ಸಿದ್ದರಾಮಯ್ಯಗೆ ಸವಾಲು ಹಾಕಿದ ಶಾಸಕ ಜಿ.ಟಿ.ದೇವೇಗೌಡ
ಮೈಸೂರು, ಡಿಸೆಂಬರ್ 01: "ಸಿದ್ದರಾಮಯ್ಯ ಅವರಿಗೆ ಜಿ.ಟಿ. ದೇವೇಗೌಡ ಏನು ಅಂತ 25 ವರ್ಷದಿಂದ ಗೊತ್ತಿದೆ. 25 ವರ್ಷದಲ್ಲಿ ವರ್ಗಾವಣೆ, ಕಾಮಗಾರಿ ಯಾವುದೇ ರೂಪದಲ್ಲಿ ದುಡ್ಡು ಪಡೆದಿರುವುದಿದ್ದರೆ ಹೇಳಲಿ. ಅದನ್ನು ಸಾಬೀತು ಪಡಿಸಲಿ. ಆಗ ನಾನು ರಾಜಕಾರಣದಲ್ಲೇ ಇರುವುದಿಲ್ಲ" ಎಂದು ಸವಾಲು ಹಾಕಿದ್ದಾರೆ ಜಿ.ಟಿ.ದೇವೇಗೌಡ.
ಮಂಗಳವಾರ ಮೈಸೂರಿನಲ್ಲಿ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ, ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿ.ಟಿ.ಡಿ ಹಣ ಪಡೆದಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.
ಜೆಡಿಎಸ್ ಮುಖಂಡ ಜಿಟಿ ದೇವೇಗೌಡರಿಗೆ ಡಿಸಿಎಂ ಸ್ಥಾನದ ಆಫರ್!
"ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಜೊತೆ ಮಾತನಾಡಿದ್ದೆ. ನಮ್ಮ ಮುಖಂಡರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲಿಸುವಂತೆ ಹೇಳಿದ್ದರು. ಬೂತ್ ಖರ್ಚು ವ್ಯವಸ್ಥೆಗಾಗಿ ಯತೀಂದ್ರ ಹಾಗೂ ನಮ್ಮ ಪಕ್ಷದ ಜಿಲ್ಲಾಧ್ಯಕ್ಷ ರಾಜು ಹಣ ವಿತರಣೆ ಮಾಡಿದ್ದರು. ಚುನಾವಣೆಯಲ್ಲಿ ನಾನು ಹಣಕಾಸಿನ ವ್ಯವಹಾರ ಮಾಡಿಲ್ಲ. ನಾನು ವೈಯಕ್ತಿಕವಾಗಿ ಹಣ ನೀಡಿಲ್ಲ. ಅವರು ಸಹ ನನಗೆ ಹಣ ನೀಡಿಲ್ಲ" ಎಂದು ಸ್ಪಷ್ಟನೆ ನೀಡಿದರು.
"ಆತ್ಮಸಾಕ್ಷಿಯಾಗಿ ನಾನು ಇದನ್ನು ಹೇಳುತ್ತಿದ್ದೇನೆ. ಸಿದ್ದರಾಮಯ್ಯ ತಮ್ಮ ಹೇಳಿಕೆಗೆ ವಿವರಣೆ ನೀಡಬೇಕು" ಎಂದು ಆಗ್ರಹಿಸಿದರು.
ಇದೇ ಸಂದರ್ಭ, ರಾಜ್ಯ ರಾಜಕಾರಣದ ಕುರಿತು ಮಾತನಾಡಿ, "ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಸೇರಿ ಎಲ್ಲಾ ಕಡೆ ರಾಜಕಾರಣ ಕಲುಷಿತಗೊಂಡಿದೆ. ಆದರೆ ಜೆಡಿಎಸ್ ನಿಂದ ನಾನು ಗೆದ್ದಿದ್ದೇನೆ. ಅದರಲ್ಲೇ ಇದ್ದೇನೆ. ಮುಂದೆ ಜೆಡಿಎಸ್ ನಲ್ಲಿ ಉಳಿದರೂ ಅಚ್ಚರಿಯಿಲ್ಲ ಎಂದು ಹೇಳಿದರು.
ಕಳೆದ ಲೋಕಸಭೆ ಚುನಾವಣೆ ವಿಚಾರವನ್ನು ಪ್ರಸ್ತಾಪಿಸಿ, ಮೈಸೂರು ಮಂಡ್ಯ ತುಮಕೂರಿನ ಸೋಲು ಅನುಮಾನಗಳಿಗೆ ಕಾರಣವಾಗಿತ್ತು. ಅಭ್ಯರ್ಥಿಗಳನ್ನು ಸೋಲಿಸಿದ್ದು ಹಣ ಅಲ್ಲ, ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಆಗಲಿಲ್ಲ. ದಿಢೀರ್ ಹೊಂದಾಣಿಕೆ ಕೆಲಸ ಮಾಡಲಿಲ್ಲ. ಮೋದಿ ಹವಾದಿಂದ ಎಲ್ಲರೂ ಗೆದ್ದಿದ್ದಾರೆ. ಇದಕ್ಕೆ ಬೇರೆ ಯಾರೂ ಕಾರಣ ಅಲ್ಲ. ಮೋದಿಯ ಹುಚ್ಚು ಹೊಳೆಯಿಂದ ಗೆಲ್ಲದವರೂ ಗೆದ್ದಿದ್ದಾರೆ. ಗೆಲ್ಲುವವರೆಲ್ಲ ಸೋತಿದ್ದಾರೆ. ಇದನ್ನು ಸಿದ್ದರಾಮಯ್ಯ ಒಬ್ಬರೇ ಅಲ್ಲ, ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಮತ್ತೆ ಬಿಜೆಪಿ ಪರವಾಗಿ ಮಾತನಾಡಿದರು.