ಕೆ.ಆರ್.ನಗರ ಕ್ಷೇತ್ರದತ್ತ ಕಣ್ಣಿಟ್ಟಿದ್ದಾರಾ ಜಿಟಿಡಿ ಪುತ್ರ?
ಮೈಸೂರು, ಜನವರಿ 12: ಜಿಲ್ಲೆಯ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಿಂದ ಮೈಸೂರು ಭಾಗದ ಪ್ರಭಾವಿ ಶಾಸಕ ಜಿ.ಟಿ.ದೇವೇಗೌಡರ ಪುತ್ರ, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡರವರು ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿರುವುದು ಜೆಡಿಎಸ್ನಲ್ಲಿ ತಳಮಳಕ್ಕೆ ಕಾರಣವಾಗಿದೆ.
ಈ ಕ್ಷೇತ್ರದಿಂದ ಶಾಸಕರಾಗಿ ಸಾ.ರಾ.ಮಹೇಶ್ ಅವರು ಮೂರು ಬಾರಿ ಆಯ್ಕೆಯಾಗುವ ಮೂಲಕ ಜೆಡಿಎಸ್ನ್ನು ಭದ್ರವಾಗಿ ನೆಲೆಯೂರುವಂತೆ ಮಾಡಿದ್ದಾರೆ. ಆದರೀಗ ಜೆಡಿಎಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸಾಬೀತಾಗಿದೆ. ಮೈಸೂರು ಭಾಗದಲ್ಲಿ ಜೆಡಿಎಸ್ನ ಪ್ರಭಾವಿ ನಾಯಕರಾಗಿರುವ ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ತಟಸ್ಥರಾಗಿರುವುದು ಪಕ್ಷಕ್ಕೆ ಭಾರೀ ಹೊಡೆತ ನೀಡಿದೆ. ಅದರ ನಡುವೆ ಅವರ ಪುತ್ರ ಕೆ.ಆರ್.ನಗರದಿಂದಲೇ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಡಿಸಿ ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾ.ರಾ ಮಹೇಶ್ ಮಾತಿನ ಚಕಮಕಿ
ಬಿಜೆಪಿಯೊಂದಿಗೆ ಜಿ.ಟಿ.ದೇವೇಗೌಡರ ಸಖ್ಯ
ಈ ನಡುವೆ ಜಿ.ಟಿ.ದೇವೇಗೌಡರನ್ನು ಪಕ್ಷದಿಂದ ಉಚ್ಛಾಟಿಸುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಆದರೆ ಅವರು ಮಾತ್ರ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಕ್ಷೇತ್ರವನ್ನು ಗಟ್ಟಿಗೊಳಿಸುವತ್ತ ತೊಡಗಿಸಿಕೊಂಡಿದ್ದಾರೆ. ಅವರು ಜೆಡಿಎಸ್ನಲ್ಲಿದ್ದರೂ, ಪಕ್ಷದ ನಾಯಕರಿಂದ ಅವರಿಗೆ ಸಾಕಷ್ಟು ತೊಂದರೆ ಅನುಭವಿಸಿದ್ದರೂ, ಅವರು ಅದೆಲ್ಲವನ್ನೂ ಸಹಿಸಿಕೊಂಡೇ ಬಂದಿದ್ದಾರೆ. ತಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಸಲುವಾಗಿ ಬಿಜೆಪಿ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಸವಾಲ್ ಆಗಿ ಸ್ವೀಕರಿಸಿದ ಜಿಟಿಡಿ
ಇದು ಜೆಡಿಎಸ್ ನಾಯಕರಲ್ಲಿ ಒಂದಷ್ಟು ಅಸಮಾಧಾನವನ್ನುಂಟು ಮಾಡಿತ್ತು. ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಮಗಿಷ್ಟವಿಲ್ಲದ ಸ್ಥಾನ ನೀಡಿದ್ದು, ಅವರಿಗೆ ಬೇಸರವನ್ನುಂಟು ಮಾಡಿತ್ತು. ಆದರೆ ಅದನ್ನು ಅವರು ಸವಾಲ್ ಆಗಿಯೇ ಸ್ವೀಕರಿಸಿ ಕಾರ್ಯ ನಿರ್ವಹಿಸಿದ್ದರು. ಆ ಸಂದರ್ಭ ಎಲ್ಲದಕ್ಕೂ ಸಾ.ರಾ.ಮಹೇಶ್ ಅವರಿಗೆ ವರಿಷ್ಠರು ಮಣೆ ಹಾಕಿದ್ದು, ಅದಕ್ಕಿಂತ ಹೆಚ್ಚಾಗಿ ಸಾ.ರಾ.ಮಹೇಶ್ ಅವರು ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಿದ್ದರು ಎಂಬ ಆರೋಪಗಳು ಕೇಳಿ ಬಂದಿತ್ತು.
"ನನ್ನದೇನಿದ್ದರೂ ಸೈಲೆಂಟ್ ರಾಜಕಾರಣ" ಎಂದು ಎಚ್ ಡಿಕೆಗೆ ತಿವಿದ ಜಿಟಿಡಿ
ಕೆ.ಆರ್.ನಗರದಿಂದ ಸ್ಪರ್ಧಿಸುವ ಸುಳಿವು
ಇನ್ನು ಜಿ.ಟಿ.ದೇವೇಗೌಡರು ಹುಣಸೂರು ಕ್ಷೇತ್ರದಿಂದ ಪುತ್ರ ಜಿ.ಡಿ.ಹರೀಶ್ ಗೌಡರನ್ನು ಕಣಕ್ಕಿಳಿಸಬೇಕೆಂಬ ಕನಸು ಕಂಡಿದ್ದರು. ಅದಾಗಲೇ ಕ್ಷೇತ್ರದಲ್ಲಿ ಹರೀಶ್ ಗೌಡರು ತಮ್ಮ ಪ್ರಾಬಲ್ಯ ಸಾಧಿಸಿದ್ದರು. ಆದರೆ ಸಾ.ರಾ.ಮಹೇಶ್ ಅವರು ಅಲ್ಲಿಗೆ ಅಡ್ಡಗಾಲು ಹಾಕಿ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರನ್ನು ಹುಣಸೂರಿಗೆ ಕರೆ ತಂದರು. ಕೆಲವು ಸಮಯಗಳ ಕಾಲ ಕ್ಷೇತ್ರದಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದರು. ಕೊನೆಗಳಿಗೆಯಲ್ಲಿ ಎಲ್ಲವೂ ಬದಲಾವಣೆಯಾಯಿತು.
ತದನಂತರ ಸಾ.ರಾ.ಮಹೇಶ್ ಮತ್ತು ಜಿ.ಟಿ.ದೇವೇಗೌಡರ ನಡುವಿನ ಮನಸ್ತಾಪಗಳು ಬಹಿರಂಗವಾಗಿತ್ತು. ಇವತ್ತಿಗೂ ಅವರ ನಡುವಿನ ಸಂಬಂಧ ಅಷ್ಟಕಷ್ಟೆ ಇದೆ. ಹೀಗಿರುವಾಗಲೇ ಸಾ.ರಾ.ಮಹೇಶ್ ಅವರ ಕ್ಷೇತ್ರದಿಂದ ಹರೀಶ್ ಗೌಡ ಅವರು ಸ್ಪರ್ಧಿಸುವ ಸುಳಿವು ನೀಡಿರುವುದು ತಂದೆ ಜಿ.ಟಿ.ದೇವೇಗೌಡರು ಜೆಡಿಎಸ್ ತೊರೆಯುವ ಸೂಚನೆಯಾ? ಎಂಬ ಪ್ರಶ್ನೆಯೂ ಕಾಡತೊಡಗಿದೆ.
ಜೆಡಿಎಸ್ ಭದ್ರಕೋಟೆ ಛಿದ್ರ ಮಾಡುತ್ತಾರಾ?
ಒಂದು ವೇಳೆ ಜಿ.ಟಿ.ದೇವೇಗೌಡರನ್ನು ಜೆಡಿಎಸ್ ವರಿಷ್ಠರು ಪಕ್ಷದಿಂದ ಹೊರ ಹಾಕಿದರೆ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡುವ ಎಚ್ಚರಿಕೆಯ ಸಂದೇಶವೂ ಇದಾಗಿರಬಹುದು. ಆದರೆ ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ ಎನ್ನುವಂತೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸದಸ್ಯರಿಗೆ ಕೆಸಿಸಿ ಬೆಳೆ ಸಾಲ ವಿತರಣೆ ಕಾರ್ಯಕ್ರಮಕ್ಕೆ ಆಗಮಿಸಿದ ಜಿ.ಟಿ.ದೇವೇಗೌಡರ ಪುತ್ರ, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಅವರು ಮೈಸೂರು ಜಿಲ್ಲೆಯ ಕೆ.ಆರ್.ನಗರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಬೆಂಬಲಿಗರಿಂದ ಒತ್ತಡವಿದೆ. ಆದರೆ ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿ ಆತುರ ಮಾಡುತ್ತಿಲ್ಲ. ಮುಂದಿನ ಚುನಾವಣೆಗೆ ಸ್ಪಷ್ಟವಾದ ತೀರ್ಮಾನ ತೆಗೆದುಕೊಳ್ಳಲೇಬೇಕಾಗಿದೆ ಎಂದಿದ್ದಾರೆ.
ರಾಜಕೀಯ ವಲಯದಲ್ಲಿ ಸಂಚಲನ
ನಾನಾಗಲೀ, ನನ್ನ ತಂದೆ ಜಿ.ಟಿ.ದೇವೇಗೌಡರಾಗಲಿ ಈ ವಿಚಾರದಲ್ಲಿ ಇನ್ನೂ ಚರ್ಚಿಸಿಲ್ಲ. ಮುಂದಿನ ದಿನಗಳಲ್ಲಿ ಕೆ.ಆರ್.ನಗರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕಾ? ಬೇಡವಾ? ಎಂಬುದರ ಬಗ್ಗೆ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ. ಸದ್ಯಕ್ಕೆ ಈ ವಿಚಾರ ಮೈಸೂರು ರಾಜಕೀಯ ವಲಯದಲ್ಲಿ ಹೊಸ ಸಂಚಲನವನ್ನುಂಟು ಮಾಡಿದ್ದಂತು ಸತ್ಯ.