ಸರ್ಕಾರದ ಭರವಸೆ ಠುಸ್; ತಾವೇ ಗ್ರಂಥಾಲಯ ಕಟ್ಟಿದ ಸೈಯದ್ ಇಸಾಕ್!
ಮೈಸೂರು, ಜನವರಿ 18; ತನ್ನ ಕನ್ನಡಾಭಿಮಾನದಿಂದಲೇ ಎಲ್ಲರ ಗಮನ ಸೆಳೆದಿದ್ದ ಮೈಸೂರಿನ ಕನ್ನಡ ಪ್ರೇಮಿ ಸೈಯದ್ ಇಸಾಕ್, ಇದೀಗ ಮತ್ತೊಮ್ಮೆ ತನ್ನ ಭಾಷಾಭಿಮಾನದಿಂದಲೇ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಸರ್ಕಾರ ಕೊಟ್ಟ ಭರವಸೆಗೂ ಕಾಯದೆ ಖುದ್ದು ತಾವೇ ಶೆಲ್ಟರ್ ನಿರ್ಮಿಸಿ, ಗ್ರಂಥಾಲಯ ಆರಂಭಿಸುವ ಮೂಲಕ ಮತ್ತೊಮ್ಮೆ ತಮ್ಮ ಭಾಷಾಭಿಮಾನವನ್ನು ಮೆರೆದಿದ್ದಾರೆ. ಸೈಯದ್ ಇಸಾಕ್ ಈ ಹಿಂದೆ ನಡೆಸುತ್ತಿದ್ದ ಗ್ರಂಥಾಲಯ ಬೆಂಕಿಗೆ ಆಹುತಿಯಾಗಿತ್ತು.
ಸೈಯದ್ ಇಸಾಕ್ ಗ್ರಂಥಾಲಯಕ್ಕೆ ಬೆಂಕಿ; ಕಾರಣ ಬಹಿರಂಗ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಲೆಮರೆ ಕಾಯಿಯಂತೆ ಕನ್ನಡಕ್ಕಾಗಿ ದುಡಿಯುತ್ತಿದ್ದ ಸೈಯದ್ ಇಸಾಕ್, ಒಂಭತ್ತು ತಿಂಗಳ ಹಿಂದೆ ಸಂಭವಿಸಿದ ಬೆಂಕಿ ಅವಘಡದ ಮೂಲಕ ಮೈಸೂರು ಸೇರಿದಂತೆ ರಾಜ್ಯದ ನಾನಾ ಭಾಗದ ಜನರಿಗೆ ಪರಿಚಿತರಾದರು. ಮೈಸೂರಿನ ಎನ್. ಆರ್. ಕ್ಷೇತ್ರ ವ್ಯಾಪ್ತಿಯ ರಾಜೀವ್ ನಗರ ಬಡಾವಣೆಯಲ್ಲಿ ಕನ್ನಡ ಕಡಿಮೆ ಬಳಕೆ ಇರುವ ಪ್ರದೇಶದಲ್ಲಿ ಕನ್ನಡ ಸಾರ್ವಜನಿಕ ಗ್ರಂಥಾಲಯ ಕಟ್ಟಿ 10 ವರ್ಷಗಳ ಕಾಲ ನಡೆಸಿದ್ದರು.
ಸೈಯದ್ ಇಸಾಕ್ ಅವರಿಗೆ ಧರ್ಮಗ್ರಂಥಗಳ ಪುಸ್ತಕ ನೀಡಿದ ಸಚಿವ ಎಸ್ಟಿಎಸ್
ತಾವು ಅನಕ್ಷರಸ್ತರಾದರು ಕೂಲಿ ಮಾಡಿ ಅದರಿಂದ ಬಂದ ಹಣದಲ್ಲಿ ಸಣ್ಣದೊಂದು ಗುಡಿಸಲು ನಿರ್ಮಿಸಿ, ಸಾರ್ವಜನಿಕ ಗ್ರಂಥಾಲಯ ನಡೆಸುವ ಮೂಲಕ ಭಾಷಾಭಿಮಾನ ಮೆರೆದಿದ್ದರು. ಆದರೆ ದುರಾದೃಷ್ಟವಶಾತ್ ಕಿಡಿಗೇಡಿಯೊಬ್ಬ ಮಾಡಿದ ಎಡವಟ್ಟಿನಿಂದಾಗಿ ವರ್ಷಗಳ ಕಾಲದಿಂದ ಇದ್ದ ಇಸಾಕ್ ಅವರ ಗ್ರಂಥಾಲಯ, ಬೆಂಕಿಗೆ ಆಹುತಿಯಾಗಿತ್ತು. ಈ ವೇಳೆ ಗುಡಿಸಲಿನಲ್ಲಿದ್ದ ಪುಸ್ತಕಗಳು ಸಹ ಸುಟ್ಟು ಹೋಗಿದ್ದವು.
ಪೊಲೀಸ್ ಠಾಣೆಯಲ್ಲಿ ಗ್ರಂಥಾಲಯ ತೆರೆದ ಮೈಸೂರಿನ ಇನ್ಸ್ಪೆಕ್ಟರ್!
ಕನ್ನಡಿಗರನ್ನು ಬಡಿದೆಬ್ಬಿಸಿದ ಈ ಘಟನೆ
ಅಂದು ಸಂಭವಿಸಿದ ಬೆಂಕಿ ಅನಾಹುತ ಅದೆಷ್ಟೋ ಕನ್ನಡದ ಮನಸ್ಸುಗಳನ್ನು ಬಡಿದೆಬ್ಬಿಸಿತು. ಸರ್ಕಾರ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಸೈಯದ್ ಇಸಾಕ್ ಮಾಡುತ್ತಿದ್ದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಜೊತೆಗೆ ಬೆಂಕಿ ಅನಾಹುತದಲ್ಲಿ ಗ್ರಂಥಾಲಯ ಸುಟ್ಟುಹೋದ ಬಗ್ಗೆ ಮರುಕ ವ್ಯಕ್ತಪಡಿಸಿದ್ದರು. ಈ ನಡುವೆ ಗ್ರಂಥಾಲಯ ಸುಟ್ಟು ಕರಕಲಾದಾಗ ಕರ್ನಾಟಕ ಮಾತ್ರವಲ್ಲದೆ ಹೊರ ದೇಶದಿಂದ ಅನುಕಂಪ ಹಾಗೂ ಆನ್ಲೈನ್ ಮೂಲಕ ಕ್ರೌಡ್ ಫಂಡಿಂಗ್ನಲ್ಲಿ ಲಕ್ಷಾಂತರ ರೂ. ಸಂಗ್ರಹವಾಗಿತ್ತು. ಆದರೆ ಸರ್ಕಾರ ಮಧ್ಯ ಪ್ರವೇಶಿಸಿ ತಾನು ಗ್ರಂಥಾಲಯ ಕಟ್ಟಿಸಿಕೊಡುವ ಭರವಸೆ ನೀಡಿತು. ಇದರಿಂದ ಕ್ರೌಡ್ ಫಂಡಿಂಗ್ ಮೂಲಕ ಹಣ ನೀಡಿದವರಿಗೆ ಹಣವನ್ನು ವಾಪಸ್ಸು ನೀಡಲಾಯಿತು.
ತಿಂಗಳಾದರೂ ಈಡೇರದ ಸರ್ಕಾರದ ಭರವಸೆ
ಈ ಎಲ್ಲಾ ಬೆಳವಣಿಗೆಗಳು ನಡೆದ ತಿಂಗಳುಗಳೇ ಕಳೆದರೂ ಗ್ರಂಥಾಲಯ ನಿರ್ಮಿಸಿಕೊಡುವ ಕುರಿತು ಸರ್ಕಾರ ನೀಡಿದ್ದ ಭರವಸೆ ಕಾರ್ಯರೂಪಕ್ಕೆ ಬಾರದ ಹಿನ್ನೆಲೆಯಲ್ಲಿ ರಾಜೀವ್ ನಗರ ಪುಸ್ತಕ ಪ್ರೇಮಿ ಸೈಯದ್ ಇಸಾಕ್, ತಾವೇ ಶೆಲ್ಟರ್ ನಿರ್ಮಿಸಿ ಗ್ರಂಥಾಲಯ ಆರಂಭಿಸಿದ್ದು, ಓದುಗರ ಭೇಟಿಗೂ ಅವಕಾಶ ನೀಡಿದ್ದಾರೆ. ಅಲ್ಲದೇ ಗಣರಾಜ್ಯೋತ್ಸವಕ್ಕೆ ಗ್ರಂಥಾಲಯವನ್ನು ಅಧಿಕೃತವಾಗಿ ಉದ್ಘಾಟಿಸುವ ತಯಾರಿ ಸಹ ಮಾಡಿಕೊಂಡಿದ್ದಾರೆ.
"ಸರ್ಕಾರ ಆಸೆ ತೋರಿಸಿ 9 ತಿಂಗಳು ಕಳೆಯಿತು. ಏಪ್ರಿಲ್ನಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡೋಣ ಎಂದ ಅಧಿಕಾರಿಗಳು ಕಾಣುತ್ತಿಲ್ಲ. ಸರ್ಕಾರದ ಮೇಲಿನ ನಂಬಿಕೆ ಕಳೆದು ಹೋಗಿದೆ. ಇನ್ನೂ ಸರ್ಕಾರದ ಮೇಲಿಟ್ಟಿದ್ದ ವಿಶ್ವಾಸದಿಂದ ಪ್ರಯೋಜನವಿಲ್ಲ ಎಂದು ಗ್ರಂಥಾಲಯ ನಾನೇ ನಿರ್ಮಿಸಿದ್ದೇನೆ" ಎಂದು ಸೈಯದ್ ಇಸಾಕ್ ಹೇಳಿದ್ದಾರೆ.
ದಾನಿಗಳು ಹಣ ನೀಡಿದ್ದರು
"ಗ್ರಂಥಾಲಯ ಸುಟ್ಟು ಹೋದ ಸಂದರ್ಭದಲ್ಲಿ ಜಮೀರ್ ಅಹಮದ್ 2 ಲಕ್ಷ ರೂ., ಪ್ರತಾಪ್ ಸಿಂಹ 50 ಸಾವಿರ ರೂ., ಎಸ್. ಟಿ. ಸೋಮಶೇಖರ್ 25 ಸಾವಿರ ರೂ., ಸುತ್ತೂರು ಶ್ರೀಗಳು ನೀಡಿದ್ದ 10 ಸಾವಿರ ರೂ. ಸೇರಿದಂತೆ ಎಲ್ಲಾ ದಾನಿಗಳಿಂದ ಸಂಗ್ರಹಿಸಿದ್ದ 3.45 ಲಕ್ಷ ರೂ. ಅನ್ನು ಬ್ಯಾಂಕಿನಲ್ಲಿ ಇಟ್ಟಿದ್ದೆ. ಇದಕ್ಕೆ ಸ್ವಲ್ಪ ಹಣ ಸೇರಿಸಿ ಗ್ರಂಥಾಲಯ ನಿರ್ಮಿಸಿದ್ದೇನೆ. ಇದರ ಕೆಲಸ ಬಹುತೇಕ ಪೂರ್ಣಗೊಂಡಿದ್ದರೂ, ಎಲ್ಲಾ ಪುಸ್ತಕ ಜೋಡಿಸಲು ಜಾಗ ಸಾಲುತ್ತಿಲ್ಲ. ಜೊತೆಗೆ ಭದ್ರತೆ ಸಲುವಾಗಿ ಸಿಸಿಟಿವಿ ಅಳವಡಿಸಬೇಕಿದೆ. ಹೀಗೆ ಕೆಲವು ಕೆಲಸಕ್ಕೆ ಹಣದ ಕೊರತೆ ಉಂಟಾಗಿದೆ. ಗ್ರಂಥಾಲಯ ನಿರ್ಮಿಸಿದ ಬಳಿಕ ಮಕ್ಕಳು ಮತ್ತು ಓದುಗರು ಹೆಚ್ಚಾಗಿ ಬರುತ್ತಿದ್ದಾರೆ" ಎಂದು ಸಂತಸ ವ್ಯಕ್ತಪಡಿಸಿದರು.
ವಾಚ್ಮ್ಯಾನ್ ಕೆಲಸ ಕೊಡಿಸಿ
"ಗ್ರಂಥಾಲಯಕ್ಕೆ ಜಾಗ ಕೊಟ್ಟ ಮುಡಾಗೆ ನಾನು ಅಭಾರಿಯಾಗಿದ್ದೇನೆ. ಆದರೆ ಸರ್ಕಾರದ ಮೇಲಿನ ವಿಶ್ವಾಸವಿಲ್ಲ. ಇತ್ತ ಗ್ರಂಥಾಲಯವನ್ನು ಕಟ್ಟಿಸಿ ಕೊಡದ ಸರ್ಕಾರ, ಪರಿಹಾರ ಸಹ ದೊರೆಯಲಿಲ್ಲ. ಆದರೆ ದೇವರ ದಯೆಯಿಂದ ಮತ್ತೆ ಶೆಲ್ಟರ್ನಲ್ಲೇ ಗ್ರಂಥಾಲಯ ಕಟ್ಟಿಸಿದ್ದೇನೆ. ತಿಂಗಳಿಗೆ ಗ್ರಂಥಾಲಯ ನಿರ್ವಹಣೆಗೆ ಹತ್ತುವರೆ ಸಾವಿರ ರೂ. ತಗಲುತ್ತದೆ. 10 ವರ್ಷದಿಂದ ಕೂಲಿ ಮಾಡುತ್ತಲೇ ಗ್ರಂಥಾಲಯ ನಿರ್ವಹಣೆ ಮಾಡುತ್ತಿದ್ದೆ, ಈಗ ವಯಸ್ಸು ಆಗಿದೆ ಎಂದು ಯಾರು ಸಹ ನನ್ನನ್ನು ಕೆಲಸಕ್ಕೆ ಕರೆಯುತ್ತಿಲ್ಲ. ಗ್ರಂಥಾಲಯ ನಿರ್ವಹಣೆ ಕೆಲಸ ಮಾಡಲು ನಿರ್ಧಾರಿಸಿದ್ದೇನೆ. ಹೀಗಾಗಿ ಯಾರಾದರೂ ರಾತ್ರಿ ಪಾಳಿಯ ವ್ಯಾಚ್ಮ್ಯಾನ್ ಕೆಲಸ ಕೊಡಿಸಿ" ಎಂದು ಸೈಯದ್ ಇಸಾಕ್ ಮನವಿ ಮಾಡಿದ್ದಾರೆ.
Recommended Video