ಮೂಡಾ ಅಧಿಕಾರಿಗಳ ಎಡವಟ್ಟಿಗೆ ಪೇಚಿಗೆ ಸಿಲುಕಿದ ಸಚಿವ ಜಿಟಿ ದೇವೇಗೌಡ!
ಮೈಸೂರು, ಫೆಬ್ರವರಿ 5:ಮೂಡಾ ಅಭಿವೃದ್ಧಿಪಡಿಸಲು ಉದ್ದೇಶಿಸಿ ಬಹುನಿರೀಕ್ಷಿತ 'ಬಲ್ಲಹಳ್ಳಿ ಬಡಾವಣೆ ಯೋಜನೆ'ಗೆ ಭೂಮಿ ನೀಡುವ ಸಂಬಂಧ ರೈತರಿಂದ ಪರ ಹಾಗೂ ವಿರುದ್ಧ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬಲ್ಲಹಳ್ಳಿ ಗ್ರಾಮದಲ್ಲಿ ನಡೆದ ಸಭೆ ತೀವ್ರ ಗೊಂದಲದಲ್ಲಿ ಕೊನೆಗೊಂಡಿತು.
ಇದರಿಂದ ಮುಜುಗರಕ್ಕೀಡಾಗಿ ಮುಡಾ ಆಯುಕ್ತ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡ ಸಭೆಯ ಅರ್ಧಕ್ಕೇ ವೇದಿಕೆಯಿಂದ ಹೊರನಡೆದರು.
ಲೋಕಸಭಾ ಚುನಾವಣೆಗೆ ದೇವೇಗೌಡರ ಸ್ಪರ್ಧೆ ಬಗ್ಗೆ ಜಿಟಿಡಿ ಪ್ರತಿಕ್ರಿಯೆ
ಬಡಾವಣೆಗೆ 50:50 ಅನುಪಾತದಲ್ಲಿ ಅಗತ್ಯವಿರುವ ಭೂಮಿಯನ್ನು ಪಡೆಯಲು ಮೂಡಾ ಬಲ್ಲಹಳ್ಳಿ ಗ್ರಾಮದಲ್ಲಿ ಸಭೆ ಏರ್ಪಡಿಸಿ, ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಿತ್ತು.
"ಈಗಾಗಲೇ ರೈತರೊಂದಿಗೆ 4 ಬಾರಿ ಸಭೆ ನಡೆಸಿ ಚರ್ಚಿಸಿದ್ದೇವೆ. ಭೂಮಿ ನೀಡಲು ಬಹುತೇಕ ಭೂ ಮಾಲೀಕರು ಸಮ್ಮತಿಸಿದ್ದಾರೆ. ನೀವು ಬಂದು ಗೊಂದಲ ನಿವಾರಿಸಿದಲ್ಲಿ ಉಳಿದವರು ಒಪ್ಪಿಕೊಳ್ಳುತ್ತಾರೆ. ನೀವು ಹೇಳಿದರೆ ಅಲ್ಲಿಯ ಜನ ಸಂಪೂರ್ಣ ಸಹಕಾರ ನೀಡುತ್ತಾರೆ" ಎಂದು ಮುಡಾ ಆಯುಕ್ತ ಕಾಂತರಾಜು ಹೇಳಿದ್ದರಿಂದ, ಸಚಿವರು ಸಭೆಗೆ ಆಗಮಿಸಿದ್ದರು.
ಆದರೆ ಸಭೆಯಲ್ಲಿ ಆಯುಕ್ತರು ವಿಷಯ ಪ್ರಸ್ತಾಪಿಸುತ್ತಿದ್ದಂತೆ ಕೆಲವರು ಆಕ್ಷೇಪಿಸಿ ತಾವು ಭೂಮಿ ನೀಡುವುದಿಲ್ಲ ಎಂದು ತಕರಾರು ತೆಗೆದರೆ, ಮತ್ತೊಂದು ಗುಂಪು ನಮಗೆ ಯೋಜನೆಯಿಂದ ಆರ್ಥಿಕ ಅನುಕೂಲವಾಗುತ್ತದೆ. ಜೊತೆಗೆ ಗ್ರಾಮದ ಅಭಿವೃದ್ಧಿಯಾಗುವುದರಿಂದ ಜಮೀನು ನೀಡುತ್ತೇವೆ ಎಂದರು.
ಬಿಜೆಪಿಯವರು ಹರಾಜು ಪ್ರಕ್ರಿಯೆ ನಡೆಸುತ್ತಿದ್ದಾರೆ:ಸಚಿವ ಜಿಟಿ ದೇವೇಗೌಡ
ಗೊಂದಲದ ನಡುವೆ ಆಯುಕ್ತರು ಮಾತು ಮುಗಿಸಿ, ನಗರ ಯೋಜಕ ಸದಸ್ಯರು ಈ ಕುರಿತಾಗಿ ಮಾತು ಆರಂಭಿಸಿದರು. ಪರಿಸ್ಥಿತಿ ಗಂಭೀರ ಸ್ವರೂಪ ತಾಳುತ್ತಿದ್ದರಿಂದ ಸಚಿವ ಜಿಟಿಡಿ ಮಧ್ಯಪ್ರವೇಶಿಸಿ "ಮುಡಾ ಆಯುಕ್ತರು ನನ್ನನ್ನು ಕರೆದಿದ್ದರಿಂದ ನಾನು ಬಂದಿದ್ದೇನೆಯೇ ಹೊರತು ಬಲವಂತವಾಗಿ ನಿಮ್ಮ ಜಮೀನು ಕಿತ್ತುಕೊಳ್ಳಲಾಗದು" ಎಂದರು.
ಸಚಿವ ಜಿಟಿಡಿ ಮಾತನಾಡುತ್ತಿರುವಾಗಲೇ ಕೆಲವರು ನಮ್ಮೊಂದಿಗೆ ಮುಡಾ ಅಧಿಕಾರಿಗಳು ಯಾರೂ ಮಾತನಾಡಿಲ್ಲ. ನಾವು ಭೂಮಿ ಕೊಡಲು ಸಮ್ಮತಿಸಿಯೂ ಇಲ್ಲ. ನಮಗಿರುವುದು ಕಡಿಮೆ ಜಮೀನು. ನಾವು ಈ ಭೂಮಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದೇವೆ. ಅದನ್ನು ಕೊಟ್ಟು ನಾವು ಬೇರೆ ಯಾವ ಕಸುಬು ಮಾಡುವುದು? ಎಂದು ಪ್ರಶ್ನಿಸಿದರು. ಇದರಿಂದ ಕೆರಳಿದ ಜಿಟಿಡಿ ಮುಡಾ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.
ಇದೊಂದು ಚುನಾವಣಾ ಪೂರ್ವ ಬಜೆಟ್: ಸಚಿವ ಜಿಟಿ ದೇವೇಗೌಡ
ಇಷ್ಟೆಲ್ಲಾ ಆದರೂ ವಿರೋಧ ವ್ಯಕ್ತಪಡಿಸಿದ ಕಾರಣ ಕೋಪಗೊಂಡ ಸಚಿವರು, ಮೂಡಾ ಆಯುಕ್ತರು ಮಾಡಿದ ಅವಾಂತರದಿಂದ ಕೋಪಗೊಂಡು ಕಡೆಗೆ ಮೈಕ್ ಎಸೆದು ವೇದಿಕೆಯಿಂದ ಇಳಿದು ಕಾರು ಏರಿ ಹೊರಟೇ ಬಿಟ್ಟರು. ಪರಿಣಾಮ ರೈತರೊಂದಿಗಿನ ಸಂಧಾನ ಸಭೆ ಅಪೂರ್ಣಗೊಂಡಿತು.