ಮೈಸೂರು: ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಸ್ಥಾಪಿಸಲು ಸಿಎಂಗೆ ಮನವಿ
ಮೈಸೂರು, ಮಾರ್ಚ್ 2: ಮೈಸೂರು ನಗರಕ್ಕೆ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿ ಸಿಎಂ ಬಿ.ಎಸ್ ಯಡಿಯೂರಪ್ಪನವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ರಸ್ತೆ, ರೈಲು ಹಾಗೂ ವಿಮಾನಯಾನಗಳಿಗೆ ಇತ್ತೀಚಿಗೆ ಮೈಸೂರು ಗಣನೀಯವಾಗಿ ಹತ್ತು ಹಲವು ಯೋಜನೆಗಳ ಮೂಲಕ ಅಭಿವೃದ್ಧಿ ಹೊಂದುತ್ತಿದ್ದು, ಈ ಹಿನ್ನೆಲೆ ಮೈಸೂರು ನಗರಕ್ಕೆ ಅಗತ್ಯವಾಗಿ ಸಮರ್ಪಕ ಕುಡಿಯುವ ನೀರಿನ ಸೌಕರ್ಯ ಹಾಗೂ ಉತ್ತಮ ವ್ಯವಸ್ಥೆಯ ಒಳ ಚರಂಡಿ ಸ್ಥಾಪಿಸುವ ಬಗ್ಗೆ ಜಿಟಿಡಿ ಪತ್ರ ಬರೆದಿದ್ದಾರೆ.
ಮೈಸೂರಿಗೆ ಶೀಘ್ರವೇ ಬರಲಿದೆ ಹೆಲಿ ಟೂರಿಸಂ
ರಾಜಧಾನಿ ಬೆಂಗಳೂರನ್ನು ಹೊರತುಪಡಿಸಿ ಮೈಸೂರು ರಾಜ್ಯದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಎರಡನೇ ನಗರವಾಗಿದ್ದು, ಕೂಡಲೇ ಮೈಸೂರಿಗೆ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಸ್ಥಾಪಿಸುವಂತೆ ಮುಖ್ಯಮಂತ್ರಿಗೆ ಶಾಸಕ ಜಿ.ಟಿ ದೇವೇಗೌಡ ಅವರು ಮನವಿ ಸಲ್ಲಿಸಿದ್ದಾರೆ.
""ದಿನದಿಂದ ದಿನಕ್ಕೆ ಮೈಸೂರು ವಿಸ್ತಾರಗೊಳ್ಳುತ್ತಿದ್ದು, ಭವಿಷ್ಯದ ಹಿತದೃಷ್ಟಿಯಿಂದ ಈಗಲೇ ಪ್ರತ್ಯೇಕ ಜಲಮಂಡಳಿ ಸ್ಥಾಪಿಸುವಂತೆ ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಮೈಸೂರು ನಗರಕ್ಕೆ ನಾಲ್ಕು ಕಡೆಯಿಂದ ನೀರು ಸರಬರಾಜು ಮಾಡಲಾಗುತ್ತಿದ್ದರೂ, ನೀರಿನ ಕೊರತೆ ತಪ್ಪಿಲ್ಲ'' ಎಂದು ಉಲ್ಲೇಖಿಸಿದ್ದಾರೆ.
""ಮೈಸೂರು ನಗರದ ಹೊರವಲಯದಲ್ಲಿ ನೀರಿಗಾಗಿ ಬೋರ್ ಕೊರೆಯುವುದು ತೀರಾ ಸಾಮಾನ್ಯವಾಗಿದೆ. ಮೈಸೂರು ನಗರದ ಹೊರವಲಯದಲ್ಲಿರೋ ಅನೇಕ ಹೊಸ ಬಡಾವಣೆಗಳಿಗೆ ಕಾವೇರಿ, ಕಪಿಲಾ ನದಿಯ ನೀರು ಸಿಗುತ್ತಿಲ್ಲ. ಬೋರ್ ವೆಲ್ ತೆಗೆಯುತ್ತಿರುವುದರಿಂದ ಅಂತರ್ಜಲ ಕುಸಿಯುವ ಸಾಧ್ಯತೆ ಇದೆ'' ಎಂದಿದ್ದಾರೆ.
ಬೋರ್ ವೆಲ್ ನೀರು ಕುಡಿಯುತ್ತಿರುವ ಜನರು ಅನೇಕ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಸ್ಥಾಪಿಸುವಂತೆ ಸಿಎಂ ಯಡಿಯೂರಪ್ಪಗೆ ಶಾಸಕ ಜಿಟಿಡಿ ಒತ್ತಾಯಿಸಿದ್ದಾರೆ.