Breaking: ಜೆಡಿಎಸ್ ತೊರೆಯುವ ಬಗ್ಗೆ ಜಿಟಿಡಿ ಅಧಿಕೃತ ಘೋಷಣೆ
ಮೈಸೂರು, ಆಗಸ್ಟ್ 24: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರು ಜೆಡಿಎಸ್ ಪಕ್ಷ ತೊರೆಯುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಜಿಟಿಡಿ, "ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಳಿ ಮುಂದಿನ ರಾಜಕೀಯ ಬೆಳವಣಿಗೆ ಕುರಿತಂತೆ ವಿವರಣೆ ನೀಡಿದ್ದೇನೆ," ಎಂದರು.
"ನನ್ನನ್ನು ಕ್ಷಮಿಸಿ ಅಪ್ಪಾಜಿ, ನಾನು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಜೊತೆ ಮಾತನಾಡಿದ್ದೇನೆ. ನನಗೆ ಹಾಗೂ ನನ್ನ ಮಗನಿಗೂ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಡವುದಾಗಿ ಇಬ್ಬರೂ ಭರವಸೆ ನೀಡಿದ್ದಾರೆ. ಇದರಿಂದ ಇಬ್ಬರಿಗೂ ಟಿಕೆಟ್ ದೊರೆಯುವ ವಿಶ್ವಾಸವಿದೆ. ನೀನು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಈ ಅವಧಿ ತನಕ ನಾನು ಜೆಡಿಎಸ್ ಪಕ್ಷದಲ್ಲಿ ಇರುತ್ತೇನೆ," ಎಂದು ಜಿ.ಟಿ.ದೇವೇಗೌಡರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರಿಗೆ ಜೆಡಿಎಸ್ ತೊರೆಯುತ್ತಿರುವ ವಿಚಾರವನ್ನು ತಿಳಿಸಿದ್ದಾರೆ.
ಅಲ್ಲದೇ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ವಿರುದ್ಧ ಹರಿಹಾಯ್ದ ಜಿ.ಟಿ. ದೇವೇಗೌಡ, "ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಾ.ರಾ. ಮಹೇಶ್ ಒಟ್ಟಾಗಿ ಇದ್ದರೆ ಮಾತ್ರ ಸಾ.ರಾ ಮಹೇಶ್ ಹೀರೋ, ಒಂದೊಮ್ಮೆ ಕುಮಾರಸ್ವಾಮಿ ಇಲ್ಲದಿದ್ದರೆ, ಸಾ.ರಾ.ಮಹೇಶ್ ಝೀರೋ," ಎಂದು ಲೇವಡಿ ಮಾಡಿದರು.
ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಜಿ.ಟಿ. ದೇವೇಗೌಡ, "ಮುತ್ತು ಕೊಡೋಳು ಬಂದಾಗ, ತುತ್ತು ಕೊಟ್ಟೋಳ ಮರೀಬೇಡ ಎನ್ನುತ್ತಾರೆ, ಆದರೀಗ ಏನಾಗುತ್ತಿದೆ. ನನ್ನನ್ನು ಜಿಲ್ಲಾ ಮಂತ್ರಿಯನ್ನಾಗಿ ಮಾಡುವುದಾಗಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನೀಡಿದ್ದ ಭರವಸೆಯೂ ಹುಸಿಯಾಯಿತು. ಈ ವಿಚಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದ ಬಳಿಕ ಸೌಜನ್ಯಕ್ಕೂ ನನ್ನನ್ನು ಕರೆಸಿಕೊಂಡು ಮಾತನಾಡಿ ಸಮಾಧಾನ ಪಡಿಸಲಿಲ್ಲ. ಅಂದು ನಾನು ಬಹಳ ದುಃಖದಿಂದ ಬಂದರೂ ಮುಂದಿನ ದಿನಗಳಲ್ಲಿ ಪಕ್ಷ ಕಟ್ಟುವ ಕೆಲಸ ಮಾಡಿದ್ದೇನೆ,'' ಎಂದರು.
"ಅಲ್ಲದೇ ಇತ್ತೀಚೆಗೆ ಹರೀಶ್ ಗೌಡ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ಆಯ್ಕೆಯಾದಾಗ ಕುಮಾರಸ್ವಾಮಿ ಭೇಟಿ ಮಾಡಿ ಆಶೀರ್ವಾದ ಪಡೆದುಕೊಳ್ಳಲು ಸೂಚಿಸಿದೆ. ಆಶೀರ್ವಾದ ಪಡೆಯಲು ಹೋದ ಹರೀಶ್ ಗೌಡ ಜೊತೆ ಕುಮಾರಸ್ವಾಮಿ ಸರಿಯಾಗಿ ಸ್ಪಂದಿಸಿಲ್ಲ. ಕಳೆದ ಮೇಯರ್ ಚುನಾವಣೆ ವೇಳೆ ನಿನ್ನ ಪತ್ನಿ ಮೇಯರ್ ಆಗಬೇಕಾದರೆ ನೀನು ಅವರ ಜೊತೆಯಲ್ಲೇ ಇರುವುದು ಒಳಿತು," ಎಂದು ಮಾದೇಗೌಡಗೆ ಹೇಳಿದ್ದೆ.
"ಆದರೆ ಮೇಯರ್ ಚುನಾವಣೆ ಪ್ರಕ್ರಿಯೆಗೆ ನನ್ನನ್ನು ಕರೆಯಲಿಲ್ಲ. ಮೇಯರ್ ಚುನಾವಣೆ ಮುಗಿದ ಮರುದಿನ ತಂದೆ ಸಮಾನರಾಗಿದ್ದ ಜಿಟಿಡಿ ಅವರು ಬರಲಿಲ್ಲ ಎಂದು ಮಾದೇಗೌಡ ಹೇಳಿದ್ದು ಅಪಾರ ನೋವುಂಟು ಮಾಡಿತು ಎಂದು ಬೇಸರ ವ್ಯಕ್ತಪಡಿಸಿದ ಅವರು, ನಾಳೆ ನಡೆಯುವ ಮೇಯರ್ ಚುನಾವಣೆಯಲ್ಲಿ ನಾನು ಭಾಗಿಯಾಗಬೇಕೊ ಅಥವಾ ಬೇಡವೋ ಅಂತ ತೀರ್ಮಾನ ಮಾಡಿಲ್ಲ," ಎಂದು ಜಿಟಿಡಿ ಸ್ಪಷ್ಟಪಡಿಸಿದ್ದಾರೆ.
"ಅಲ್ಲದೇ, ನಾನು ಯಾವುದೇ ಪಕ್ಷದಲ್ಲಿದ್ದಾಗಲೂ ಆ ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಂಡಿಲ್ಲ. ಆದರೆ ಕುಮಾರಸ್ವಾಮಿ ಕಳೆದ ಮೈಸೂರು ಮೇಯರ್ ಚುನಾವಣೆಯಲ್ಲಿ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ನನ್ನ ಮಾತು ನಡವಳಿಕೆ ವರ್ತನೆ ಕಠಿಣವಾಗಿದ್ದು, ನನ್ನ ಮನಸ್ಸಿಗೆ ಬಂದಿದ್ದನ್ನು ನೇರವಾಗಿ ಮಾತನಾಡುತ್ತೇನೆ. ಅದನ್ನು ಅವರಿಗೆ ಸಹಿಸಿಕೊಳ್ಳಲು ಆಗೋದಿಲ್ಲ ಅನಿಸುತ್ತದೆ. ಆ ನಂತರದ ದಿನಗಳಲ್ಲಿ ನನ್ನಿಂದ ದೂರವಾಗಿದ್ದವರ ಪೈಕಿ ಒಬ್ಬರನ್ನು ಮೇಯರ್ ಮಾಡಲಾಯಿತು. ಆ ಬಳಿಕ ನಡೆದ ಜೆಡಿಎಸ್ ಯಾವುದೇ ಸಭೆ ಸಮಾರಂಭಗಳಿಗೂ ನನ್ನನ್ನು ಕರೆಯಲಿಲ್ಲ. ನಾನು ಜೆಡಿಎಸ್ ಬಿಡದಿದ್ದರೂ ಕರೆದಿಲ್ಲ, ಕರೆದು ಮಾತನಾಡಿಲ್ಲ," ಎಂದು ಅಸಮಾಧಾನ ಹೊರಹಾಕಿದರು.
"ಇಷ್ಟೆಲ್ಲದರ ಜೊತೆಗೆ ನನ್ನನ್ನು ಜಿಲ್ಲಾಧ್ಯಕ್ಷನನ್ನಾಗಿ ಮಾಡುವಂತೆ ಎಂದು ನಿಯೋಗ ತೆರಳಿತ್ತು. ಆಗ ಸಾ.ರಾ. ಮಹೇಶ್ರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡುವಂತೆ ಎಚ್ಡಿಕೆ ಹೇಳಿದ್ದಾರೆ. ನಾನು ಯಾವುದೇ ಹುದ್ದೆ ಕೇಳದಿದ್ದರೂ ಅಂದು ನನಗೆ ಅಪಮಾನ ಮಾಡಿದ್ದಾರೆ."
"ಕಳೆದ ನಗರಪಾಲಿಕೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಕರೆ ಮಾಡಿ ಮಾತನಾಡಿದ ವೇಳೆ ಬಳಸಿದ ಭಾಷೆ ಹೇಳಲಾಗುವುದಿಲ್ಲ. ಆಗಲೂ ಅವರಿಗೆ ಅಂತಹ ಭಾಷೆ ಬಳಸಬೇಡಿ ಎಂದು ಹೇಳಿದೇನೇ ಹೊರತು, ಬೇರೇನು ಹೇಳಲಿಲ್ಲ."
"ಕಳೆದ ಪಾಲಿಕೆ ಚುನಾವಣೆಯಲ್ಲಿ ಸಾ.ರಾ. ಮಹೇಶ್ ಒಂದು ದಿನವೂ ಪ್ರಚಾರಕ್ಕೆ ಬರಲಿಲ್ಲ, ಎಚ್ಡಿಕೆ ಜೊತೆ ಒಂದು ದಿನ ಮಾತ್ರ ನೆಪ ಮಾತ್ರಕ್ಕೆ ಸಾ.ರಾ. ಮಹೇಶ್ ಪ್ರಚಾರ ಮಾಡಿದರು. ಆದರೆ ನಾನು ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು ಚುನಾವಣೆ ಪ್ರಚಾರ ಮಾಡಿದ್ದೇನೆ."
Recommended Video
"ಈ ವೇಳೆ ನಿಮಗೆ ರಾಜಕೀಯ ಬಿಟ್ಟರೆ ಬೇರೇನೂ ಗತಿಯಿಲ್ಲ ಎಂದು ಸಾ. ರಾ. ಮಹೇಶ್ ಹೇಳಿದರು. ಆಗ ಎಚ್. ಡಿ. ದೇವೇಗೌಡರು ಸಾರಾಗೆ ಬೈದಿದ್ದರೂ, ಇಷ್ಟೆಲ್ಲಾ ಆದರೂ ನಾನು ಒಂದು ಎಲ್ಲಾ ಚುನಾವಣೆಯಲ್ಲಿ ಜೆಡಿಎಸ್ ಪರ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ," ಎಂದು ಶಾಸಕ ಜಿ. ಟಿ. ದೇವೇಗೌಡ ಹೇಳಿದರು.