ಒನ್ ಸೈಡೆಡ್ ಲವರ್ ಕಾಟ, ಬೆದರಿದ ಯುವತಿ ಆತ್ಮಹತ್ಯೆ
ಮೈಸೂರು, ಸೆ. 14: ಒನ್ ಸೈಡೆಡ್ ಲವರ್ ಒಬ್ಬನ ಕಾಟ ತಾಳಲಾರದೆ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ. 17 ವರ್ಷದ ಸೌಂದರ್ಯ ಬುಧವಾರ ಬೆಳಗ್ಗೆ ಜೆಎಸ್ಎಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅಂಕನಹಳ್ಳಿಯ ಮಹೇಶ್ ಅವರ ಮಗಳು 17 ವರ್ಷದ ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸೌಂದರ್ಯ ಅವರ ಹಿಂದೆ ಯುವಕನೊಬ್ಬ ಬಿದ್ದಿದ್ದ. ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ.
ಆತನ ಕಾಟವನ್ನು ತಾಳಲಾರದೇ ಸೆ.2ರಂದು ಸೌಂದರ್ಯ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ತಕ್ಷಣವೇ ಆಕೆಯನ್ನು ಜೆಎಸ್ಎಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಅಂಕನಹಳ್ಳಿಯ ಗ್ರಾಮದ ಪಕ್ಕದಲ್ಲಿರುವ ಮನುಗನಹಳ್ಳಿಯ ಕಿರಣ್ ಎಂಬ ಯುವಕ ಸೌಂದರ್ಯಳನ್ನು ಪ್ರೀತಿಸುತ್ತಿದ್ದ. ಕಿರಣ್ ಪ್ರೀತಿಗೆ ಆತನ ಸೋದರಿ ತ್ರಿವೇಣಿ ಕೂಡ ಬೆಂಬಲ ನೀಡಿದ್ದರು. ಅನೇಕ ಬಾರಿ ಸೌಂದರ್ಯಳಿಗೆ ಆಸಿಡ್ ಹಾಕುವ ಬೆದರಿಕೆಯನ್ನು ಹಾಕಿದ್ದ.
ಕಿರಣ್ ಕಾಟ ತಾಳಲಾರದೆ ಕಾಲೇಜಿಗೆ ಹೋಗುವುದನ್ನೇ ಸೌಂದರ್ಯ ನಿಲ್ಲಿಸಿದ್ದಳು ಆದರೆ, 22 ವರ್ಷ ವಯಸ್ಸಿನ ಕಿರಣ್ ಆಕೆಗೆ ಕಾಟ ಕೊಡುತ್ತಲೇ ಇದ್ದ. ಕಿರಣ್ ಕಾಟಕ್ಕೆ ನೊಂದು ಸೌಂದರ್ಯ ಬೆಂಕಿಗೆ ಆಹುತಿಯಾಗಿದ್ದಾರೆ. ಮಗಳನ್ನ ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.