ಅಧಿಕಾರಿ ಪತ್ನಿ ಸಾವಿಗೆ ಟ್ವಿಸ್ಟ್: ಅನೈತಿಕ ಸಂಬಂಧ ವಿರೋಧಿಸಿದ್ದಕ್ಕೆ ಕೊಲೆ!
ಮೈಸೂರು, ಮಾ. 09: ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೈಸೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ವೆಂಕಟಪ್ಪ ಪತ್ನಿ ನಾಗವೇಣಿ ಅಲಿಯಾಸ್ ಮಣಿ (41) ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ವೆಂಕಟಪ್ಪನ ಅನೈತಿಕ ಸಂಬಂಧ ವಿರೋಧಿಸಿದ್ದೆ ಪತ್ನಿ ನಾಗವೇಣಿ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ.
ಮೈಸೂರು ತಾಲೂಕಿನ ಸೋಮನಾಥಪುರದಲ್ಲಿ ಪತಿ ವೆಂಕಟಪ್ಪ ಹಾಗೂ ಪತ್ನಿ ನಾಗವೇಣಿ ವಾಸವಿದ್ದರು. ಕಳೆದ ಮಾರ್ಚ್ 3 ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನಾಗವೇಣಿ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಸತತ 7 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನೊಂದಿಗೆ ಹೋರಾಡಿದ ನಾಗವೇಣಿ ಇಂದು ಮೃತಪಟ್ಟಿದ್ದಾರೆ.
ಮೈಸೂರಲ್ಲಿ ಪತ್ನಿಯ ಕೊಲೆಗೆ ಯತ್ನಿಸಿದ ಸಿಡಿಪಿಒ ಅಧಿಕಾರಿ
ಪತ್ನಿಯನ್ನು ಕೊಲೆ ಮಾಡಿರುವ ಆರೋಪ ಎದುರಿಸುತ್ತಿರುವ ವೆಂಕಟಪ್ಪ, ಮೈಸೂರು ಜಿಲ್ಲೆ ಟಿ.ನರಸಿಪುರ ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶುಯೋಜನಾಧಿಕಾರಿ (CDPO)ಯಾಗಿದ್ದಾರೆ. ಅನೈತಿಕ ಸಂಬಂಧ ಹೊಂದಿದ್ದನ್ನು ವಿರೋಧಿಸಿದ್ದಕ್ಕೆ ವೆಂಕಟಪ್ಪ ಅವರೇ ಕೊಲೆಗೆ ಯತ್ನಿಸಿದ್ದಾರೆಂದು ನಾಗವೇಣಿ ಪೋಷಕರು ಮೈಸೂರಿನ ಜಯಪುರ ಪೊಲೀಸ್ ಠಾಣೆಯಲ್ಲಿ ಮಾರ್ಚ್ 5 ರಂದು ದೂರು ದಾಖಲಿಸಿದ್ದಾರೆ. ಆದರೆ ಮೈಸೂರು ಪೊಲೀಸರು ಇನ್ನೂ ಆರೋಪಿಯ ಬಂಧನಕ್ಕೆ ಮುಂದಾಗಿಲ್ಲ.
ನಿರಂತರ ಕಿರುಕುಳ, ನೇಣು ಬಿಗಿದ ಸ್ಥಿತಿಯಲ್ಲಿ ನಾಗವೇಣಿ ಪತ್ತೆ
ಸಿಡಿಪಿಒ ವೆಂಕಟಪ್ಪ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಇದನ್ನು ಪ್ರಶ್ನಿಸುತ್ತಿದ್ದ ನಾಗವೇಣಿ ಅವರಿಗೆ ನಿರಂತರ ದೈಹಿಕ, ಮಾನಸಿಕ ಹಿಂಸೆ ಕೊಡುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ. ಮಾರ್ಚ್ 3ರಂದು ನಾಗವೇಣಿ ನೇಣು ಬಿಗಿದ ಸ್ಥಿತಿಯಲ್ಲಿ ಮೈಸೂರು ತಾಲೂಕಿನ ಸೋಮನಾಥಪುರದಲ್ಲಿ ಪತಿಯೊಂದಿಗೆ ವಾಸವಿದ್ದ ಮನೆಯಲ್ಲಿ ಪತ್ತೆಯಾಗಿದ್ದರು. ನಂತರ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸುವಾಗಲೇ ಪ್ರಜ್ಞೆ ಕಳೆದುಕೊಂಡಿದ್ದ ನಾಗವೇಣಿ, ಚಿಕಿತ್ಸೆಗೆ ಸ್ಪಂದಿಸದೆ ಇವತ್ತು ಕೊನೆಯುಸಿರೆಳೆದಿದ್ದಾರೆ.
ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಪುತ್ರಿ ಮದುವೆ ಮಾಡಿದ್ದ ವೆಂಕಟ್ಟಪ್ಪ
ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ನಿಡಗಟ್ಟ ಸಮೀಪದ ವಿ.ದೊಡ್ಡ ಗ್ರಾಮದ ವೆಂಕಟಪ್ಪ, ಅದೇ ಗ್ರಾಮದ ಮಹಿಳೆಯೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಗಾರ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದ ಆ ಮಹಿಳೆಯ ಮಗಳ ಮದುವೆಯನ್ನೂ ಅದ್ದೂರಿಯಾಗಿ ಇತ್ತೀಚಿಗೆ ವೆಂಕಟಪ್ಪ ಮಾಡಿಕೊಟ್ಟಿದ್ದ. ಜೊತೆಗೆ ಬೆಂಗಳೂರಿನ ತಾವರೆಕೇರೆ ಬಳಿ ಸೈಟ್ವೊಂದನ್ನು ಖರೀದಿಸಿ ಆ ಮಹಿಳೆಯ ಹೆಸರಿಗೆ ನೋಂದಣಿ ಮಾಡಿಸಲು ಮುಂದಾಗಿದ್ದ. ಮದುವೆ, ಸೈಟ್ ನೋಂದಣಿ ಸೇರಿದಂತೆ ಎಲ್ಲ ವಿಷಯಗಳು ನಾಗವೇಣಿಗೆ ಗೊತ್ತಾಗಿದ್ದವು. ತಾವರಕೇರೆ ಸೈಟ್ ವಿಚಾರದಲ್ಲಿ ಪತಿ, ಪತ್ನಿ ಮಧ್ಯೆ ಮತ್ತೆ ಜಗಳವಾಗಿತ್ತು. ಪತಿಯ ಅನೈತಿಕ ವ್ಯವಹಾರಗಳಿಂದ ಬೇಸತ್ತ ನಾಗವೇಣಿ ಎಲ್ಲ ವಿಷಯಗಳನ್ನು ತನ್ನ ಪೋಷಕರಿಗೆ ತಿಳಿಸುವುದಾಗಿ ಪತಿ ವೆಂಕಟ್ಟಪ್ಪನಿಗೆ ಬೆದರಿಕೆ ಹಾಕಿದ್ದರು. ಬೆದರಿಕೆಗೆ ಹೆದರಿದ್ದ ವೆಂಕಟಪ್ಪ ನೇಣು ಬಿಗಿದು ಪತ್ನಿಯನ್ನು ಕೊಲೆ ಮಾಡಿದ್ದಾರೆಂದು ನಾಗವೇಣಿ ಪೋಷಕರು ಆರೋಪಿಸಿದ್ದಾರೆ.
ಹುಣಸೂರು ಸಿಡಿಪಿಒಯಿಂದ ಕೊಲೆ ಯತ್ನ; ಚಿಕಿತ್ಸೆ ಫಲಿಸದೇ ಪತ್ನಿ ಸಾವು
ನೈಟ್ ಡ್ಯೂಟಿ ನೆಪದಲ್ಲಿ ರಾತ್ರಿ ಮನೆಯಿಂದ ಹೋಗುತ್ತಿದ್ದ ವೆಂಕಟಪ್ಪ
ಮದುವೆಯಾದ ಹೊಸತರಲ್ಲಿ ನೈಟ್ ಡ್ಯೂಟಿಯಿದೆ ಎಂದು ಪತ್ನಿಗೆ ಹೇಳಿ ಸಿಡಿಪಿಒ ವೆಂಕಟಪ್ಪ ಮನೆಯಿಂದ ಹೊರಗೆ ಹೋಗುತ್ತಿದ್ದ. ಅಂಗನವಾಡಿಗಳಿಗೆ ಸರಬರಾಜು ಆಗುವ ಮಕ್ಕಳ ಆಹಾರ ರಾತ್ರಿ ಕಳ್ಳಸಾಗಣೆ ಆಗುತ್ತದೆ, ಅದನ್ನು ರೇಡ್ ಮಾಡುವ ಮೂಲಕ ತಡೆಯಬೇಕು ಎಂದು ಸುಳ್ಳುಹೇಳುತ್ತಿದ್ದ. ಆದರೆ ಇತ್ತೀಚಿಗೆ ಪತಿಯ ಎಲ್ಲ ಕಳ್ಳವ್ಯವಹಾರಗಳು ಗೊತ್ತಾಗಿದ್ದವು. ನೈಟ್ ಡ್ಯೂಟಿ ನೆಪದಲ್ಲಿ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಮನೆಗೆ ವೆಂಕಟಪ್ಪ ಹೋಗುತ್ತಿದ್ದ ಎಂಬುದು ನಾಗವೇಣಿ ಅವರಿಗೆ ಗೊತ್ತಾಗಿತ್ತು. ಇತ್ತೀಚೆಗೆ ವಿ. ದೊಡ್ಡಿಯಿಂದ ಕೋಣನಕುಂಟೆ ಬಳಿ ಮನೆಮಾಡಿ ಆ ಮಹಿಳೆಯನ್ನು ವೆಂಕಟಪ್ಪ ಇರಿಸಿದ್ದ ಎಂದು ಮೃತ ನಾಗವೇಣಿ ಪೋಷಕರು ಆರೋಪಿಸಿದ್ದಾರೆ.
FIR ದಾಖಲಿಸಲು ಮೀನಾಮೇಷ ಎಣಿಸಿದ್ದ ಜಯಪುರ ಪೊಲೀಸರು
ಆಸ್ಪತ್ರೆಗೆ ದಾಖಲಿಸಲಾಗಿದ್ದ ನಾಗವೇಣಿ ಅವರು ಚೇತರಿಸಿ ಕೊಳ್ಳುತ್ತಾರೆಂದು ಪೋಷಕರು ಭರವಸೆ ಇಟ್ಟುಕೊಂಡಿದ್ದರು. ಆದರೆ ಚಿಕಿತ್ಸೆಗೆ ಸ್ಪಂಧಿಸದೇ ಇದ್ದಾಗ ಮಾರ್ಚ್ 5 ರಂದು ಬೆಳಗ್ಗೆ ಜಯಪುರ ಪೊಲೀಸ್ ಠಾಣೆಗೆ ಪೋಷಕರು ದೂರು ಕೊಡಲು ಹೋಗಿದ್ದರು. ಆದರೆ ಕೊಲೆಯತ್ನ ಎಂದು ದೂರು ದಾಖಲಿಸಿಕೊಳ್ಳಲು ಜಯಪುರ ಪೊಲೀಸರು ಮುಂದಾಗಿರಲಿಲ್ಲ. ಬೆಳಗ್ಗೆಯಿಂದ ಸಂಜೆಯವರೆಗೆ ಪೋಷಕರನ್ನು ಕಾಯಿಸಿದ್ದ ವೃತ್ತ ನಿರೀಕ್ಷಕ ಜೀವನ್ ಕೆ ರಾತ್ರಿ 8 ಗಂಟೆಗೆ FIR ದಾಖಲಿಸಿಕೊಂಡು ದೂರುದಾರರಿಗೆ ಕೊಟ್ಟಿದ್ದಾರೆ. FIR ದಾಖಲಾಗಿದ್ದು ರಾತ್ರಿ 8 ಗಂಟೆಗೆ ಆದರೆ FIRನಲ್ಲಿ ಸಂಜೆ 5 ಗಂಟೆ ಎಂದು ನಮೂದಿಸಲಾಗಿದೆ ಎಂದು ನಾಗವೇಣಿ ಸಹೋದರ ಆರೋಪಿಸಿದ್ದಾರೆ.
FIR ಆಗಿ ಐದು ದಿನಗಳು ಕಳೆದಿದ್ದರೂ ಆರೋಪಿ ಸಹಾಯಕ ಶಿಶುಯೋಜನಾಧಿಕಾರಿ ವೆಂಕಟಪ್ಪ ಅವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿಲ್ಲ. ರಾಜಕೀಯ ವ್ಯಕ್ತಿಗಳ ಮೂಲಕ ವೆಂಕಟಪ್ಪ ಪೊಲೀಸರ ಮೇಲೆ ಪ್ರಭಾವ ಬೀರಿದ್ದಾರೆಂದು ನಾಗವೇಣಿ ಅವರ ಸಂಬಂಧಿಕರು ಆರೋಪಿಸುತ್ತಿದ್ದಾರೆ. ಈಗಲಾದರೂ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣಗೆ ಒಳಪಡಿಸುತ್ತಾರೆಂಬ ನಂಬಿಕೆಯಲ್ಲಿ ನತದೃಷ್ಟ ನಾಗವೇಣಿ ಪೋಷಕರಿದ್ದಾರೆ.