ಮೈಸೂರಿನಲ್ಲಿ ಅತ್ಯಾಚಾರ; ಸ್ಥಳಕ್ಕೆ ಕಾಂಗ್ರೆಸ್ ಸತ್ಯ ಶೋಧನಾ ತಂಡ ಭೇಟಿ
ಮೈಸೂರು, ಆಗಸ್ಟ್ 27; ಮೈಸೂರಿನಲ್ಲಿ ನಡೆದಿರುವ ಎಂಬಿಎ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ನಡುವೆ ನೀಚಕೃತ್ಯವೆಸಗಿದವರ ಬಂಧನಕ್ಕೆ ಪೊಲೀಸರು ತನಿಖೆ ನಡೆಸುತ್ತಿರುವ ನಡುವೆಯೇ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ತಂಡ ಮೈಸೂರಿಗೆ ಆಗಮಿಸಿದೆ.
ಮಾಜಿ ಸಚಿವ ವಿ. ಎಸ್. ಉಗ್ರಪ್ಪ ನೇತೃತ್ವದಲ್ಲಿ ಮೈಸೂರಿಗೆ ಆಗಮಿಸಿರುವ ಸತ್ಯಶೋಧನಾ ಸಮಿತಿ ಸದಸ್ಯರು, ಅತ್ಯಾಚಾರ ನಡೆದ ಘಟನಾ ಸ್ಥಳ, ಸಂತ್ರಸ್ತ ಯುವತಿ ದಾಖಲಾಗಿರುವ ಆಸ್ಪತ್ರೆ ಹಾಗೂ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ, ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ.
ಮೈಸೂರು ಅತ್ಯಾಚಾರ ಪ್ರಕರಣದ ತನಿಖೆಗೆ ಎಡಿಜಿಪಿ ಪ್ರತಾಪ್ ರೆಡ್ಡಿ ನೇಮಕ
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷ ಉಗ್ರಪ್ಪ, "ಇಲ್ಲಿ ನಾವು ರಾಜಕೀಯ ಮಾಡಲು ಬಂದಿಲ್ಲ. ಮಾನವೀಯ ಮೌಲ್ಯಗಳ ಹರಣ ಆಗಿದ್ದು, ಸಂತ್ರಸ್ತೆಗೆ ನ್ಯಾಯ ಕೊಡಿಸುವ ಉದ್ದೇಶ ನಮ್ಮದಾಗಿದೆ. ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಣ್ಣು ಮಕ್ಕಳ ರಕ್ಷಣೆ ಮಾಡದಿದ್ದರೂ ಒಂದು ಕಡೆ ಶ್ರೀರಾಮನ ಜಪ, ಮತ್ತೊಂದು ಕಡೆ ರಾವಣನ ಪ್ರವೃತ್ತಿಗೆ ಪ್ರೋತ್ಸಾಹ ಮಾಡಲಾಗುತ್ತಿದೆ" ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಅತ್ಯಾಚಾರ ಪ್ರಕರಣ: ಶುಕ್ರವಾರ ಮೈಸೂರು ಪೊಲೀಸರ ಸಭೆ ಕರೆದ ಗೃಹ ಸಚಿವ ಆರಗ ಜ್ಞಾನೇಂದ್ರ
"ಘಟನೆಗೆ ಸಂಬಂಧಿಸಿದಂತೆ ಡಿಸಿಪಿ ಹಾಗೂ ಕಮೀಷನರ್ ಭೇಟಿ ಮಾಡಿ ಮತ್ತಷ್ಟು ಮಾಹಿತಿ ಪಡೆಯಬೇಕಿದೆ. ಈ ಪ್ರದೇಶ ಅರಣ್ಯ ಪ್ರದೇಶದಲ್ಲಿ ಇದೆ ಅವರಿಂದಲೂ ಮಾಹಿತಿ ಪಡೆಯಬೇಕಿದೆ. ಮೈಸೂರು ಹಾಗೂ ರಾಜ್ಯದ ಹಿತ ದೃಷ್ಠಿಯಿಂದ ಸತ್ಯವನ್ನು ಹುಡುಕುವ ನಿಟ್ಟಿನಲ್ಲಿ ಪ್ರಮಾಣಿಕ ಕೆಲಸ ಮಾಡುತ್ತಿದ್ದೇವೆ. ಘಟನೆಯ ಬಗ್ಗೆ ನನಗೆ ಸಿಕ್ಕಿರುವ ಮಾಹಿತಿ ಅತ್ಯಂತ ಆಘಾತಕಾರಿಯಾಗಿದ್ದು, ಕಾನೂನಿಗೆ ವಿರುದ್ದವಾಗಿ ನಡೆದುಕೊಂಡಿದ್ದಾರೆ" ಎಂದು ಆರೋಪಿಸಿರು.
ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ವಿದ್ಯಾರ್ಥಿನಿಯ ಗೆಳೆಯ ಹೇಳಿದ್ದೇನು?
ಗ್ಯಾಂಗ್ ರೇಪ್ ಪ್ರಕರಣವನ್ನು ಕಾಂಗ್ರೆಸ್ ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಉಗ್ರಪ್ಪ, "ಬಿಜೆಪಿ ಏನು ಬೇಕಾದರೂ ಹೇಳಲಿ. ಇದು ಅವರ ನಾಲಿಗೆ ಸಂಸ್ಕೃತಿಯನ್ನು ಬಿಂಬಿಸುತ್ತೆ. ನಿನ್ನೆ ಅವರು ಏನು ಮಾತನಾಡಿದ್ದಾರೆ ನಿಮಗೆ ಗೊತ್ತಿದೆ. ನಾನು ಅದರ ಬಗ್ಗೆ ಮಾತನಾಡಲ್ಲ. ಜನರ ಹಕ್ಕುಗಳನ್ನು ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಆದರೆ ಅವರು ಹೇಗೆ ನಡೆದುಕೊಳ್ಳುತ್ತರೆ ಎಂಬುದನ್ನು ನೀವೆ ಗಮನಿಸಿ. ನಮ್ಮ ಸಮಿತಿ ಬಂದಿರುವುದು ರಾಜಕಾರಣಕ್ಕಾಗಿ ಅಲ್ಲ. ನಾಗರಿಕರ ಹಕ್ಕುಗಳ ರಕ್ಷಣೆ ಸಾಮಾಜಿಕ ಬದ್ದತೆಯಿಂದ ಇಲ್ಲಿಗೆ ಬಂದಿದ್ದೇವೆ" ಎಂದರು.
ಮೈಸೂರು ಭೇಟಿ ಹಿನ್ನೆಲೆಯಲ್ಲಿ ಗ್ಯಾಂಗ್ ರೇಪ್ ನಡೆದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಯಾವುದೇ ಅಪರಾಧ ಕೃತ್ಯಗಳು ನಡೆದರು ಕ್ರೈಂ ಸೀನ್ ಏರಿಯಾಗೆ ಪೊಲೀಸರು ಹಾಗೂ ಇನ್ನಿತರ ಪ್ರಮುಖರನ್ನು ಹೊರತುಪಡಿಸಿ ಬೇರೆಯವರಿಗೆ ಪ್ರವೇಶ ಇರುವುದಿಲ್ಲ. ಆದರೂ ಈ ನಿಯಮವನ್ನು ಉಲ್ಲಂಘಿಸಿದ ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಸದಸ್ಯರು, ಮಾಹಿತಿ ಸಂಗ್ರಹದ ನೆಪದಲ್ಲಿ ಕ್ರೈಂ ಸೀನ್ ಜಾಗದಲ್ಲಿ ಅಡ್ಡಾಡಿದರು. ಕಾಂಗ್ರೆಸ್ ನಾಯಕರ ಈ ಎಡವಟ್ಟಿನಿಂದ ಘಟನೆಗೆ ಸಂಬಂಧಿಸಿದ ಸಾಕ್ಷಿಗಳ ಧಕ್ಕೆಯಾಗುವ ಸಾಧ್ಯತೆ ಎದುರಾಗಿದೆ.
ಘಟನಾ ಸ್ಥಳಕ್ಕೆ ಭೇಟಿ; ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಕಡೆಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಗುರುವಾರ ಸಂಜೆಯೇ ಮೈಸೂರಿಗೆ ಆಗಮಿಸಿದ್ದ ಗೃಹ ಸಚಿವರು, ಚಾಮುಂಡಿಬೆಟ್ಟಕ್ಕೆ ತೆರಳಿ ನಾಡದೇವಿಯ ದರ್ಶನ ಪಡೆದರೂ, ಪಕ್ಕದಲ್ಲೇ ಇದ್ದ ಘಟನಾ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ.
ಇದಾದ ಬಳಿಕ ಪೊಲೀಸ್ ಇಲಾಖೆಯ ಕೆಲವು ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಧ್ಯಾಹ್ನದ ಹೊತ್ತಿಗೆ ಘಟನಾ ಸ್ಥಳಕ್ಕೆ ಬಂದ ಆರಗ ಜ್ಞಾನೇಂದ್ರ, ಕೇವಲ ನಾಮಕವಾಸ್ತೆಗೆ ಬಂದು, ರಸ್ತೆಯಲ್ಲಿ ನಿಂತು ಕಾಟಚಾರಕ್ಕೆ ಎಂಬಂತೆ ಪರಿಶೀಲನೆ ನಡೆಸಿದರು. ರಸ್ತೆಯಲ್ಲೇ ನಿಂತು ಘಟನಾ ಸ್ಥಳದ ಸುತ್ತಲೂ ಕಣ್ಣಾಡಿಸಿದ ಗೃಹ ಸಚಿವರು, ಕೆಲವೇ ನಿಮಿಷದಲ್ಲೇ ಸ್ಥಳದಿಂದ ತೆರಳಿದರು.
ಮೈಸೂರಿನಲ್ಲಿ ನಡೆದಿರುವ ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಖಂಡಿಸಿ ಶುಕ್ರವಾರವೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಮೈಸೂರಿನ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮೈಸೂರು ಕನ್ನಡ ವೇದಿಕೆ ಸದಸ್ಯರು, ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿದರೆ. ಗ್ಯಾಂಗ್ ರೇಪ್ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಮೈಸೂರಿನ ಅಗ್ರಹಾರದಲ್ಲಿ ಪ್ರತಿಭಟನೆ ಮಾಡಿದ ಕನ್ನಡ ಕ್ರಾಂತಿ ದಳದ ಮತ್ತು ಕನ್ನಡ ಸೇನೆ ಕಾರ್ಯಕರ್ತರು, ಪೊಲೀಸ್ ಇಲಾಖೆ ಕಾರ್ಯವೈಖರಿಯನ್ನು ಖಂಡಿಸಿದರು.
ಸಂಜೆ ಮಹತ್ವದ ಸುದ್ದಿಗೋಷ್ಠಿ; ಮೈಸೂರಿನಲ್ಲಿ ನಡೆದ ದರೋಡೆ ಮತ್ತು ಶೂಟ್ಔಟ್ ಪ್ರಕರಣದ ಜೊತೆಗೆ ಗ್ಯಾಂಗ್ ರೇಪ್ ಪ್ರಕರಣವನ್ನು ಮೈಸೂರು ಪೊಲೀಸರು ಭೇಧಿಸಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕರುವ ಸಾಧ್ಯತೆ ಇದ್ದು, ಈ ಕುರಿತು ಇಂದು ಸಂಜೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶನ ಪ್ರವೀಣ್ ಸೂದ್ ಸಹಾ ಮೈಸೂರಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.