇಲ್ಲ ಎಂದು ಗುಡುಗಿದ್ದರು.