ನಾನು ಯಾವ ಬಿಜೆಪಿ ಮುಖಂಡರೊಂದಿಗೂ ಮಾತಾಡಿಲ್ಲ: ಜಿ.ಟಿ. ದೇವೇಗೌಡ
ಮೈಸೂರು, ಜುಲೈ 4: ನಾನು ಯಾವ ಬಿಜೆಪಿ ನಾಯಕರೊಂದಿಗೂ ಮಾತನಾಡಿಲ್ಲ. ಮೋದಿ, ನಾವು ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲ ಎಂದಿದ್ದರಿಂದ ನಾನೂ ಅವರ ಪರವಾಗಿ ಮಾತನಾಡಿದೆ ಅಷ್ಟೆ ಎಂದು ಸಚಿವ ಜಿ.ಟಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಯಾವ ರೀತಿಯ ಮಾಹಿತಿ ಇದೆಯೋ ಗೊತ್ತಿಲ್ಲ. ನಾನು ಪ್ರಧಾನಿ ಮೋದಿಯವರ ಹೇಳಿಕೆ ಆಧರಿಸಿ ಅವರ ಪರವಾಗಿ ಹೇಳಿದ್ದೆ ಅಷ್ಟೆ ಎಂದರು. ಇತ್ತೀಚಿನ ದಿನಗಳಲ್ಲಿ ಬಿಜೆಪಿ ಬಗ್ಗೆ ಮೃದು ಧೋರಣೆ ತೋರುತ್ತಿರುವ ಬಗ್ಗೆ ಪ್ರತಿಕ್ರಿಯಿಸಲು ಜಿ.ಟಿ. ದೇವೇಗೌಡ ನಿರಾಕರಿಸಿದರು.
ದೇಶಕ್ಕೆ ಮೋದಿ, ರಾಜ್ಯಕ್ಕೆ ಎಚ್ ಡಿಕೆ ಎಂದ ಸಚಿವ ಜಿ.ಟಿ ದೇವೇಗೌಡ
ಮೈಸೂರು ವಿಮಾನ ನಿಲ್ದಾಣದ ರನ್ ವೇ ನಿರ್ಮಾಣದ ಬಳಿ ಉಂಟಾದ ತೊಂದರೆ ಕುರಿತು ಮಾತನಾಡಿ, ಆ ಸಮಸ್ಯೆ ಸದ್ಯ ನಿವಾರಣೆಯಾಗಿದೆ. ಪ್ರಕಾಶ್ ಎಂಬುವವರು ರನ್ ವೇ ನಿರ್ಮಾಣಕ್ಕೆ ಜಮೀನು ಕೊಡುವುದಿಲ್ಲವೆಂದು ಪಟ್ಟು ಹಿಡಿದ್ದಿದ್ದರು. ಆದರೆ ಈಗ ಜಮೀನು ನೀಡಲು ಮುಂದೆ ಬಂದಿದ್ದಾರೆ. ಒಂದು ಎಕರೆಗೆ 2 ಕೋಟಿ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಸರ್ಕಾರ 1.5 ಕೋಟಿ ನೀಡಲು ತೀರ್ಮಾನಿಸಿತ್ತು. ಅವರು ಹೋರಾಟಕ್ಕೆ ಇಳಿದಿದ್ದರು. ಜಿಲ್ಲಾಧಿಕಾರಿಗಳು ಹಾಗೂ ನಾವು ಇಬ್ಬರೂ ಕೂತು ಮಾತನಾಡಿ ಅವರನ್ನು ಒಪ್ಪಿಸಿದ್ದೇವೆ. ಎಲ್ಲಾ ರೈತರೊಂದಿಗೆ ಮಾತನಾಡಿ ಎಲ್ಲ ಕೆಲಸವನ್ನು ಸರಾಗವಾಗಿ ಅಧಿಕಾರಿಗಳು ಮಾಡಲಿದ್ದಾರೆ ಎಂದರು.
ಕಾಮಗಾರಿ ವೀಕ್ಷಣೆ ವೇಳೆ ಕಾಲು ಜಾರಿದ ಸಚಿವ ಜಿ.ಟಿ. ದೇವೇಗೌಡ
ಬಿಜೆಪಿಯಿಂದ 50 ಕೋಟಿ ರೂಪಾಯಿ ಆಫರ್ ಬಂದಿತ್ತು ಎಂಬ ಪಿರಿಯಾಪಟ್ಟಣದ ಶಾಸಕ ಮಹದೇವ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಹೆಚ್ಚು ಮಾತನಾಡುವುದು ಸರಿಯಲ್ಲ. ಯಾರೇ ಆಗಲಿ ಈ ರೀತಿ ಮಾತನಾಡಬಾರದು. ಈ ಬಗ್ಗೆ ಮಹದೇವ ಅವರನ್ನೇ ಕೇಳುವುದು ಸೂಕ್ತ. ನನ್ನಿಂದ ಅದಕ್ಕೆ ಉತ್ತರ ಇಲ್ಲ ಎಂದರು.