ಸಾವಿನ ದವಡೆಯಲ್ಲಿದ್ದ ಯುವತಿಯನ್ನು ಪಾರು ಮಾಡಿದ ಎಕ್ಮೋ ಚಿಕಿತ್ಸೆ
ಮೈಸೂರು, ಜನವರಿ 5 : ತೀವ್ರವಾದ ಉಸಿರಾಟ ತೊಂದರೆ ಎದುರಿಸುತ್ತಿದ್ದ ಯುವತಿಗೆ ಇದೇ ಮೊದಲ ಬಾರಿಗೆ ಎಕ್ಮೋ ತಂತ್ರಜ್ಞಾನದಿಂದ ಚಿಕಿತ್ಸೆ ನೀಡಿ ಮರುಜೀವ ನೀಡಿದ್ದಾರೆ ಮೈಸೂರಿನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು.
ನಗರದ ಅನಿತಾ ಎಂಬವರು ಎಚ್1ಎನ್1 ಸೋಂಕಿನಿಂದಾಗಿ ತೀವ್ರತರನಾದ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. ಇದರಿಂದ ಅವರು ತೀವ್ರ ಅಸ್ಪಸ್ಥರಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು.
ರೋಗಿಯನ್ನು ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅವರಿಗೆ ಚಿಕಿತ್ಸೆ ನೀಡಲಾಯಿತು. ಆದರೂ ಆರೋಗ್ಯದಲ್ಲಿ ಸುಧಾರಣೆ ಕಾಣದೆ ಮತ್ತಷ್ಟು ಗಂಭೀರವಾದಾಗ ಮತ್ತೊಂದು ಆಸ್ಪತ್ರೆಗೆ ವೆಂಟಿಲೇಟರ್ ವ್ಯವಸ್ಥೆ ಸ್ಥಿತಿಯಲ್ಲಿಯೇ ಕರೆದೊಯ್ದು ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಯಿತು.
ಆ ಆಸ್ಪತ್ರೆಯಲ್ಲಿಯೂ ರೋಗಿಯ ಆರೋಗ್ಯ ತೀರಾ ಹದಗೆಟ್ಟು, ಕೆಲವು ಗಂಟೆಗಳ ಕಾಲ ಮಾತ್ರ ಬದುಕುಳಿಯಬಹುದೆಂಬ ಅಭಿಪ್ರಾಯ ವೈದ್ಯರಿಂದ ವ್ಯಕ್ತವಾಗಿತ್ತು. ಇದರಿಂದ ಆತಂಕಗೊಂಡ ರೋಗಿಯ ಪೋಷಕರು ತೀರಾ ಗಂಭೀರ ಪರಿಸ್ಥಿತಿಯಲ್ಲಿದ್ದ ರೋಗಿಯನ್ನು ನಾರಾಯಣ ಹೃದಯಾ ಲಯಕ್ಕೆ ಕರೆತರಲು ನಿರ್ಧರಿಸಿದರು.
ಎಕ್ಮೋ ಸಾಧನವನ್ನು ಕೊಂಡೊಯ್ದು ರೋಗಿಗೆ ಅಳವಡಿಸಿದ ಬಳಿಕ ವೆಂಟಿಲೇಟರ್ನಲ್ಲಿಟ್ಟು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಶುರುಮಾಡಿದರು ನಾರಾಯಣ ಆಸ್ಪತ್ರೆಯ ಸಿಬ್ಬಂದಿ. ಎಕ್ಮೊ ಸಾಧನ ಅಳವಡಿಸಿದ್ದರಿಂದ ಇದೀಗ ರೋಗಿಯ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ.
15 ದಿನದಲ್ಲಿಯೇ ರೋಗಿಯ ಸ್ಥಿತಿಯಲ್ಲಿ ಆಮೂಲಾಗ್ರ ಬದಲಾವಣೆ ಕಂಡಿದೆ. ಈ ಚಿಕಿತ್ಸಾ ವಿಧಾನ ಮೈಸೂರಿನಲ್ಲಿಯೇ ಮೊಟ್ಟ ಮೊದಲಾಗಿದೆ. ಇದೀಗ ಎಚ್1ಎನ್1 ಸೋಂಕಿಗೆ ಒಳಗಾಗಿದ್ದ ಯುವತಿ ಸಾಮಾನ್ಯ ರಂತಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು ಆಸ್ಪತ್ರೆಯ ಹೃದಯ ತಜ್ಞ ಡಾ. ಎಂ. ಎನ್ ರವಿ.