ದಸರಾ ಮೊದಲ ಹೆಜ್ಜೆ 'ಯುವಸಂಭ್ರಮ'ಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಚಾಲನೆ
ಮೈಸೂರು, ಸೆಪ್ಟೆಂಬರ್ 18: ನಾಡಹಬ್ಬ ಮೈಸೂರು ದಸರಾದ ಮೊದಲ ಕಾರ್ಯಕ್ರಮವಾದ ಯುವ ಸಂಭ್ರಮಕ್ಕೆ ನಟ ಗೋಲ್ಡನ್ ಸ್ಟಾರ್ ಗಣೇಶ್ ದೀಪ ಬೆಳಗಿಸಿ, ನಗಾರಿ ಬಾರಿಸುವ ಮೂಲಕ ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ.
ಮೈಸೂರು ದಸರಾದ ಮೊದಲ ಹೆಜ್ಜೆ ಆರಂಭವಾಗುವುದು ಯುವ ಸಂಭ್ರಮದ ಕಾರ್ಯಕ್ರಮದ ಮೂಲಕ. ಈ ಪ್ರಥಮ ಕಾರ್ಯಕ್ರಮಕ್ಕೆ ನಟ ಗೋಲ್ಡನ್ ಸ್ಟಾರ್ ಗಣೇಶ್ ದೀಪ ಬೆಳಗಿಸಿ, ನಗಾರಿ ಬಾರಿಸಿ ಚಾಲನೆ ನೀಡಿದರು. ಸಚಿವ ವಿ.ಸೋಮಣ್ಣ, ಶಾಸಕ ನಾಗೇಂದ್ರ, ಸಂದೇಶ್ ನಾಗರಾಜ್, ಅಧಿಕಾರಿಗಳು ನಟ ಗಣೇಶ್ ಅವರೊಂದಿಗೆ ಇದ್ದರು.
ದಸರಾದ ಯುವಸಂಭ್ರಮ ಉದ್ಘಾಟಿಸಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್
ಕಾರ್ಯಕ್ರಮದಲ್ಲಿ ಗಣೇಶ್ ತಮ್ಮ ಸಿನಿಮಾಗಳ ಸಂಭಾಷಣೆ, ಹಾಡುಗಳನ್ನು ಹಾಡಿ ಜನರನ್ನು ರಂಜಿಸಿದರು. ಯುವ ಸಂಭ್ರಮದ ಕಾರ್ಯಕ್ರಮಗಳು ಶುರುವಾಗಿದ್ದು, ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹಾರ ಮಾಡುವ ನೃತ್ಯ ರೂಪಕ, ವಿಶೇಷ ಮಕ್ಕಳಿಂದ ಮೂಡಿಬಂದ ಪ್ರವಾಹದ ಪರಿಕಲ್ಪನೆ ಹಾಗೂ ಕಂಸಾಳೆ ನೃತ್ಯ ಇವೆಲ್ಲವೂ ರಂಜಿಸಿದವು.
ಉದ್ಘಾಟನೆ ನಂತರ ಇಂದು ದಸರಾ ಯುವ ಸಂಭ್ರಮದ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ಯುವಮನಸ್ಸುಗಳನ್ನ ಮತ್ತಷ್ಟು ರಂಜಿಸಲಿವೆ. ದಸರೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 278 ಕಾಲೇಜುಗಳು ಭಾಗಿಯಾಗಲಿದ್ದು, ಪ್ರೇಕ್ಷಕರನ್ನು ಮನರಂಜಿಸಲಿವೆ.