ಪ್ರತಿಭಟನೆಯಲ್ಲಿ "ಫ್ರೀ ಕಾಶ್ಮೀರ್" ಫಲಕ ವಿವಾದ; ಫಲಕ ಹಿಡಿದ ನಳಿನಿ ಹೇಳುವುದೇನು?
ಮೈಸೂರು, ಜನವರಿ 11: ಜೆಎನ್ ಯು ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನೆಯಲ್ಲಿ "ಫ್ರೀ ಕಾಶ್ಮೀರ್' ಫಲಕ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ ಐಆರ್ ದಾಖಲಿಸುತ್ತಿದ್ದಂತೆ, ಆ ಫಲಕ ಹಿಡಿದಿದ್ದ ಯುವತಿ ನಾಪತ್ತೆಯಾಗಿದ್ದಳು. ಛಾಯಾಗ್ರಾಹಕಿ ನಳಿನಿ ಬಾಲಕುಮಾರ್ ಎಂಬ ಆ ಯುವತಿಯನ್ನು ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಕಾಡುತ್ತಿದ್ದರು.
ಇದೀಗ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ತಮ್ಮ ತಂದೆಯೊಂದಿಗೆ ಹಾಜರಾಗಿದ್ದಾರೆ ನಳಿನಿ ಬಾಲಕುಮಾರ್. ಈ ಮುನ್ನ ಯುವತಿ ವೀಡಿಯೋ ಮೂಲಕ ಕ್ಷಮೆ ಯಾಚಿಸಿದ್ದಾರೆ. "ನನ್ನ ಉದ್ದೇಶ ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಸೇರಿ ರದ್ದಾಗಿರುವ ಸೇವೆಗಳ ಆರಂಭಿಸಿ ಎಂಬುದಾಗಿತ್ತು. ಅದಕ್ಕೆ ಫ್ರೀ ಕಾಶ್ಮೀರ ಎಂದು ಬರೆದುಕೊಂಡಿದ್ದೆ. ಅದರಿಂದ ಉಂಟಾದ ಗೊಂದಲಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ. ಎಲ್ಲ ರೀತಿಯ ತನಿಖೆಗೆ ಸಹಕರಿಸುತ್ತೇನೆ" ಎಂದು ಕ್ಷಮೆ ಕೇಳಿದ್ದಾರೆ.
ಮೈಸೂರು ವಿವಿ ಪ್ರತಿಭಟನೆಯಲ್ಲಿ "ಫ್ರೀ ಕಾಶ್ಮೀರ್" ಫಲಕ ಪ್ರದರ್ಶಿಸಿದ ಯುವತಿ ನಾಪತ್ತೆ
ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಿ, "ನಾನು ಪ್ರತಿಭಟನೆಯಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಿದ್ದೆ. ನಾನು ಯಾವುದೇ ಸಂಯೋಜಕರ ಒತ್ತಡಕ್ಕೆ ಮಣಿದು ಹೋರಾಟಕ್ಕೆ ಬಂದಿರಲಿಲ್ಲ. ನಾನು ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದು, ಫೇಸ್ ಬುಕ್ ನಲ್ಲಿ ಪ್ರತಿಭಟನೆ ಬಗ್ಗೆ ತಿಳಿದುಕೊಂಡು ಬಂದೆ. ನನಗೆ ದೇಶದ ಬಗ್ಗೆ, ದೇಶದ ಜನರ ಬಗ್ಗೆ ಅತ್ಯಂತ ಕಾಳಜಿ ಮತ್ತು ಗೌರವವಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಕಾಶ್ಮೀರ ಬಿಡುಗಡೆಗೊಳಿಸಿ ಎಂಬುದನ್ನು ನಾನು ಖುದ್ದಾಗಿ ಬರೆದು ಹಿಡಿದುಕೊಂಡಿದ್ದೆ. ಇದರ ಜೊತೆಗೆ ಎಜುಕೇಟ್, ಅಜಿಟೇಟ್ ಆರ್ಗನೈಸ್ ಎಂದೂ ಬರೆದಿದ್ದೆ. ಇತರ ರಾಜ್ಯಗಳಲ್ಲಿ ಜನರು ನಿರ್ಭಯವಾಗಿ ಇದ್ದಾರೆ. ಅದೇ ರೀತಿ ಜಮ್ಮು-ಕಾಶ್ಮೀರದಲ್ಲಿ ಸಹ ಆಗಬೇಕು. ಇದೇ ಒಂದೇ ಒಂದು ಭಾವನೆಯಿಂದ ಕಾಶ್ಮೀರ ಬಿಡುಗಡೆಗೊಳಿಸಿ ಪೋಸ್ಟರನ್ನು ಹಿಡಿದುಕೊಂಡಿದ್ದೆ" ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಕರಣ ಸಂಬಂಧ ದೂರು ದಾಖಲಾಗುತ್ತಿದ್ದಂತೆ ನಳಿನಿ, ಮೈಸೂರಿನ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಪೊಲೀಸರ ಮುಂದೆ ಹಾಜಾರಾಗಿ ತನಿಖೆಗೆ ಸಹಕರಿಸುವಂತೆ ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದೆ.
ಮೈಸೂರು ವಿವಿ ಪ್ರತಿಭಟನೆಯಲ್ಲಿ "ಫ್ರೀ ಕಾಶ್ಮೀರ" ಫಲಕ; ಎಚ್ಚೆತ್ತ ಪೊಲೀಸರು
ಜ.8ರಂದು ಮಾನಸಗಂಗೋತ್ರಿಯಲ್ಲಿ ಮೈಸೂರು ವಿವಿ ದಲಿತ ವಿದ್ಯಾರ್ಥಿ ಒಕ್ಕೂಟ, ಮೈಸೂರು ವಿವಿ ಸಂಶೋಧನಾ ವಿದ್ಯಾರ್ಥಿಗಳ ಸಂಘ, ಬಹುಜನ ವಿದ್ಯಾರ್ಥಿ ಸಂಘ, ಎಸ್ಎಫ್ಐ, ಎಐಡಿಎಸ್ ಒ ವತಿಯಿಂದ ಜೆಎನ್ ಯು ದಾಂಧಲೆ ಖಂಡಿಸಿ ಪ್ರತಿಭಟನೆ ಮಾಡುವ ವೇಳೆ ಫ್ರೀ ಕಾಶ್ಮೀರ ಎಂಬ ಘೋಷಣಾ ಫಲಕ ಪ್ರದರ್ಶಿಸಲಾಗಿತ್ತು. ಘಟನೆ ಸಂಬಂಧ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದರು.