ಕರ್ನಾಟಕ ಮುಕ್ತ ವಿವಿ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಒತ್ತಾಯ
ಮೈಸೂರು, ಡಿಸೆಂಬರ್ 23: ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧುಸೂಧನ್ ಒತ್ತಾಯಿಸಿದ್ದಾರೆ.
ಮೈಸೂರು ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಇದು ಬಹುದೊಡ್ಡ ಹಗರಣ, ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು. ಸಿಎಂಗೆ ಪತ್ರ ಬರೆದು ಒತ್ತಾಯ ಮಾಡಿದ್ದೇನೆ" ಎಂದರು.
ಕೆಂಪೇಗೌಡ ಅಧ್ಯಯನ ಕೇಂದ್ರ ವಿವಾದ: ಹಾಲಿ Vs ಮಾಜಿ ಸರ್ಕಾರ ತಿಕ್ಕಾಟ
ನ್ಯಾಯಮೂರ್ತಿ ಭಕ್ತವತ್ಸಲಂ ಆಯೋಗದ ಶಿಫಾರಸು ಹಾಗೂ ಹೈಕೋರ್ಟ್ ಸೂಚನೆಯಂತೆ ಮುಕ್ತ ವಿಶ್ವವಿದ್ಯಾಲಯದ ಈಗಿನ ಕುಲಪತಿಯಿಂದ ಪೊಲೀಸರಿಗೆ ದೂರು ನೀಡಲಾಗಿದ್ದು, ಮೂವರು ಕುಲಪತಿಗಳ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ರಂಗಪ್ಪರಿಂದ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಲೆಟರ್ ಹೆಡ್ ದುರ್ಬಳಕೆಯಾಗಿದ್ದು, ರಿಟ್ ಪಿಟಿಷನ್ ಮೇಲೆ ಹೈಕೋರ್ಟ್ ನಿಂದ ಯಾವುದೇ ಆದೇಶವೇ ಆಗಿಲ್ಲ. ಕೇವಲ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಮಾಧ್ಯಮಗಳಲ್ಲಿ ನನ್ನ ವಿರುದ್ಧ ಸುದ್ದಿ ಮಾಡದಂತೆ ಸೂಚನೆ ಇದೆ ಅಂತ ತಪ್ಪು ಮಾಹಿತಿ ನೀಡಿದ್ದಾರೆ. ಕಿವಿ ಮೇಲೆ ಹೂವು ಇಡಲು ರಂಗಪ್ಪ ಯತ್ನಿಸುತ್ತಿದ್ದಾರೆಂದು ಆರೋಪಿಸಿದರು.
ಮೊದಲು ಆರೋಪದಿಂದ ಮುಕ್ತರಾಗಿ ಬರಲಿ. ಆ ನಂತರ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಿ. ಇವರು ಮಾಡಿರುವ ಭ್ರಷ್ಟಾಚಾರ ದೇಶದ ವ್ಯಾಪ್ತಿ ಮೀರಿದೆ. ಹಾಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದೇನೆ. ಪ್ರಾಸಿಕ್ಯೂಷನ್ ಮಾಡುವವರು ಇವರಿಗೆ ಜಾಮೀನು ಸಿಗದಂತೆ ನೋಡಿಕೊಳ್ಳಬೇಕು. ಇಂತಹವರು ಜೈಲು ಪಾಲಾಗಬೇಕು. ಇಂತಹ ವ್ಯಕ್ತಿಗೆ ಜೆಡಿಎಸ್ ಟಿಕೇಟ್ ಕೊಟ್ಟಿದ್ದು ಯಾವ ನ್ಯಾಯ? ನಿಮ್ಮ ಸರ್ಕಾರದ ಅವಧಿಯಲ್ಲಿ ಅವರ ಕೇಸಿಗೆ ಬಿ ರಿಪೋರ್ಟ್ ಹಾಕಿಸಿದ್ದೀರಲ್ಲಾ ಇದು ಯಾವ ನ್ಯಾಯ? ಇವರು ದೇವೇಗೌಡರ ಬೀಗರಾಗಿ ಗೌರವ ತರೋ ಕೆಲಸ ಮಾಡಿಲ್ಲ. ಇಂತಹವರನ್ನು ರಕ್ಷಣೆ ಮಾಡಬೇಡಿ ಎಂದರು.