ಕುಮಾರಸ್ವಾಮಿಯನ್ನೂ ಮೀರಿದ ಹೈಕಮಾಂಡ್ ಮೈಸೂರಿನಲ್ಲಿದೆ!
ಮೈಸೂರು, ಜನವರಿ 07: "ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ರಾಜ್ಯ ಹೈಕಮಾಂಡ್. ಅದನ್ನೂ ಮೀರಿದ ಹೈಕಮಾಂಡ್ ಮೈಸೂರಿನಲ್ಲಿದೆ" ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇ ಗೌಡ ಅವರು ವ್ಯಂಗ್ಯವಾಡಿದರು.
ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಜಿ. ಟಿ. ದೇವೇಗೌಡರು, ಮೈಸೂರು ಭಾಗದಲ್ಲಿ ಯಾರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೋ ನಾವು ಅವರನ್ನು ಉಚ್ಛಾಟನೆ ಮಾಡುವುದಾಗಿ ಕುಮಾರಸ್ವಾಮಿ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ನಿಮ್ಮ ರಾಜಕೀಯ ಭವಿಷ್ಯ ನೋಡಿಕೊಳ್ಳಿ; ಗೌಡರಿಗೆ ಹೆಚ್ಡಿಕೆ ತಿರುಗೇಟು!
"ಕುಮಾರಸ್ವಾಮಿ ಅವರೊಬ್ಬರೇ ಹೇಳಿಲ್ಲ, ಅವರ ಜೊತೆ ಮೈಸೂರು ಹೈಕಮಾಂಡ್ ಕೂಡ ಹೇಳಿದ್ದಾರೆ" ಎಂದು ಹೇಳಿದ ಜಿ. ಟಿ. ದೇವೇಗೌಡರು, ಶಾಸಕ ಸಾ. ರಾ. ಮಹೇಶ್ ಅವರ ಹೆಸರು ಹೇಳದೆ ವಾಗ್ದಾಳಿಯನ್ನು ನಡೆಸಿದರು.
ಸಿದ್ದರಾಮಯ್ಯ ಚಾಮುಂಡೇಶ್ವರಿ ಸೋಲು; ಗೌಡರು ಹೇಳಿದ್ದೇನು?
"ಕುಮಾರಸ್ವಾಮಿಯವರನ್ನೂ ಮೀರಿದ ಹೈಕಮಾಂಡ್ ಮೈಸೂರಿನಲ್ಲಿದ್ದು ಅದೂ ಕೂಡ ಪಕ್ಷದಲ್ಲಿ ಯಾರು ಹೇಳಿಕೆಗಳನ್ನು ಕೊಡುತ್ತಾರೋ ಅವರನ್ನು ಪಕ್ಷದಿಂದ ಕೈಬಿಡಬೇಕು ಎಂದು ಹೇಳಿದೆ. ಅದು ಮೈಸೂರನಿಂದಲೇ ಆಗತ್ತೆ ಅಂತ ಹೇಳಿದ್ದಾರೆ" ಎಂದರು.
ಜೆಡಿಎಸ್ ಮುಖಂಡ ಜಿಟಿ ದೇವೇಗೌಡರಿಗೆ ಡಿಸಿಎಂ ಸ್ಥಾನದ ಆಫರ್!
ಬಂದು ನನ್ನನ್ನು ಆಹ್ವಾನಿಸಲಿಲ್ಲ
"ಹುಣಸೂರಿನ ಉಪಚುನಾವಣೆಯಲ್ಲಿ ಯಾವ ಹೈಕಮಾಂಡ್ ಕೂಡ ಬಂದು ನನ್ನನ್ನು ಆಹ್ವಾನಿಸಲಿಲ್ಲ. ಹಾಗಾಗಿ ನಾನು ಹುಣಸೂರು ಉಪಚುನಾವಣೆಗೇ ಹೋಗಿಲ್ಲ. ಮತ್ತೆ ಮೊನ್ನೆ ಕುಮಾರಸ್ವಾಮಿಯವರೇ ಬಂದು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ಗೆ ಟಿಕೆಟ್ ಕುರಿತು ಅವರೇ ಜವಾಬ್ದಾರಿಯನ್ನು ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಬಿ ಫಾರ್ಂ ತಾನೇ ಬಂದು ಕೊಡುವುದಾಗಿ ಹೇಳಿದ್ದಾರೆ" ಎಂದು ಜಿ. ಟಿ. ದೇವೇಗೌಡ ಹೇಳಿದರು.
ಪಕ್ಷದ ಶಿಸ್ತಿನ ಸಿಪಾಯಿ
"ಮೈಸೂರು ಹೈಕಮಾಂಡ್ ಪ್ರಜ್ವಲ್ ರನ್ನು ಹುಣಸೂರಿಗೆ ಕರಕೊಂಡು ಬಂದೆ ಅಂತ ಹೇಳ್ತಾರೆ. ಇನ್ನೊಂದು ಸಲ ವಿಶ್ವನಾಥ್ ಅನ್ನು ನಾನೇ ಕರೆದುಕೊಂಡು ಬಂದೆ ಅಂತ ಹೇಳಿದ್ದರು. ನಮ್ಮ ಭವಾನಿ ಮೇಡಂ ಪತ್ರಿಕೆಯಲ್ಲಿ ಓದಿದ್ದೆ. ನನ್ನ ಮಗನನ್ನು ಕರೆತಂದು ಟಿಕೆಟ್ ನೀಡದೆ ಅವಮಾನ ಮಾಡಿರೋದರಿಂದ ನಾನು ಸೋಲಿಸಿ ಎಂದಿದ್ದು ನಿಜ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅದು ಮಾಧ್ಯಮಗಳಲ್ಲಿಯೂ ಬಂದಿದೆ. ನಾನು ಭಾರತೀಯ ಜನತಾ ಪಾರ್ಟಿಯಲ್ಲಿ ಇದ್ದೆ. ಅಲ್ಲೂ ಕೂಡ ಶಿಸ್ತಿನ ಸಿಪಾಯಿಯಾಗಿ ಇರುವಷ್ಟು ದಿನ ನಡೆದುಕೊಂಡಿದ್ದೇನೆ" ಎಂದರು.
ಒಂದು ಸಣ್ಣ ತಪ್ಪು ಮಾಡಿಲ್ಲ
"ಜೆಡಿಎಸ್ ಪಕ್ಷದಲ್ಲಿ ಒಂದೇ ಒಂದು ಸಣ್ಣ ತಪ್ಪನ್ನೂ ಮಾಡಿಲ್ಲ. ನಾನು ಇನ್ನೊಂದು ಪಕ್ಷದವರನ್ನು ಗೆಲ್ಲಿಸಲು ಯಾರೋ ದುರ್ಬಲ ಅಭ್ಯರ್ಥಿಗೆ ಬಿ ಫಾರಂ ಕೊಡಿ ಅಂತ ಕೊಡಿಸಿಲ್ಲ. ಯಾರು ಆ ಕೆಲಸ ಮಾಡುತ್ತಿದ್ದಾರೆ ಅವರ ಮೇಲೆ ತಾನೇ ಕ್ರಮ ತೆಗೆದುಕೊಳ್ಳಬೇಕು? ಯಾರೋ ಇವರಿಗೆ ಬೇಕಾದವರನ್ನು ಬಿಜೆಪಿ ಯನ್ನು, ಕಾಂಗ್ರೆಸ್ ನವರನ್ನು ಗೆಲ್ಲಿಸಲಿಕ್ಕೆ ಜೆಡಿಎಸ್ ಪಕ್ಷವನ್ನು ಬಳಸಿಕೊಂಡು ಆ ದುರ್ಬಲ ಅಭ್ಯರ್ಥಿಯನ್ನು ಆರಿಸುವ ಕೆಲಸ ಮಾಡಿದ್ದಾರೆ. ನಿರಂತರವಾಗಿ ಮಾಡಿಕೊಂಡೇ ಬರುತ್ತಿದ್ದಾರೆ" ಎಂದು ಜಿ. ಟಿ. ದೇವೇಗೌಡ ದೂರಿದರು.
ಆತ್ಮಾವಲೋಕನವಾಗಲಿ
"ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ. ಆರ್. ನಗರವೂ ಸೇರಿದಂತೆ ನಾನು ಬೆಂಬಲ ಕೊಟ್ಟಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ದೇವರು ಮೆಚ್ಚುವ ರೀತಿ ಮಾಡಿದ್ದೇನೆ. ಅವರು ಶಿಸ್ತುಕ್ರಮ ಯಾರ ಮೇಲೆ ತೆಗೆದುಕೊಳ್ಳಬೇಕು, ಮೊದಲು ಅನ್ವಯಿಸುವುದು ಯಾರಿಗೆ, ಇದನ್ನೆಲ್ಲ ಯಾರು ಮಾಡಿದ್ದಾರೆ ಎಂಬುದರ ಆತ್ಮಾವಲೋಕನವಾಗಲಿ. ಜಿ. ಟಿ. ದೇವೇಗೌಡರ ಮಗ ಹುಣಸೂರಿಗೆ ಬರಬಾರದು ಅಂತ ಪಕ್ಷವನ್ನೇ ಬಳಸಿಕೊಂಡು ಏನು ಮಾಡಿದ್ದಾರೋ ಅವರ ಮೇಲೆ ಮೊದಲು ಕ್ರಮ ತೆಗೆದುಕೊಳ್ಳಬೇಕು" ಎಂದು ಆಗ್ರಹಿಸಿದರು.