ಕಿಡಿಗೇಡಿಗಳಿಗೆ ಅಡ್ಡೆಯಾಯ್ತು ನವಿಲೂರ ವಸತಿಗೃಹ
ಮೈಸೂರು, ಜನವರಿ 20: ಪಿರಿಯಾಪಟ್ಟಣ ತಾಲೂಕು ನಂದಿನಾಥಪುರ ಗ್ರಾಮದ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಬರುವ ನವಿಲೂರು ಗ್ರಾಮದಲ್ಲಿ ಆರೋಗ್ಯ ಸಹಾಯಕಿಯರಿಗಾಗಿ ನಿರ್ಮಿಸಿರುವ ವಸತಿಗೃಹಗಳನ್ನು ಸಂಬಂಧಿಸಿದ ಇಲಾಖೆಗೆ ವಹಿಸದೇ ಇರುವ ಕಾರಣ ಕಿಡಿಗೇಡಿಗಳ, ಪುಂಡು ಪೋಕರಿಗಳ ಪಾಲಾಗುತ್ತಿದೆ.
ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಮತ್ತು ಆರೋಗ್ಯ ಕಾಪಾಡುವ ಸಲುವಾಗಿ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆದಿದ್ದು ಇಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಸಹಾಯಕಿಯರಿಗೆ ಅನುಕೂಲವಾಗುವಂತೆ ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಅದರಂತೆ ನವಿಲೂರು ಗ್ರಾಮದಲ್ಲಿ ನಿರ್ಮಿಸಲಾಗಿದೆ. ಆದರೆ ಇಲ್ಲಿ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದ್ದು, ವಸತಿಗೃಹಕ್ಕೆ ಕಲ್ಲು ಹೊಡೆಯುವುದು, ಕಿಟಿಕಿ ಬಾಗಿಲು ಮುರಿಯುವುದು ಮುಂತಾದ ಕೃತ್ಯಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ಮೂಲಸೌಲಭ್ಯ ಮತ್ತು ಭದ್ರತೆಯಿಲ್ಲದ ಕಾರಣ ಈ ವಸತಿಗೃಹಗಳಿಗೆ ಸಹಾಯಕಿಯರು ಬಂದಿಲ್ಲ ಎನ್ನಲಾಗಿದೆ.[ಮಲೆನಾಡಿನ ಆತಿಥ್ಯ, ಮನ ಮೆಚ್ಚುವ ಪರಿಸರಕ್ಕೆ 'ಅಮ್ತಿ ಹೋಂ ಸ್ಟೇ']
ನವಿಲೂರು, ಆಯರಬೀಡು, ಆಲನಹಳ್ಳಿ, ಭೂತನಹಳ್ಳಿ, ಸುತ್ತಮುತ್ತಲ ಗ್ರಾಮದಲ್ಲಿ ಕೂಲಿ ಕಾರ್ಮಿಕರೆ ಹೆಚ್ಚು ವಾಸಿಸುತ್ತಿದ್ದು, ಗರ್ಭಿಣಿ ಸ್ತ್ರೀಯರಿಗೆ ಮತ್ತು ಮಕ್ಕಳಿಗೆ ಆರೋಗ್ಯದ ಅರಿವು ಮೂಡಿಸುವ ಕಾರ್ಯವನ್ನು ಮಹಿಳಾ ಆರೋಗ್ಯ ಸಹಾಯಕಿಯರು ಮಾಡುತ್ತಿದ್ದಾರೆ. ಅವರ ಅನುಕೂಲಕ್ಕೆ ನವಿಲೂರಿನಲ್ಲಿ ಕಳೆದ 15 ವರ್ಷಗಳ ಹಿಂದೆ ವಸತಿ ನಿರ್ಮಿಸಿದ್ದರೂ ಅದು ಉಪಯೋಗಕ್ಕೆ ಬಾರದಂತಾಗಿದೆ. ಆದರೆ ವಸತಿಗೃಹಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದ ಕಾರಣ ಯಾರೂ ಕೂಡ ಇದರಲ್ಲಿ ವಾಸ್ತವ್ಯ ಹೂಡಲು ಮುಂದೆ ಬರುತ್ತಿಲ್ಲ. ಇದರಿಂದ ವಸತಿ ಗೃಹದ ಸುತ್ತ ಗಿಡಗಂಟಿ ಬೆಳೆದಿದ್ದು ಪಾಳು ಬಿದ್ದಿವೆ.
ಈಗಿನ ಪರಿಸ್ಥಿತಿಯಲ್ಲಿ ನವಿಲೂರಲ್ಲಿರುವ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಲು ಯಾವುದೇ ಆರೋಗ್ಯ ಸಹಾಯಕಿಯರಿಗೆ ಧೈರ್ಯ ಬರುತ್ತಿಲ್ಲ. ಜತೆಗೆ ಅವರಿಗೆ ರಕ್ಷಣೆ, ಅಗತ್ಯ ಸೌಲಭ್ಯ ಇಲ್ಲದ ಕಾರಣ ಇಲ್ಲಿ ಜೀವನ ಸಾಗಿಸುವುದು ಕಷ್ಟ ಸಾಧ್ಯವಾಗಿದೆ.ಇನ್ನು ಮುಂದೆಯಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಈ ವಸತಿಗೃಹಗಳನ್ನು ದುರಸ್ತಿಪಡಿಸಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ.