ವರ್ಷದಿಂದ ಬಾರದ ವೇತನ: ಕಣ್ಣೀರಿಡುತ್ತಿರುವ ಆಶ್ರಮ ಶಾಲೆ ಶಿಕ್ಷಕರು
ಮೈಸೂರು, ಜೂನ್ 30: ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೊರೊನಾ ಸೋಂಕಿನ ಹೊಡೆತಕ್ಕೆ ಎಲ್ಲಾ ವರ್ಗದ ಜನರು ತತ್ತರಿಸಿದ್ದಾರೆ. ಕೋವಿಡ್- 19 ತಂದೊಡ್ಡಿರುವ ಸಂಕಷ್ಟಕ್ಕೆ ಅಕ್ಷರ ಕಲಿಸೋ ಶಿಕ್ಷಕರ ಬದುಕು ಸಹ ದುಸ್ತರಗೊಂಡಿದೆ.
ಸಾಮಾನ್ಯ ಶಾಲಾ ಶಿಕ್ಷಕರ ಜೊತೆಗೆ ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಗಿರಿಜನ ಆಶ್ರಮ ಶಾಲೆಗಳ ಶಿಕ್ಷಕರುಗಳ ಜೀವನ ಬೀದಿಗೆ ಬೀಳುವ ಸ್ಥಿತಿಗೆ ಬಂದು ನಿಂತಿದೆ.
ಕಳೆದೊಂದು ವರ್ಷದಿಂದ ಗಿರಿಜನ ಆಶ್ರಮ ಶಾಲೆಗಳ ಗುತ್ತಿಗೆ ಶಿಕ್ಷಕರಿಗೆ ಗೌರವಧನ ಸಿಕ್ಕಿಲ್ಲ. ಪರಿಣಾಮ, ಶಿಕ್ಷಕರು ಅತಂತ್ರರಾಗಿದ್ದಾರೆ. ಕೊರೊನಾ ಸೋಂಕು ನೆಪದ ಪರಿಣಾಮ ವರ್ಷದಿಂದ ಸಂಬಳ ಸಿಗದ ಹಿನ್ನೆಲೆಯಲ್ಲಿ ರಾಜ್ಯದ 116 ಆಶ್ರಮ ಶಾಲೆಯಲ್ಲಿ ಸುಮಾರು 350 ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿರುವುದು ಗೊತ್ತಾಗಿದೆ.
ಕಳೆದ ಒಂದು ವರ್ಷದಿಂದ ಯಾವುದೇ ವೇತನವಾಗಲಿ, ಪ್ಯಾಕೇಜ್ ಸಿಕ್ಕಿಲ್ಲ ಶಿಕ್ಷಕರು ದೂರಿದ್ದಾರೆ. ಗಿರಿಜನ ಆಶ್ರಮ ಶಾಲೆಗಳ ಗುತ್ತಿಗೆ ಶಿಕ್ಷಕರಿಗೆ ಮಾಸಿಕ 8500 ರೂ.ಗಳನ್ನು ನೀಡಲಾಗುತ್ತಿದೆ. ಕೊಡುವ ಅಲ್ಪ ವೇತನವನ್ನೂ ನೀಡುತ್ತಿಲ್ಲ. ಅಲ್ಲದೇ ಶಿಕ್ಷಣ ಇಲಾಖೆಯ ಈ ನಿರ್ಲಕ್ಷ್ಯದಿಂದ ಅದೆಷ್ಟೋ ಗುತ್ತಿಗೆ ಶಿಕ್ಷಕರು ಬಲಿಯಾಗಿದ್ದಾರೆ ಎಂಬ ಸಂಗತಿ ಸಹ ಬಯಲಾಗಿದೆ.
"ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ, ಖಾಯಂ ಶಿಕ್ಷಕರಂತೆ ಇತರೆ ಸೌಲಭ್ಯ ನೀಡುವಂತೆ ಸರ್ಕಾರ ಆದೇಶಿಸಿದರೂ, ಶಿಕ್ಷಣ ಇಲಾಖೆ ಆದೇಶವನ್ನು ಜಾರಿ ಮಾಡದಿರುವುದು ಶೋಚನೀಯ,'' ಎಂದು ಬೇಸರ ವ್ಯಕ್ತಪಡಿಸಿರುವ ಶಿಕ್ಷಕರು, ಈ ಕುರಿತು ವಿಡಿಯೋ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.