ರೇವಣ್ಣ ಬಗ್ಗೆ ಸಿದ್ದರಾಮಯ್ಯ ಹೇಳಿಕೆ: ಸಚಿವ ಜಿಟಿಡಿ ಪ್ರತಿಕ್ರಿಯೆ ಏನು?
ಮೈಸೂರು, ಮೇ 17: ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಎಚ್ ಡಿ ರೇವಣ್ಣ ಇವರಿಬ್ಬರೂ ಸಹ 1995ರಿಂದಲೂ ಆತ್ಮೀಯ ಸ್ನೇಹಿತರು. ಹಾಗಾಗಿ ಸಿದ್ದರಾಮಯ್ಯ ಅವರು ಪ್ರೀತಿಯಿಂದ ರೇವಣ್ಣ ಅವರನ್ನು ಸಿಎಂ ಸ್ಥಾನಕ್ಕೆ ಅರ್ಹರು ಎಂದಿದ್ದು, ಇದರಲ್ಲಿ ಯಾವುದೇ ಸಂಶಯವಿಲ್ಲ, ದುರುದ್ದೇಶವೂ ಇಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಹೇಳಿದರು.
ಸಿದ್ದರಾಮಯ್ಯ, ಜಿಟಿಡಿ ಹೇಳಿಕೆ ಸಮರ್ಥಿಸಿಕೊಂಡ ಸಚಿವ ಸಾರಾ ಮಹೇಶ್
ರೇವಣ್ಣ ಸಹ ಸಿಎಂ ಸ್ಥಾನಕ್ಕೆ ಅರ್ಹರು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿರುವ ವಿಚಾರಕ್ಕೆ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ಹಿರಿಯರಾದ ಖರ್ಗೆ ಹಿಂದೆಯೇ ಸಿಎಂ ಆಗಬೇಕಿತ್ತು ಎಂದಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರು ಹಿರಿಯ ರಾಜಕಾರಣಿಯ ಘನತೆ ಬಗ್ಗೆ ಹೇಳಿದ್ದಾರೆ ಅಷ್ಟೇ. ಅದರಲ್ಲಿ ವಿಶೇಷಾರ್ಥ ಏನು ಇಲ್ಲ. ಬಿಜೆಪಿಯವರು ಮೇ 23ರ ಬಳಿಕ ಬದಲಾವಣೆ ಆಗುತ್ತದೆ ಎನ್ನುತ್ತಿರುವುದು, ದೇಶದಲ್ಲಿ ಆಗುವ ಬದಲಾವಣೆಯ ಬಗ್ಗೆ. ಆದರೆ ಮಾಧ್ಯಮಗಳು ಇದನ್ನು ರಾಜ್ಯಕ್ಕೆ ಎಂದು ಅರ್ಥೈಸಿ ತೋರಿಸುತ್ತಿವೆ ಎಂದು ತಿಳಿಸಿದರು.