"ವೋಟ್ ಹಾಕೋದಷ್ಟೆ ನನ್ ಕೆಲಸ" ಎಂದು ಮತ್ತೆ ಅಸಮಾಧಾನ ಹೊರಹಾಕಿದ ಜಿಟಿಡಿ
ಮೈಸೂರು, ಡಿಸೆಂಬರ್ 27: "ಮೈಸೂರಿನಲ್ಲಿ ಸಾರಾ ಮಹೇಶ್ ಅವರು ಏನ್ ಹೇಳ್ತಾರೋ, ಕುಮಾರಸ್ವಾಮಿ ಅವರು ಅದನ್ನೇ ಮಾಡಿಕೊಂಡು ಬರುತ್ತಿದ್ದಾರೆ. ಪಕ್ಷ, ಹೈಕಮಾಂಡ್ ಯಾರನ್ನು ಅಭ್ಯರ್ಥಿ ಮಾಡುತ್ತೋ ಅವರಿಗೆ ವೋಟ್ ಹಾಕೋದಷ್ಟೆ ನನ್ನ ಕೆಲಸ" ಎಂದು ಹೇಳುವ ಮೂಲಕ ಮತ್ತೊಮ್ಮೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಮಾಜಿ ಸಚಿವ ಜಿ.ಟಿ.ದೇವೇಗೌಡರು.
ಮೈಸೂರು ಮೇಯರ್, ಉಪಮೇಯರ್ ಚುನಾವಣೆಗೆ ಇಂದು ಮೀಸಲಾತಿ ಪ್ರಕಟಗೊಂಡಿದ್ದು, ಅದಕ್ಕೆ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ. "ನಾನು ಉಸ್ತುವಾರಿ ಸಚಿವನಾಗರಲಿ, ಮತದಾರನಾಗಿರಲಿ, ಸಾರಾ ಮಹೇಶ್, ಕುಮಾರಸ್ವಾಮಿ ಅವರು ಯಾವತ್ತು ನನ್ನ ಮೇಯರ್ ಚುನಾವಣೆಯಲ್ಲಿ ಪರಿಗಣಿಸಿಲ್ಲ. ಹಾಗಾಗಿ ಈಗಲೂ ಅವರೇ ಚುನಾವಣೆ ಮಾಡಲಿ. ಪಕ್ಷ, ಹೈಕಮಾಂಡ್ ಅಭ್ಯರ್ಥಿ ಮಾಡಿದವರಿಗೆ ವೋಟ್ ಹಾಕೋದಷ್ಟೇ ನನ್ನ ಕೆಲಸ" ಎಂದು ಹೇಳಿದ್ದಾರೆ.
"ಜೆಡಿಎಸ್ ಶಾಸಕನಾಗೇ ಇರುತ್ತೇನೆ" ಎಂದು ಮತ್ತೆ ಸಿಎಂ ಹೊಗಳಿದ ಜಿಟಿಡಿ
"ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತೋ ಅದೇ ತಾನೇ ಕೊನೆ ತೀರ್ಮಾನ. ಮೇಯರ್ ಚುನಾವಣೆ ನನ್ನ ವ್ಯಾಪ್ತಿಗೂ ಬರುತ್ತದೆ. ನಾನು ಕೂಡ ಸದಸ್ಯನಾಗಿದ್ದೇನೆ. ಈಗಾಗಲೇ ಸರ್ಕಾರದಿಂದ ನೋಟಿಫಿಕೇಶನ್ ಆಗಿದೆ" ಎನ್ನುತ್ತಾ ಮೇಯರ್ ಚುನಾವಣೆಯಲ್ಲೂ ತಟಸ್ಥ ನಿಲುವನ್ನು ವ್ಯಕ್ತಪಡಿಸಿದರು.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರೌಂಡ್ಸ್ ನಡೆಸಿದ ಜಿಟಿಡಿ, ಕ್ಷೇತ್ರದ ವ್ಯಾಪ್ತಿಯಲ್ಲಿನ ರಸ್ತೆ, ಯುಜಿಡಿ, ಕುಡಿಯುವ ನೀರಿನ ಸಮಸ್ಯೆಗಳನ್ನು ಆಲಿಸಿದರು. ಪಾರ್ಕ್ ಸ್ವಚ್ಛತೆ, ಡ್ರೈನೆಜ್ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವಿಜಯನಗರ 4ನೇ ಹಂತದಲ್ಲಿ ಹಿನಕಲ್ ಕೆರೆ ಸರ್ವೆ ನಂ.305 ನಲ್ಲಿ ಸ್ಮಶಾನ ಅಭಿವೃದ್ಧಿ (ಜಂಗಲ್ ಕ್ಲಿನಿಕ್) ಅಭಿವೃದ್ಧಿ ಕಾಮಗಾರಿಗೆ ಸ್ಥಳ ಪರಿವೀಕ್ಷಣೆ ನಡೆಸಿ ಚಾಲನೆ ನೀಡಿದರು. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವಿಜಯನಗರ ವ್ಯಾಪ್ತಿಯಲ್ಲಿಂದು ವಿವಿಧ ಸರ್ಕಾರಿ ಯೋಜನೆಗಳ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಎಲ್ಲ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದರು.
ಹುಣಸೂರಿನಲ್ಲಿ ವಿಶ್ವನಾಥ್ ಸೋಲಿಗೆ ಜಿಟಿಡಿ ಬೊಟ್ಟು ಮಾಡಿದ್ದು ಇವರತ್ತ
ಸರ್ಕಾರ ಸೂಕ್ತ ಮಾಹಿತಿ ನೀಡಬೇಕು: "ಪ್ರತಿಭಟನೆ ಪ್ರತಿಯೊಬ್ಬ ನಾಗರೀಕನ ಹಕ್ಕು. ಆದರೆ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು" ಎಂದರು. ಜೊತೆಗೆ "ಜನರಿಗೆ ಸರ್ಕಾರ ಸೂಕ್ತ ಮಾಹಿತಿ ನೀಡಬೇಕು. ಈ ಕಾನೂನು ಜಾರಿಯಾದರೆ ಆಗುವ ಅನುಕೂಲ, ಅನಾನುಕೂಲದ ಬಗ್ಗೆ ತಿಳಿಸಿಕೊಡಬೇಕು. ಪ್ರತಿಭಟನೆ ಮಾಡ್ತಾರೆ ಅಂತ ಹತ್ತಿಕ್ಕುವ ಕೆಲಸ ಮಾಡಬಾರದು" ಎಂದು ಹೇಳಿದರು.