ನಂಜನಗೂಡಿನ ರಥೋತ್ಸವ ನಿಂತಿದ್ದರೆ ಎದುರಾಗುತ್ತಿತ್ತೇ ದೊಡ್ಡ ಆಪತ್ತು?
ಮೈಸೂರು, ಏಪ್ರಿಲ್ 6: ವಜ್ರಾಭರಣಗಳಿಂದ ಅಲಂಕೃತಗೊಂಡ ಉತ್ಸವ ಮೂರ್ತಿ.. ಹೂವುಗಳಿಂದ ಸಿಂಗಾರಗೊಂಡ ರಥ.. ಸುತ್ತಲು ಜನ ಸಾಗರ.. ರಥದ ಮುಂಭಾಗ ಪುರೋಹಿತರು ವೇದ ಘೋಷ ಮಾಡುತ್ತ ಮುಂದೆ ಸಾಗುತ್ತಿದ್ದರೆ.. ಢಮರುಗ ಬಾರಿಸುತ್ತ.. 'ಹರ ಹರ ಮಹಾದೇವ' ಘೋಷಣೆ ಕೂಗುತ್ತ ಲಕ್ಷಾಂತರ ಭಕ್ತರು ತೇರು ಎಳೆಯಲು ಆರಂಭಿಸುತ್ತಿದ್ದರು.
- ಇದು 'ದಕ್ಷಿಣ ಕಾಶಿ' ಎಂದೇ ಜನಪ್ರಿಯತೆ ಪಡೆದಿರುವ ನಂಜನಗೂಡು ನಂಜುಂಡೇಶ್ವರ ಸನ್ನಿಧಿಯಲ್ಲಿ ಪ್ರತಿ ವರ್ಷ ಜರುಗುವ ಗೌತಮ ಪಂಚ ಮಹಾರಥೋತ್ಸವದಲ್ಲಿ ಕಂಡು ಬರುವ ಚಿತ್ರಣ.
ಕೊರೊನಾದಿಂದ ನಂಜನಗೂಡಿನಲ್ಲಿ ನಡೆಯಿತು ಪುಟ್ಟ ರಥೋತ್ಸವ
ಆದ್ರೆ, ಈ ವರ್ಷ ಇದೇ ಚಿತ್ರಣ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಕಾಣಿಸಲಿಲ್ಲ. ಮಾರಣಾಂತಿಕ ಕೊರೊನಾ ವೈರಸ್ ತಡೆಗಟ್ಟಲು ಲಾಕ್ ಡೌನ್ ಘೋಷಿಸಿರುವ ಹಿನ್ನಲೆಯಲ್ಲಿ ಏಪ್ರಿಲ್ 4 ರಂದು ನಡೆಯಬೇಕಿದ್ದ ಗೌತಮ ಪಂಚ ಮಹಾರಥೋತ್ಸವ ರದ್ದಾಗಿತ್ತು.
ಆದರೆ ಧಾರ್ಮಿಕ ಆಚರಣೆಗಳನ್ನು ನಿಲ್ಲಿಸದೆ, ದೇವಾಲಯದ ಪುರೋಹಿತರು ಸಾಂಕೇತಿಕವಾಗಿ, ಸಾಂಪ್ರದಾಯಿಕವಾಗಿ ಗೌತಮ ಪಂಚ ಮಹಾರಥೋತ್ಸವವನ್ನು ನೆರವೇರಿಸಿದರು. ದೊಡ್ಡ ತೇರಿನ ಬದಲು ಪುಟ್ಟ ತೇರಿನ ಮೂಲಕ ರಥೋತ್ಸವ ನಡೆಸಿದರು. ಲಕ್ಷಾಂತರ ಮಂದಿ ಸೇರುವ ಜಾಗದಲ್ಲಿ ಕೆಲವೇ ಮಂದಿ ಸೇರಿ ಈ ಆಚರಣೆ ಮಾಡಿದರು.
ನಂಜನಗೂಡಿನಲ್ಲಿ ನಡೆಯಬೇಕಿದ್ದ ಪ್ರಸಿದ್ಧ ಪಂಚಮಹಾರಥೋತ್ಸವ ರದ್ದು
ಈ ಆಚರಣೆ ಒಂದು ವೇಳೆ ನಿಂತು ಹೋಗಿದ್ದರೆ, ದೊಡ್ಡ ಆಪತ್ತೊಂದು ಕರ್ನಾಟಕ ಮತ್ತು ದೇಶಕ್ಕೆ ಕಾದಿತ್ತು. ಹೀಗಾಗಿ, ಗಂಡಾಂತರಕ್ಕೆ ಎಡೆ ಮಾಡಿಕೊಡದ ಪುರೋಹಿತರು, ದೇವಾಲಯದ ಒಳ ಆವರಣದಲ್ಲೇ ಅಗತ್ಯ ಶಾಸ್ತ್ರೋಕ್ತ ಸಂಪ್ರದಾಯಗಳನ್ನು ನೆರವೇರಿಸಿ ಲೋಕ ಕ್ಷೇಮಕ್ಕಾಗಿ ಪ್ರಾರ್ಥಿಸಿದರು.
ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಗಂಡಾಂತರ
''ಲೋಕ ಕ್ಷೇಮಕ್ಕಾಗಿ ಮಾಡುವ ಆಚರಣೆಗಳಿವು. ಹೀಗಾಗಿ, ಇದನ್ನ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ರಥೋತ್ಸವ ಮಾಡ್ಲಿಲ್ಲ ಅಂದ್ರೆ ಅಪಶಕುನ. ರಥೋತ್ಸವ ನೆರವೇರುವುದನ್ನು ನಿಲ್ಲಿಸಿದರೆ, ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಹಾನಿ ಆಗುತ್ತದೆ ಎಂಬ ಉಲ್ಲೇಖ ಇದೆ. ಹೀಗಾಗಿ, ಸಾಂಕೇತಿಕವಾಗಿ ಮತ್ತು ಸಾಂಪ್ರದಾಯಿಕವಾಗಿ ಆಚರಣೆ ಮಾಡಿದ್ದೇವೆ'' ಎಂದು ಪ್ರಧಾನ ಪುರೋಹಿತರಾದ ಶಿವಶಂಕರ ದೀಕ್ಷಿತರು ಒನ್ ಇಂಡಿಯಾಕ್ಕೆ ತಿಳಿಸಿದರು.
ಲೋಪವಿಲ್ಲದೆ ಜರುಗಿದ ರಥೋತ್ಸವ
''ಧಾರ್ಮಿಕ ವಿಧಾನಗಳನ್ನು ನಿಲ್ಲಿಸಬೇಡಿ ಅಂತ ಕಮಿಷನರ್ ಸುತ್ತೋಲೆ ಹೊರಡಿಸಿ, ಸಾಂಕೇತಿಕವಾಗಿ ರಥೋತ್ಸವ ನಡೆಸಲು ನಮಗೆ ಅವಕಾಶ ಮಾಡಿಕೊಟ್ಟರು. ಹೀಗಾಗಿ, ಯಾವುದೇ ಲೋಪವಿಲ್ಲದೆ ರಥೋತ್ಸವ ನೆರವೇರಿಸಿದ್ದೇವೆ. ಹೊರ ಆವರಣದಲ್ಲಿ ಮಾಡಬೇಕಿದ್ದನ್ನು, ಒಳ ಆವರಣದಲ್ಲಿ ಮಾಡಿದ್ದೇವೆ ಅಷ್ಟೇ. ಹೊರ ಆವರಣದಲ್ಲಿ ಇಲ್ಲಿನ ಕೆಲ ಭಕ್ತರು ಪುಟ್ಟ ಪುಟ್ಟ ರಥದ ತರಹ ಮಾಡಿ, ಅದನ್ನ ಎಳೆದಿದ್ದಾರೆ'' - ಶಿವಶಂಕರ ದೀಕ್ಷಿತರು
ಯಾವತ್ತೂ ನಿಂತಿಲ್ಲ.!
''ರಥೋತ್ಸವ ಇಲ್ಲಿಯವರೆಗೂ ಯಾವತ್ತೂ ನಿಂತಿಲ್ಲ. ಹಿಂದೆ ಪ್ಲೇಗ್ ಬಂದಾಗಲೂ, ಹಿರಿಯರು ಹೇಳುವ ಪ್ರಕಾರ, ಗುಡಿ ಸುತ್ತಲೂ ರಥೆ ಎಳೆದಿದ್ದಿದೆ. ಇವತ್ತಿಗೂ ಕೂಡ ದಿನಕ್ಕೆ ಆರು ಕಾಲ ದೇವರಿಗೆ ಅಭಿಷೇಕ ಮಾಡಲು ಅವಕಾಶ ನೀಡಿದ್ದಾರೆ. ಹಿಂದೊಮ್ಮೆ ಕರ್ಫ್ಯೂ ಇದ್ದಾಗಲೂ, ಅಭಿಶೇಕ ಮಾಡಲು ಎರಡು ಗಂಟೆಗಳ ಸಮಯಾವಕಾಶ ಕೊಟ್ಟಿದ್ದರು'' - ಶಿವಶಂಕರ ದೀಕ್ಷಿತರು
ಗೌತಮರ ಕಾಲದಿಂದಲೂ ರಥೋತ್ಸವ ನಡೆಯುತ್ತಾ ಬಂದಿದೆ
''ಗೌತಮರು ಬಂದು ಇಲ್ಲಿ ಉತ್ಸವ ಮೂರ್ತಿ ಪ್ರತಿಷ್ಟಾಪನೆ ಮಾಡಿದರು ಎಂಬ ಪ್ರತೀತಿ ಇದೆ. ಅವರ ಕಾಲದಿಂದಲೂ ರಥೋತ್ಸವ ನಡೆಯುತ್ತಲೇ ಬಂದಿದೆ. ಅಲ್ಲಿಂದ ಯಾವತ್ತೂ ಯಾವುದೇ ಧಾರ್ಮಿಕ ಕಾರ್ಯಕ್ರಮಗಳೂ ನಂಜನಗೂಡಿನಲ್ಲಿ ನಿಂತಿಲ್ಲ'' - ಶಿವಶಂಕರ ದೀಕ್ಷಿತರು
ಧಾರ್ಮಿಕ ಆಚರಣೆಗಳು
''ರಥೋತ್ಸವದ ವೇಳೆ ಮಾಡಬೇಕಾದ ಧಾರ್ಮಿಕ ಆಚರಣೆಯನ್ನೆಲ್ಲಾ ಮಾಡಿದ್ದೇವೆ. ದೇವಸ್ಥಾನದಲ್ಲಿ ಮೂರು ಆವರಣ ಇದೆ. ದೇವಸ್ಥಾನದ ಹೊರಗೆ ದೇವರನ್ನು ತರಬೇಡಿ ಎಂದು ಹೇಳಿದ್ದರಿಂದ ಗರ್ಭಗುಡಿ ಮತ್ತು ವಸಂತ ಮಂಟಪದ ಸುತ್ತ, ದೇವಾಲಯದ ಒಳ ಆವರಣದಲ್ಲಿ ಮಾಡಬೇಕಾದ ಕಾರ್ಯಕ್ರಮಗಳನ್ನು ಮಾಡಿದ್ದೇವೆ'' - ಶಿವಶಂಕರ ದೀಕ್ಷಿತರು
ಗೌತಮ ಮಹರ್ಷಿ
''ಇಲ್ಲಿ ಉತ್ಸವ ಮೂರ್ತಿ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಿದವರು ಗೌತಮ ಮಹರ್ಷಿ. ಹೀಗಾಗಿ, ಇಲ್ಲಿ ಜರುಗುವ ರಥೋತ್ಸವಕ್ಕೆ 'ಗೌತಮ ಪಂಚ ಮಹಾ ರಥ ಮಹೋತ್ಸವ' ಎಂದು ಹೆಸರು. ರಥೋತ್ಸವದ ವೇಳೆ ಒಂಭತ್ತು ದಿನಗಳ ಕಾಲ ವಿವಿಧ ಆಚರಣೆಗಳು ನಡೆಯುತ್ತವೆ'' - ಶಿವಶಂಕರ ದೀಕ್ಷಿತರು
ನಂಜನಗೂಡು ಶ್ರೀಕಂಠೇಶ್ವರ ದೇವಾಲಯ
ನಂಜನಗೂಡು ಶ್ರೀಕಂಠೇಶ್ವರ ದೇವಾಲಯ 'ದಕ್ಷಿಣ ಕಾಶಿ' ಎಂದೇ ಪ್ರಖ್ಯಾತಿ ಪಡೆದಿದೆ. ಇಲ್ಲಿನ ಈಶ್ವರ ಸ್ವಯಂಭು ಮೂರ್ತಿ. ಪರಶುರಾಮನಿಗೆ ಮಾತೃ ಹತ್ಯಾ ದೋಷ ನಿವಾರಣೆಯಾದ ಸ್ಥಳವಿದು. ಕೇಶಿ ಸಂಹಾರ ಕ್ಷೇತ್ರ ಅಂತಲೇ ಈ ಜಾಗ ಹೆಸರುವಾಸಿಯಾಗಿದೆ. ಈಶ್ವರ ಎರಡನೇ ಬಾರಿ ವಿಷ ಕುಡಿದ ಸ್ಥಳ ಇದಾಗಿದ್ದು, ಸ್ಕಂದ ಪುರಾಣದಲ್ಲಿ ಈ ಬಗ್ಗೆ ವಿವರಣೆ ಇದೆ.