ಶೀಘ್ರವೇ ಸಿಎಂ ನೇಮಕ ಮಾಡಿ: ಜಿ.ಟಿ. ದೇವೇಗೌಡ ಒತ್ತಾಯಿಸುತ್ತಿರುವುದೇಕೆ?
ಮೈಸೂರು, ಜುಲೈ 27: "ಕೊರೊನಾ ಮೂರನೇ ಅಲೆ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಶೀಘ್ರವೇ ಸಿಎಂ ನೇಮಕ ಮಾಡುವ ಜೊತೆಗೆ ಮಂತ್ರಿಮಂಡಲ ರಚಿಸುವಂತೆ," ಶಾಸಕ ಜಿ.ಟಿ. ದೇವೇಗೌಡ ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಜಿಟಿಡಿ, "ಸಿಎಂ ಬದಲಾವಣೆಗೆ ಇದು ಸೂಕ್ತ ಸಮಯ ಆಗಿರಲಿಲ್ಲ. ಆದರೂ ಕೂಡ ಬಿಜೆಪಿ ಹೈಕಮಾಂಡ್ ಸಿಎಂ ಬದಲಾವಣೆ ಮಾಡಿದೆ. ಹೀಗಾಗಿ ತುರ್ತಾಗಿ ನೂತನ ಸಿಎಂ ನೇಮಕ ಮಾಡುವ ಜೊತೆಗೆ ಸಚಿವ ಸಂಪುಟ ವಿಸ್ತರಣೆ ಮಾಡಬೇಕಿದೆ," ಎಂದು ಶಾಸಕ ಜಿ.ಟಿ. ದೇವೇಗೌಡ ಬಿಜೆಪಿ ಹೈಕಮಾಂಡ್ಗೆ ಒತ್ತಾಯಿಸಿದರು.
"ರಾಜ್ಯದಲ್ಲಿ ಒಂದೆಡೆ ಕೊರೊನಾ ಸೋಂಕು ಮೂರನೇ ಅಲೆ ಬರುತ್ತಿದೆ. ಮತ್ತೊಂದೆಡೆ ಉತ್ತರ ಕನ್ನಡ ಭಾಗದಲ್ಲಿ ಪ್ರವಾಹ ಬಂದಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಸಿಎಂ ಮತ್ತು ಮಂತ್ರಿಮಂಡಲ ರಚನೆ ಆಗಬೇಕು. ರಾಜ್ಯದ ಹಿತದೃಷ್ಟಿ ಉದ್ದೇಶದಿಂದ ಬಿಜೆಪಿ ಹೈಕಮಾಂಡ್ ತುರ್ತಾಗಿ ಮಾಡಬೇಕು," ಎಂದರು.
"ಇದೇ ವೇಳೆ ಮೈಸೂರು ಭಾಗಕ್ಕೆ ಮಂತ್ರಿ ಸ್ಥಾನ ಸಿಗಲಿ. ಈ ಹಿಂದೆ 3-4 ಮಂದಿ ಮೈಸೂರು ಭಾಗದಲ್ಲಿ ಸಚಿವರಾಗುತ್ತಿದ್ದರು. ಹೀಗಾಗಿ ಮೈಸೂರು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸ್ಥಳೀಯರಿಗೆ ಅವಕಾಶ ನೀಡಿ, ಯಡಿಯೂರಪ್ಪನವರು ವಿರಮಿಸುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಅವರು ಸಕ್ರೀಯ ರಾಜಕಾರಣದಲ್ಲಿ ಇರುತ್ತಾರೆ ಎಂದು ನಾನು ಭಾವಿಸಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಗೆ ಏನಾಗುತ್ತದೋ ನೋಡೋಣ," ಎಂದು ಹೇಳಿದರು.
ಮುಂಬರುವ ಜಿ.ಪಂ ಹಾಗೂ ತಾ.ಪಂ ಚುನಾವಣೆ ಕುರಿತಂತೆ ಮಾತನಾಡಿದ ಜಿ.ಟಿ. ದೇವೇಗೌಡ, "ನಾಳೆಯಿಂದ ಹಮ್ಮಿಕೊಂಡಿದ್ದ ಚಾಮುಂಡೇಶ್ವರಿ ಕ್ಷೇತ್ರ ಪ್ರವಾಸ ರದ್ದುಗೊಳಿಸಿದ್ದು, ಒಂದು ವಾರಗಳ ಕಾಲ ಕ್ಷೇತ್ರ ಪ್ರವಾಸ ಮುಂದೂಡಿದ್ದೇನೆ. ನನಗೆ ಆರೋಗ್ಯ ಸರಿಯಿಲ್ಲದ ಕಾರಣ ಕ್ಷೇತ್ರದ ಪ್ರವಾಸವನ್ನು ಮುಂದೂಡಿದ್ದೇನೆ."
"ಕ್ಷೇತ್ರವನ್ನು ಸುತ್ತುವುದರ ಮೂಲಕ ಜನಾಭಿಪ್ರಾಯ ಪಡೆಯುತ್ತೇನೆ. ಜನರ ತೀರ್ಮಾನವೇ ನನ್ನ ತೀರ್ಮಾನವಾಗಿರುತ್ತದೆ ಎಂದ ಅವರು, ಪಕ್ಷೇತರವಾಗಿ ನನ್ನ ಬೆಂಬಲಿಗರನ್ನು ನಿಲ್ಲಿಸಬೇಕಾ ಅಥವಾ ಯಾವುದಾದರೂ ಪಕ್ಷದಿಂದ ಸ್ಪರ್ಧಿಸಿಬೇಕಾ ಎಂದು ಜನರೇ ತೀರ್ಮಾನ ಮಾಡುತ್ತಾರೆ," ಎಂದು ಹೇಳಿದರು.