ದೊಡ್ಡ ಗೌಡರನ್ನು ಭೇಟಿಯಾಗದೇ ಮುನಿಸು ಹೊರಹಾಕಿದ ಜಿಟಿಡಿ
ಮೈಸೂರು, ನವೆಂಬರ್ 8: ಚಾಮುಂಡಿ ಬೆಟ್ಟದಲ್ಲಿ ಡಿಕೆಶಿ ಜೊತೆ ಪೂಜೆಗೆ ಆಗಮಿಸಿದ ಶಾಸಕ ಜಿ.ಟಿ.ದೇವೇಗೌಡ, ಜೆಡಿಎಸ್ ವರಿಷ್ಠ ದೇವೇಗೌಡರು ಬಂದಾಗ ಅವರನ್ನು ಭೇಟಿ ಮಾಡದೆ ಹೊರಟು ಹೋದ ಘಟನೆ ನಡೆಯಿತು.
ಚಾಮುಂಡಿ ಸನ್ನಿಧಿಯಲ್ಲಿ ಮುಖಾಮುಖಿಯಾದ ನಾಯಕರು
ಇಂದು ಚಾಮುಂಡಿ ಬೆಟ್ಟದಲ್ಲಿ ಹಲವು ರಾಜಕೀಯ ವಿದ್ಯಮಾನ ನಡೆದಿದ್ದು, ಜೆಡಿಎಸ್ ನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಡಿಕೆಶಿ ಜೊತೆ ಚಾಮುಂಡಿ ತಾಯಿಯ ಪೂಜೆಗೆ ಆಗಮಿಸಿ ಅರ್ಚನೆಯಲ್ಲಿ ಪಾಲ್ಗೊಂಡರು. ನಂತರ ಡಿಕೆಶಿ ಅವರಿಗೆ ಒಳ್ಳೇದಾಗಲಿ ಎಂದು ಶುಭವನ್ನೂ ಹಾರೈಸಿದರು.
ಆದರೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕೂಡ ಪೂಜೆ ಸಲ್ಲಿಸಲು ಚಾಮುಂಡೇಶ್ವರಿ ದೇವಾಲಯಕ್ಕೆ ಆಗಮಿಸಿದಾಗ ಅವರನ್ನು ಭೇಟಿಯಾಗದೇ ಶಾಸಕ ಜಿ.ಟಿ.ದೇವೇಗೌಡರು ಹೊರಟು ಹೋದರು. ದೊಡ್ಡ ಗೌಡರನ್ನು ಭೇಟಿಯಾಗದೆ ಹೋದ ಶಾಸಕ ಜಿ.ಟಿ.ದೇವೇಗೌಡ ಈ ಮೂಲಕ ಜೆಡಿಎಸ್ ಜೊತೆಗಿನ ಅಸಮಾಧಾನವನ್ನು ಮತ್ತೊಮ್ಮೆ ಹೊರಹಾಕಿದ್ದಾರೆ. ಈ ಹಿಂದೆಯೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮೈಸೂರಿಗೆ ಬಂದ ಸಂದರ್ಭದಲ್ಲಿ ಅವರನ್ನು ಭೇಟಿಯಾಗದೇ ದೂರ ಉಳಿಯುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.