ಎತ್ತಿನಗಾಡಿ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ರೇಷನ್ ವಿತರಿಸಿದ ಶಿಕ್ಷಕ
ಮೈಸೂರು, ಮೇ 26: ಕರ್ನಾಟಕದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಕಾರಣ ರಾಜ್ಯ ಸರ್ಕಾರ ೩ನೇ ಹಂತದ ಲಾಕ್ಡೌನ್ ಜಾರಿಗೊಳಿಸಿದೆ.
ಲಾಕ್ಡೌನ್ ಮಾರ್ಗಸೂಚಿಗಳನ್ವಯ ಶಾಲಾ- ಕಾಲೇಜುಗಳನ್ನು ಬಂದ್ ಮಾಡಿದ್ದು, 1 ರಿಂದ 9ನೇ ತರಗತಿಗಳಿಗೆ ಬೇಸಿಗೆ ರಜೆಯನ್ನೂ ಘೋಷಣೆ ಮಾಡಿದೆ.
ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ತುಂಬಲ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ರಾಯಪ್ಪ, ಎತ್ತಿನಗಾಡಿ ಮೂಲಕ ಮಕ್ಕಳ ಮನೆ ಬಾಗಿಲಿಗೆ ರೇಷನ್ ವಿತರಿಸಿದ್ದಾರೆ.
ತುಂಬಲ ಗ್ರಾಮದಲ್ಲಿ ಶಾಲಾ ಮಕ್ಕಳ ಮನೆಮನೆಗೆ ತೆರಳಿ ಆಹಾರ ವಿತರಣೆ ಮಾಡಿರುವ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ರಾಯಪ್ಪರ ವಿಭಿನ್ನ ಪ್ರಯತ್ನದ ವಿಡಿಯೋ ಎಲ್ಲೆಡೆ ಮೆಚ್ಚುಗೆ ಗಳಿಸಿದೆ.
ನಿತ್ಯವೂ ತುಂಬಲ ಗ್ರಾಮಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿಭಿನ್ನ ರೀತಿಯಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿರುವ ಮುಖ್ಯ ಶಿಕ್ಷಕ ರಾಯಪ್ಪ, ಲಾಕ್ಡೌನ್ ಸಂದರ್ಭದಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಮನೆ ಮನೆಗೆ ತೆರಳಿ ಪಾಠ ಮಾಡುತ್ತಾರೆ.
ಮುಖ್ಯ ಶಿಕ್ಷಕ ರಾಯಪ್ಪ ಸರ್ಕಾರದ ವಿದ್ಯಾಗಮ ಯೋಜನೆ ಶುರು ಮಾಡುವ ಮೊದಲೇ ಪಾಠ ಅರಂಭಿಸಿದ್ದರು. ಪ್ರತಿಯೊಂದು ಮಕ್ಕಳ ಓದಿನ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಸರ್ಕಾರಿ ಸಂಬಳ ಪಡೆದು ಕೇವಲ ಶಾಲೆಗಷ್ಟೇ ಸೀಮಿತವಾಗುವ ಶಿಕ್ಷಕರ ನಡುವೆ ರಾಯಪ್ಪ ಗೌಂಡಿ ನಿಜಕ್ಕೂ ಮಾದರಿ ಆಗಿದ್ದಾರೆ.