ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ; ಮೈಸೂರಿನಲ್ಲಿ ಮರ್ಯಾದಾ ಹತ್ಯೆ?
ಮೈಸೂರು, ಸೆಪ್ಟೆಂಬರ್ 4: ಮೈಸೂರಿನ ಕಾನ್ಯ ಗ್ರಾಮದಲ್ಲಿ ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮರ್ಯಾದಾ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
22 ವರ್ಷದ ಮೀನಾಕ್ಷಿ ಸಾವಿಗೀಡಾಗಿರುವ ಯುವತಿ. ಈಕೆ ಅನ್ಯ ಜಾತಿ ಯುವಕನನ್ನು ಪ್ರೀತಿಸುತ್ತಿದ್ದು, ಈ ಕಾರಣಕ್ಕೆ ಮನೆಯವರೇ ಈಕೆಯ ಕೊಲೆ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮರ್ಯಾದಾ ಹತ್ಯೆ ಹೆಸರಿನಲ್ಲಿ ತಂದೆಯಿಂದಲೇ ಮಗಳ ಕೊಲೆ
ಮೀನಾಕ್ಷಿ ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದು, ಮನೆಯವರಿಗೆ ಈ ವಿಷಯ ತಿಳಿದು ಚಿತ್ರಹಿಂಸೆ ಕೊಡಲು ಪ್ರಾರಂಭಿಸಿದ್ದರು ಎಂದು ಸ್ವತಃ ಯುವತಿಯೇ ಈ ಮುನ್ನ ಪೊಲೀಸರಿಗೆ ದೂರು ನೀಡಿದ್ದಳು. ಮೈಸೂರು ಎಸ್ಪಿ ಹಾಗೂ ಒಡನಾಡಿ ಸಂಸ್ಥೆಗೆ ಇ-ಮೇಲ್ ಮಾಡುವ ಮೂಲಕ ಮೀನಾಕ್ಷಿ ತನ್ನ ಮನೆಯವರ ವಿರುದ್ಧ ದೂರು ದಾಖಲಿಸಿದ್ದಳು. ಮೀನಾಕ್ಷಿ ದೂರಿನ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
"ನನ್ನ ಅಣ್ಣ ನನ್ನ ಮೇಲೆ ತೀವ್ರ ಹಲ್ಲೆ ಮಾಡಿ ಕತ್ತು ಹಿಸುಕಿ ಸಾಯಿಸಲು ಯತ್ನಿಸಿದ. ಇದನ್ನು ನಮ್ಮ ಮನೆಯವರು ತಡೆಯಲು ಬರಲಿಲ್ಲ. ನಾನು ಈಗ ಗೃಹ ಬಂಧನದಲ್ಲಿರುವೆ. ನನಗೆ ಜೀವ ಭಯವಿದೆ. ನನ್ನನ್ನು ಕಾಪಾಡಿ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಳು. ಮೀನಾಕ್ಷಿ ಜೂನ್ 16 ಹಾಗೂ ಆಗಸ್ಟ್ 6ರಂದು ಎರಡು ಬಾರಿ ಮೈಸೂರು ಎಸ್ಪಿ ಗೆ ದೂರು ನೀಡಿದ್ದಳು. ಇದಾದ ಕೆಲವು ದಿನಗಳ ಬಳಿಕ, ಅಂದರೆ ಕಳೆದ ಬುಧವಾರ ಸಂಜೆ ಮೀನಾಕ್ಷಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯಲ್ಲೇ ಪತ್ತೆಯಾಗಿತ್ತು. ಮನೆಯವರೇ ಈಕೆಯ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತಗೊಂಡಿದೆ.
ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣ ಎಂದು ದಾಖಲಿಸಿಕೊಂಡಿದ್ದಾರೆ. ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.