ಶೌಚಾಲಯ ನಿರ್ವಹಿಸದಿದ್ದಕ್ಕೆ ಇಬ್ಬರನ್ನು ಸ್ಥಳದಲ್ಲೇ ಸಸ್ಪೆಂಡ್ ಮಾಡಿದ ಜಿಟಿಡಿ
Recommended Video
ಮೈಸೂರು, ಜುಲೈ 3: ಮೈಸೂರು ನಗರದ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ವೇಳೆ, ಶೌಚಾಲಯದ ಸ್ವಚ್ಛತೆ ಕಾಪಾಡದ ಹಿನ್ನೆಲೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಇಂಜಿನಿಯರ್ ಹಾಗೂ ಟೆಂಡರ್ ದಾರರನ್ನು ಅಮಾನತುಗೊಳಿಸುವಂತೆ ಸ್ಥಳದಲ್ಲೇ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಕಾಮಗಾರಿ ವೀಕ್ಷಣೆ ವೇಳೆ ಕಾಲು ಜಾರಿದ ಸಚಿವ ಜಿ.ಟಿ. ದೇವೇಗೌಡ
ಮೈಸೂರಿನ ಸಬರ್ಬ್ ಬಸ್ ನಿಲ್ದಾಣದ ಮುಂಭಾಗವಿರುವ ಶೌಚಾಲಯಕ್ಕೆ ಸಚಿವ ಜಿ.ಟಿ. ದೇವೇಗೌಡ ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಶೌಚಾಲಯ ಗಬ್ಬೆದ್ದು ನಾರುತ್ತಿತ್ತು. ಇದನ್ನು ಕಂಡು ಗರಂ ಆದ ಅವರು, ಶೌಚಾಲಯವನ್ನು ಕ್ಲೀನ್ ಮಾಡ್ತಿರೋದು ಯಾರು? ಇದನ್ನು ದಿನವೂ ಕ್ಲೀನ್ ಮಾಡೋರಿಲ್ವಾ? ಯಾರು ಟೆಂಡರ್ ತಗೊಂಡಿರೋದು? ಹೆಚ್ಚು ಜನ ಓಡಾಡುವ ಜಾಗ ಇದು, ಇದನ್ನು ಹೀಗಾ ಇಟ್ಟುಕೊಳ್ಳೋದು? ಎಂದು ಅಧಿಕಾರಿಗಳ ಮೇಲೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ಹಾಗೆಯೇ, ಇದರ ಇಂಜಿನಿಯರ್ ಹಾಗೂ ಟೆಂಡರ್ ದಾರರು ಯಾರು? ಕೂಡಲೇ ಅವರಿಬ್ಬರನ್ನೂ ಸಸ್ಪೆಂಡ್ ಮಾಡಿ ಎಂದು ಅಲ್ಲೇ ಇದ್ದ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಗೆ ಸಚಿವ ಜಿ.ಟಿ ದೇವೇಗೌಡ ಖಡಕ್ ಸೂಚನೆ ನೀಡಿದರು. ಪಕ್ಕದಲ್ಲೇ ಇದ್ದ ಶಾಸಕ ನಾಗೇಂದ್ರ ಸಹ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.