ಕೊರೊನಾ ಸನ್ನಿವೇಶವನ್ನೇ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ; ದೇವನೂರು ಮಹಾದೇವ
ಮೈಸೂರು, ಸೆಪ್ಟೆಂಬರ್ 5: ಕೊರೊನಾ ಭೀಕರ ವಾತಾವರಣದಲ್ಲಿ ಜನಸಮುದಾಯ ಧ್ವನಿ ತೆಗೆಯಲು ಕಷ್ಟಕರವಾದ ಸನ್ನಿವೇಶವನ್ನೇ ದುರ್ಬಳಕೆ ಮಾಡಿಕೊಂಡು, ಖಾಸಗಿ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಸರ್ವಸ್ವವನ್ನೂ ಧಾರೆ ಎರೆಯುವ ಕಾಯ್ದೆಗಳನ್ನು ಜಾರಿಗೆ ತರಲಾಗುತ್ತಿರುವುದನ್ನು ಗಮನಿಸಿದರೆ ದೆವ್ವ, ಭೂತಗಳು ಇಂದು ಭಾರತವನ್ನು ಆಳ್ವಿಕೆ ಮಾಡುತ್ತಿವೆ ಎಂದೆನಿಸುತ್ತದೆ ಎಂದು ಸಾಹಿತಿ ದೇವನೂರು ಮಹಾದೇವ ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ, ಸ್ವರಾಜ್ ಇಂಡಿಯಾ, ಜನಾಂದೋಲನ ಮಹಾಮೈತ್ರಿ, ಜನಚೇತನ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಸಿದ್ಧಾರ್ಥನಗರ ಕನಕ ಭವನದಲ್ಲಿ ಆಯೋಜಿಸಿದ್ದ "ಭೂ ಸುಧಾರಣಾ ಕಾಯ್ದೆ ತಿದ್ದುಪಡಿ: ಖಾಸಗೀಕರಣ ನೀತಿಗಳು, ಪರಿಣಾಮ ಮತ್ತು ಸವಾಲುಗಳ" ಕುರಿತು ರಾಜ್ಯಮಟ್ಟದ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇವನೂರು ಮಹಾದೇವಗೆ ಪತ್ರದ ಮೂಲಕವೇ ಉತ್ತರ ಕೊಟ್ಟ ಸುರೇಶ್ ಕುಮಾರ್!
"ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ಹೊರಡಿಸುವ ಸುಗ್ರೀವಾಜ್ಞೆ ಕೂಡ ರೈತರ ಏಳಿಗೆ ಎನ್ನುತ್ತಲೇ ಅವರ ಬದುಕನ್ನೇ ಎತ್ತಂಗಡಿ ಮಾಡಲಾಗುತ್ತದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರ ಸರ್ಕಾರದ ಪ್ರಗತಿಪರವಾದ 2013ರ ಭೂಸ್ವಾಧೀನ ಕಾಯ್ದೆಗೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ 2015ರಲ್ಲಿ ಸುಗ್ರೀವಾಜ್ಞೆ ತಂದು ಭೂ ಸುಧಾರಣೆಯ ಬುಡವನ್ನೇ ಕತ್ತರಿಸಿ ಧ್ವಂಸ ಮಾಡಲು ಹವಣಿಸಿತ್ತು. ಬ್ರಿಟಿಷ್ ಕಾಲದ 1894ರ ಕಾಯ್ದೆಯಲ್ಲಿ ಭೂಮಿಯ ಮಾಲೀಕರು ಆಕ್ಷೇಪ ಎತ್ತುವ ಅವಕಾಶವಾದರೂ ಇದೆ. ಆದರೆ ಆ ಬಿಜೆಪಿ ಸುಗ್ರೀವಾಜ್ಞೆ ಇದನ್ನು ಕಿತ್ತುಕೊಂಡಿತ್ತು. ಈ ಸುಗ್ರೀವಾಜ್ಞೆ ವಿರುದ್ಧ ಭುಗಿಲೆದ್ದ ಪ್ರತಿಭಟನೆಗಳು ಬಿಜೆಪಿ ಸುಗ್ರೀವಾಜ್ಞೆಯನ್ನು ತಡೆಗಟ್ಟುತ್ತದೆ. ಆಗ ಬಿಜೆಪಿ ನೇತೃತ್ವದ ಎನ್ಡಿಎ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯನ್ನು ಹಿಂಪಡೆಯುತ್ತದೆ, ಆದರೆ ಅದನ್ನು ರದ್ದು ಮಾಡಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಇದರ ವಾಸನೆ ಹಿಡಿದು ನೋಡುವುದಾದರೆ, ಟೆಸ್ಟಿಂಗ್ ಡೋಸ್ ಎಂಬಂತೆ ರಾಜ್ಯ ಸರ್ಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಸುಗ್ರೀವಾಜ್ಞೆ ತಂದಿರಬಹುದು ಎನಿಸುತ್ತದೆ. ಆ ಮೂಲಕ ರೈತರ ಹಿತಕಾಯುವ ದೇವರಾಜ ಅರಸು ಅವರ 1974ರ ಕಾಯ್ದೆಯನ್ನು ನಿರ್ದಯವಾಗಿ ಕತ್ತರಿಸಿ ಹಾಕಿದೆ. ಕೊರೊನಾ ಎಂಬ ದೇವರ ಆಟದಿಂದ ರಾಜ್ಯಗಳ ಬಾಬ್ತು ನೀಡಲು ಆಗುತ್ತಿಲ್ಲ ಎನ್ನುವ ಅರ್ಥ ಸಚಿವರನ್ನು ಭಾರತ ಪಡೆದಿದೆ. ಭಾರತದ ಒಕ್ಕೂಟ ವ್ಯವಸ್ಥೆಯ ಬುಡವನ್ನೇ ಕಡಿದು ಹಾಕಿ, ರಾಜ್ಯಗಳ ಸ್ಥಾನವನ್ನು ದೈನೇಸಿ ಸ್ಥಾನಕ್ಕೆ ತಳ್ಳುವ ಜಿಎಸ್ಟಿ ತಂದು ದೆವ್ವದ ಆಟ ಆಡಿದವರು ಯಾರು? ದೇಶದಲ್ಲಿ ನೋಟ್ ಬ್ಯಾನ್ ಜಾರಿಗೊಳಿಸಿ ಜನರ ಬದುಕನ್ನು ದುಸ್ವಪ್ನ ಮಾಡಿ ಭೂತದ ಆಟ ಆಡಿದವರು ಯಾರು ಎಂದು ಪ್ರಶ್ನಿಸಿದರು.