ಸರ್ಕಾರದಿಂದಲೇ ತಂಬಾಕು ಖರೀದಿ: ಸಂಸದ ಪ್ರತಾಪ ಸಿಂಹ
ಮೈಸೂರು, ಏಪ್ರಿಲ್ 10: ಲಾಕ್ಡೌನ್ ಮುಗಿದ ಬಳಿಕ ತಂಬಾಕು ಬೆಳೆಯನ್ನು ಸರ್ಕಾರವೇ ಖರೀದಿ ಮಾಡಲಿದೆ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಅವರು ರೈತರಿಗೆ ಅಭಯ ನೀಡಿದರು.
ಇಂದು ಮೈಸೂರಿನಲ್ಲಿ ಕರೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಬಾಕು ಮಂಡಳಿಯ ಮೂಲಕ ನಾವು ತಂಬಾಕು ಖರೀದಿ ಮಾಡುತ್ತೇವೆ. ರೈತರು ಆತಂಕ ಪಡುವ ಅಗತ್ಯ ಇಲ್ಲ. ಇದೇ ಮೊದಲ ಬಾರಿಗೆ 4 ವರ್ಷದಲ್ಲಿ ತಂಬಾಕು ಬೆಳೆ ಕಡಿಮೆ ಬೆಲೆಗೆ ಬಂದಿದೆ. ಆದರೆ ರೈತರು ಬೆಳೆದ ಬೆಲೆಗೆ ಸರಿಯಾದ ಬೆಲೆ ಸೃಷ್ಟಿಸುವ ಕೆಲಸ ಬೋರ್ಡ್ ಮಾಡಲಿದೆ ಎಂದರು.
ಎರಡೂವರೆ ಮಿಲಿಯನ್ ಕೆ.ಜಿ ಯಷ್ಟು ತಂಬಾಕು ಹಾಗೆಯೇ ಉಳಿದಿದೆ. ಮುಂದೆ ತಂಬಾಕು ಬೆಳೆಯಬೇಕೇ ಬೇಡವೇ ಎಂದು ರೈತರು ಕೇಳುತ್ತಿದ್ದಾರೆ. ಆದರೆ ರೈತರು ಧೈರ್ಯ ಕಳೆದುಕೊಳ್ಳುವುದು ಬೇಡ ಎಂದು ಹೇಳಿದರು.
ಜ್ಯುಬಿಲಿಯೆಂಟ್ ಮೇಲೆ ಪ್ರಕರಣ ದಾಖಲಿಸುವುದು ಕಾನೂನಿನಡಿಯಲಿ ಕಷ್ಟಸಾಧ್ಯ. ಕೋರ್ಟ್ಗೆ ಹೋದರೂ ಏನಂತ ದೂರು ಕೊಡೋದು? ಸರ್ಕಾರ ಚೀನಾದಿಂದ ಸರಕು ತರಬೇಡಿ ಅಂತ ಹೇಳಿತ್ತಾ? ಸರಕು ಬಂದಿರೋ ಬಗ್ಗೆ ಕೇಸ್ ದಾಖಲಿಸುವುದಾದರೆ, ತಬ್ಲಿಘ್ ಮೇಲು ದೂರು ದಾಖಲಿಸಬೇಕಾಗುತ್ತೆ ಎಂದರು.
ಅದೆಲ್ಲ ಆಗುವ ಮಾತಾ ನೀವೇ ಹೇಳಿ ಎಂದು ಪ್ರಶ್ನಿಸಿದರು. ಕಾರ್ಖಾನೆಗಿಂತ ಅಲ್ಲಿನ ಕಾರ್ಮಿಕರ ಹಿತ ಕಾಯಬೇಕಿದೆ. ಹಾಗೊಮ್ಮೆ ನಾವು ನೀವೂ ಎಲ್ಲ ಸೇರಿ ಕಂಪನಿ ಮುಚ್ಚಿಸೋಣ. ಆ ಬಳಿಕ ಸರ್ಕಾರ ಅಥವಾ ಖಾಸಗಿಯವರು ಆ ಕಾರ್ಮಿಕರಿಗೆ ಕೆಲಸ ಕೊಡ್ತಾರಾ? ಆ ಕುಟುಂಬದ ಜೀವನ ನಡೆಸ್ತಾರಾ?
ಆ ಕಾರ್ಮಿಕರು ಹಾಗೂ ಕಂಪನಿ ಮೇಲೆ ಅಂತಃಕರಣ ಇರಬೇಕಿದೆ. ಕಾರ್ಮಿಕರಿಗೆ ಸೋಂಕು ಬರಲಿ ಅಂತ ಕಂಟೈನರ್ ತರಿಸಿಲ್ಲ. ಗೊತ್ತಿಲ್ಲದ ಅಚಾತುರ್ಯ ನಡೆದು ಹೋಗಿದೆ. ಅದು ಹೇಗೆ ಆಗಿದೆ ಎಂಬ ಮೂಲ ಸದ್ಯ ಹುಡುಕುವ ಕೆಲಸ ಆಗಬೇಕಿದೆ. ಆ ಕೆಲಸ ಈಗಾಗಲೇ ನಡೆಯುತ್ತಿದ್ದು, ಶೀಘ್ರದಲ್ಲೇ ಗೊತ್ತಾಗಲಿದೆ ಎಂದು ತಿಳಿಸಿದರು.