ಜೆಡಿಎಸ್ ತೊರೆದು, ಪಕ್ಷೇತರವಾಗಿ ಸ್ಪರ್ಧಿಸುವ ಸುಳಿವು ಕೊಟ್ಟ ಜಿ.ಟಿ. ದೇವೇಗೌಡ
ಮೈಸೂರು, ಜುಲೈ 12: ಈಗಾಗಲೇ ಪಕ್ಷದ ಸಭೆ, ಸಮಾರಂಭ ಸೇರಿದಂತೆ ಹಲವು ವಿಷಯಗಳಿಂದ ದೂರ ಉಳಿದಿರುವ ಚಾಮುಂಡೇಶ್ಚರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ, ಜೆಡಿಎಸ್ ತೊರೆಯುವುದು ಬಹುತೇಕ ಖಚಿತವಾಗಿದೆ.
ಕಳೆದ ಎರಡು ವರ್ಷಗಳಿಂದ ಪಕ್ಷದ ನಾಯಕರಿಂದ ಹಾಗೂ ಪಕ್ಷದ ಚಟುವಟಿಕೆಗಳಿಂದ ಸಂಪೂರ್ಣವಾಗಿ ದೂರ ಉಳಿದಿರುವ ಜಿ.ಟಿ. ದೇವೇಗೌಡ, ಜೆಡಿಎಸ್ ತೊರೆದು ಕಾಂಗ್ರೆಸ್ ಅಥವಾ ಬಿಜೆಪಿ ಸೇರುತ್ತಾರೆಂಬ ಬಗ್ಗೆ ಊಹಾಪೋಹಗಳು ಹರಡಿತ್ತು. ಆದರೆ ಜೆಡಿಎಸ್ ತೊರೆಯುವ ಯಾವುದೇ ಚಿಂತನೆ ಇಲ್ಲ ಎನ್ನುವ ಮೂಲಕ ಪಕ್ಷ ತೊರೆಯುವ ಕುರಿತಂತೆ ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದರು. ಇದೀಗ ಮುಂದಿನ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧೆಗೆ ಒಲವು ತೋರಿರುವ ಜಿಟಿಡಿ, ಆ ಮೂಲಕ ಜೆಡಿಎಸ್ ಬಿಡುವ ಕುರಿತು ಪರೋಕ್ಷವಾಗಿ ಸುಳಿವು ಕೊಟ್ಟಿದ್ದಾರೆ.
"ನನ್ನದೇನಿದ್ದರೂ ಸೈಲೆಂಟ್ ರಾಜಕಾರಣ" ಎಂದು ಎಚ್ ಡಿಕೆಗೆ ತಿವಿದ ಜಿಟಿಡಿ
ಈ ಸಂಬಂಧ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, "ಕಳೆದ ಎರಡು ವರ್ಷಗಳಿಂದ ಜೆಡಿಎಸ್ ಪಕ್ಷದ ಸಭೆಗಳಲ್ಲಿ ಪಾಲ್ಗೊಂಡಿಲ್ಲ. ಮುಂದೆ ಬಿಜೆಪಿ ಅಥವಾ ಕಾಂಗ್ರೆಸ್ ಸೇರಬೇಕೋ, ಜೆಡಿಎಸ್ನಲ್ಲೇ ಇರಬೇಕೋ ಎಂಬುದರ ಬಗ್ಗೆ ತೀರ್ಮಾನ ಮಾಡಿಲ್ಲ ಎನ್ನುವ ಜೊತೆಗೆ ನಾನು ಪಕ್ಷೇತರವಾಗಿ ನಿಂತರೂ ಅಚ್ಚರಿ ಪಡಬೇಕಿಲ್ಲ,'' ಎಂದಿದ್ದಾರೆ.
ಸ್ವತಂತ್ರವಾಗಿ ನಿಂತರೂ ಗೆಲ್ಲುತ್ತೇವೆ
"ನಾನು ಮತ್ತು ನನ್ನ ಮಗ ಹರೀಶ್ ಸ್ವತಂತ್ರವಾಗಿ ನಿಂತರೂ ಗೆಲ್ಲುತ್ತೇವೆ. ಚಾಮುಂಡೇಶ್ವರಿ, ಹುಣಸೂರು, ಕೆ.ಆರ್. ನಗರ ಎಲ್ಲಿ ನಿಂತರೂ ಗೆಲ್ಲುತ್ತೇವೆ. ಜನರ ಪ್ರೀತಿ, ವಿಶ್ವಾಸದಿಂದ ಈ ಧೈರ್ಯ ಬಂದಿದೆ. ಸ್ವತಂತ್ರವಾಗಿ ನಿಲ್ಲುವ ಮಾರ್ಗ ಇದ್ದೇ ಇದೆ. ಪಕ್ಷೇತರವಾಗಿ ಸ್ಪರ್ಧಿಸಿದರೂ ಗೆಲ್ಲುತ್ತೇವೆ ಅನ್ನುವ ವಿಶ್ವಾಸ ಇದೆ. ಇಷ್ಟು ವರ್ಷ ರಾಜಕಾರಣ ಮಾಡಿದ್ದರಿಂದ ಧೈರ್ಯ ಬಂದಿದೆ. ಜನ ಕೂಡ ನಮಗೆ ಪಕ್ಷ ಬೇಡ, ಜಿ.ಟಿ. ದೇವೇಗೌಡರು ಬೇಕು ಅಂತಿದ್ದಾರೆ. ಚುನಾವಣೆಗೆ ಇನ್ನೂ ಎರಡು ವರ್ಷ ಸಮಯಾವಕಾಶ ಇದ್ದು, ಸನ್ನಿವೇಶ ನೋಡಿಕೊಂಡು ಸೂಕ್ತ ತೀರ್ಮಾನ ಮಾಡುತ್ತೇವೆ,'' ಎನ್ನುವ ಮೂಲಕ ಪಕ್ಷ ಬಿಡುವ ಮುನ್ಸೂಚನೆ ಕೊಟ್ಟಿದ್ದಾರೆ.
ಕ್ಷೇತ್ರದಲ್ಲಿ ಪೂರ್ವ ಸಿದ್ಧತೆ
ಈಗಾಗಲೇ ಜೆಡಿಎಸ್ ಬಿಡುವ ಬಗ್ಗೆ ನಿರ್ಧರಿಸಿರುವ ಜಿಟಿಡಿ, ಈಗಾಗಲೇ ಕ್ಷೇತ್ರದಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆ ಹಿನ್ನೆಲೆ ಸಿದ್ಧತೆ ಆರಂಭಿಸಿರುವ ಅವರು, ತಮ್ಮ ಕಟ್ಟಾ ಬೆಂಬಲಿಗರನ್ನು ಚುನಾವಣಾ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಆದರೆ ಜೆಡಿಎಸ್ ಪಕ್ಷದ ವತಿಯಿಂದ ನಿಲ್ಲಿಸುವುದೋ ಅಥವಾ ಪಕ್ಷೇತರವಾಗಿ ನಿಲ್ಲಿಸುವುದೋ ಎಂಬ ಕುರಿತಂತೆ ತಮ್ಮ ಬೆಂಬಲಿಗರ ಜೊತೆಗೂಡಿ ಚರ್ಚೆ ನಡೆಸುತ್ತಿದ್ದಾರೆ.
ಜೆಡಿಎಸ್ನಿಂದ ಬಿ ಫಾರಂ ಸಿಗೋದು ಡೌಟ್?
ಶಾಸಕ ಜಿ.ಟಿ.ದೇವೇಗೌಡ JDS ಪಕ್ಷದಿಂದ ದೂರ ಉಳಿದಿರುವ ಪರಿಣಾಮ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜಿಟಿಡಿ ಆಪ್ತರಿಗೆ ಜೆಡಿಎಸ್ ವತಿಯಿಂದ ಬಿ ಫಾರಂ ಸಿಗೋದು ಡೌಟ್. ಈ ಕಾರಣದಿಂದಾಗಿ ತಮ್ಮ ಬೆಂಬಲಿಗರನ್ನು ಪಕ್ಷೇತರವಾಗಿ ಕಣಕ್ಕಿಳಿಸುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಜಿಟಿಡಿ ಬಂದಿರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಪಕ್ಷ ತೊರೆಯುವ ವಿಷಯ ಪ್ರಸ್ತಾಪಿಸಿರುವ ಅವರು, ತಾವು ಜೆಡಿಎಸ್ ತೊರೆದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆಯೂ ಮಾತನಾಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಜಿಟಿಡಿ ಪ್ರತಿನಿಧಿಸುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಅಷ್ಟೇನು ಜೋರಾಗಿಲ್ಲ. ಇನ್ನೂ ಕಾಂಗ್ರೆಸ್ ಜೊತೆ ಕೈಜೋಡಿಸುವ ಸಾಧ್ಯತೆ ಇದ್ದರೂ ಸಹ ಅದು ಸಿದ್ದರಾಮಯ್ಯ ಒಪ್ಪಿದ್ದರೆ ಮಾತ್ರ ಎನ್ನುತ್ತಿವೆ ಜಿಟಿಡಿ ಮೂಲಗಳು.
ಮುಂದೆ ಯಾವ ಪಕ್ಷ ಸೇರಬೇಕು?
ಒಟ್ಟಾರೆ ಜೆಡಿಎಸ್ ತೊರೆಯಲು ಶಾಸಕ ಜಿ.ಟಿ. ದೇವೇಗೌಡ, ಮಾನಸಿಕವಾಗಿ ಸಂಪೂರ್ಣ ಸಿದ್ಧರಾಗಿದ್ದಾರೆ. ಆದರೆ ಮುಂದೆ ಯಾವ ಪಕ್ಷ ಸೇರಬೇಕಾ? ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಾ? ಎಂಬ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆ ಜಿ.ಟಿ. ದೇವೇಗೌಡ ಅವರ ರಾಜಕೀಯ ಭವಿಷ್ಯ ನಿರ್ಧರಿಸಲಿದೆ. ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 5 ಜಿ.ಪಂ. ಮತ್ತು 19 ತಾ.ಪಂ. ಕ್ಷೇತ್ರಗಳಲ್ಲಿ ಎಷ್ಟು ಮಂದಿ ಜಿಟಿಡಿ ಬೆಂಬಲಿಗರು ಗೆಲ್ಲುತ್ತಾರೆ ಎಂಬುದರ ಮೇಲೆ ಜಿಟಿಡಿ ಅವರ ಮುಂದಿನ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.