ಜು.25ರವರೆಗೆ ಅರಮನೆ ನಗರಿಯಲ್ಲಿ ಗುಜರಾತ್ ಕರಕುಶಲ ಉತ್ಸವ
ಮೈಸೂರು, ಜುಲೈ 20: ಮೈಸೂರಿನಲ್ಲಿ ಗುಜರಾತಿನ ಕುಶಲ ಕಲಾ ವಸ್ತುಗಳನ್ನು ಖರೀದಿಸಬೇಕೆನ್ನುವವರಿಗೆ ಸದಾವಕಾಶವೊಂದು ಒದಗಿ ಬಂದಿದೆ. ಜೆಎಸ್ಎಸ್ ಮಹಾವಿದ್ಯಾಪೀಠದ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ನಲ್ಲಿ 6ನೇ ಬಾರಿಗೆ ಗುಜರಾತ್ ಕರಕುಶಲ ಉತ್ಸವ ನಡೆಯುತ್ತಿದ್ದು, ಕುಶಲ ಕಲಾ ಪ್ರೇಮಿಗಳಿಗೊಂದು ವರದಾನವಾಗಿದೆ.
ಎಂಟು ದಿನಗಳ ಉತ್ಸವ
ಜುಲೈ 18 ರಿಂದ ಆರಂಭವಾಗಿದ್ದು, ಜು.25ರವರೆಗೆ ನಡೆಯಲಿರುವ ಈ ಉತ್ಸವ ಭಾರತ ದೇಶದ ಪ್ರಾಂತೀಯ ಮೇಳವಾಗಿದೆ. ಗುಜರಾತ್ ರಾಜ್ಯದ ವಿವಿಧ ಭಾಗಗಳ ಪ್ರಸಿದ್ಧ ಹಾಗೂ ಕ್ರೀಯಾ ಶೀಲರಾಗಿರುವ ಸುಮಾರು 50ಕ್ಕೂ ಹೆಚ್ಚು ಕುಶಲಕರ್ಮಿಗಳು ಮೇಳದಲ್ಲಿ ಭಾಗವಹಿಸಲಿದ್ದಾರೆ ಎನ್ನುವುದು ವಿಶೇಷವಾಗಿದೆ.
ಆಕರ್ಷಣೀಯ ಕರಕುಶಲ ವಸ್ತುಗಳು
ಉತ್ಸವದಲ್ಲಿ ಕುಶಲಕರ್ಮಿಗಳು ತಯಾರಿಸಿದ ಪಟೋಲ ಸೀರೆಗಳು, ಬಾಂದಿನಿ ಸೀರೆಗಳು, ಕಸೂತಿ ಮಾಡಿದ ಬೆಡ್ಶೀಟ್ಗಳು, ಟವಲ್ಗಳು, ಕುಶನ್ ಕವರ್ಗಳು, ಪರಿಸರ ಸ್ನೇಹಿ ಆಭರಣಗಳು, ಡ್ರೆಸ್ ಮೆಟೀರಿಯಲ್ಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಬೀಡ್ ವರ್ಕ್, ಮೆಟಲ್ ವರ್ಕ್, ಕುರ್ತಿಗಳು, ಚನಿಯಾ ಚೋಲಿ, ಬಾಂದಿನಿ ಹಾಗೂ ಇನ್ನಿತರ ಆಕರ್ಷಣೀಯ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳಿವೆ.
ಮೇಳದ ಇನ್ನೊಂದು ವಿಶೇಷ ಏನೆಂದರೆ, ತಯಾರಕರಿಂದಲೇ ನೇರವಾಗಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಒದಗಿಸಲಾಗುತ್ತಿದೆ. ಈ ಕಾರಣದಿಂದಾಗಿ ಮೈಸೂರು ಹಾಗೂ ಸುತ್ತಮುತ್ತಲಿನ ಗ್ರಾಹಕರಿಗೆ ಗುಜರಾತ್ ಸಂಸ್ಕೃತಿಯ ಉಡುಗೆ- ತೊಡುಗೆಗಳು ಮತ್ತು ಅಲಂಕಾರಿಕ ವಸ್ತುಗಳು ನೇರವಾಗಿ, ಉತ್ತಮ ಗುಣಮಟ್ಟದಲ್ಲಿ ಲಭಿಸಲಿವೆ.
ಗುಜರಾತಿನ ಖಾದ್ಯ ಸವಿಯಲು ಅವಕಾಶ
ಇಷ್ಟೇ ಅಲ್ಲದೆ, ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಕಾರ್ಪೋರೇಟ್ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಆಸಕ್ತಿಯುಳ್ಳವರಿಗೆ ಗುಜರಾತಿನ ಪಾರಂಪರಿಕ ಕಲೆಯ ಬಗ್ಗೆ ತರಬೇತಿಯನ್ನು ಗುಜರಾತಿನ ಕುಶಲಕರ್ಮಿಗಳು ನೀಡಲಿದ್ದಾರೆ. ಇಷ್ಟೇ ಅಲ್ಲದೆ ಗುಜರಾತಿನ ಪ್ರಸಿದ್ಧ ರುಚಿಕರವಾದ ಖಾದ್ಯಗಳು, ಸಿಹಿ ತಿಂಡಿಗಳನ್ನು ಸವಿಯುವ ಅವಕಾಶವನ್ನು ಮಾಡಿಕೊಡಲಾಗುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮೈಸೂರು ನಗರ ಬಸ್ ನಿಲ್ದಾಣದಿಂದ ಪ್ರತಿ ನಿತ್ಯ ಬಸ್ ನಂ.117/1ರ ಬಸ್ಸು ಸೌಲಭ್ಯ ಇಲ್ಲಿಗಿದೆ.