"ಸರ್ಕಾರಿ ಅಧಿಕಾರಿಗಳು ಪಕ್ಷದ ಏಜೆಂಟ್ ಗಳಾಗಿದ್ದಾರೆ"
ಮೈಸೂರು, ನವೆಂಬರ್ 5: ಸರ್ಕಾರಿ ಅಧಿಕಾರಿಗಳು ಪಕ್ಷದ ಏಜೆಂಟ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಂಸದ ಆರ್. ಧ್ರುವ ನಾರಾಯಣ್ ಕಿಡಿಕಾರಿದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಿಚಾರಣೆ ಕುರಿತು ಇಂದು ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ಇ.ಡಿ, ಐಟಿ, ಸಿಬಿಐ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು. ಕಾನೂನಿನ ಚೌಕಟ್ಟಿನಲ್ಲಿ ತನಿಖೆ ನಡೆಯಬೇಕು. ವಿನಯ್ ಕುಲಕರ್ಣಿ ಈ ರೀತಿಯ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ ಅನ್ನೋ ವಿಶ್ವಾಸ ನಮಗಿದೆ ಎಂದರು.
ವಿನಯ್ ಕುಲಕರ್ಣಿ ವಿಚಾರಣೆ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ
ಡಿ.ಕೆ.ಶಿವಕುಮಾರ್ ಮೇಲೆ ಇ.ಡಿ ರೈಡ್ ಆದಾಗ ಅವರ ಜೊತೆ ವಿನಯ್ ಕುಲಕರ್ಣಿ ಇದ್ದರು. ಆಗ ಡಿ.ಕೆ.ಶಿವಕುಮಾರ್ ಅವರಿಗೂ ಬಿಜೆಪಿ ಸೇರ್ಪಡೆಗೊಳ್ಳುವಂತೆ ಆಮಿಷ ಒಡ್ಡಲಾಗಿತ್ತು. ಆದರೆ, ಡಿ.ಕೆ.ಶಿವಕುಮಾರ್ ಬಿಜೆಪಿ ಸೇರಲಿಲ್ಲ. ಬಳಿಕ ಮತ್ತೆ ಅವರ ಮನೆಯ ಮೇಲೆ ದಾಳಿ ಮಾಡಲಾಯಿತು. ಈಗಲೂ ಇದೇ ರೀತಿ ತನಿಖಾ ಸಂಸ್ಥೆಗಳ ಅಧಿಕಾರಿಗಳಿಂದ ವಿನಯ್ ಕುಲಕರ್ಣಿ ಅವರನ್ನು ಅನಗತ್ಯವಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಧ್ರುವನಾರಾಯಣ್ ಆರೋಪಿಸಿದರು.
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.