ಮೈಸೂರು ದಸರಾ; ಮುನ್ನುಡಿಯಾಗಿ ನಾಳೆ ಗಜಪಡೆಯ ಆಗಮನ
ಮೈಸೂರು, ಸೆಪ್ಟೆಂಬರ್ 30: ಪ್ರಖ್ಯಾತ ದಸರಾ ಮಹೋತ್ಸವವನ್ನು ಈ ಬಾರಿ ಸರಳವಾಗಿ, ಹಾಗೆಯೇ ಸಾಂಪ್ರದಾಯಿಕವಾಗಿ ಆಚರಿಸು ನಿರ್ಧರಿಸಲಾಗಿದೆ. ದಸರಾ ಮುನ್ನುಡಿಯಾಗಿ ನಾಳೆ ಗಜಪಡೆ ಆಗಮಿಸುತ್ತಿದ್ದು, ಗಜಪಡೆಗೆ ವೀರನಹೊಸಹಳ್ಳಿಯ ಆಂಜನೇಯ ದೇವಾಲಯದಲ್ಲಿ ಅಧಿಕಾರಿಗಳು ಪೂಜೆ ಸಲ್ಲಿಸುವ ಮೂಲಕ ಸರಳ ಗಜಪಯಣಕ್ಕೆ ನಾಳೆ ಚಾಲನೆ ನೀಡಲಿದ್ದಾರೆ.
ಕೊರೊನಾ ಕಾರಣದಿಂದಾಗಿ ಈ ಬಾರಿಯ ದಸರಾವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಗಜಪಯಣದ ಜವಾಬ್ದಾರಿಯನ್ನು ಔಪಚಾರಿಕವಾಗಿ ಹಮ್ಮಿಕೊಂಡಿದೆ. ಅಕ್ಟೋಬರ್ 1ರ ಗುರುವಾರ ಬೆಳಗ್ಗೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ವೀರನಹೊಸಹಳ್ಳಿ ಗೇಟ್ ಬಳಿಯ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ 5 ಆನೆಗಳು ಮೈಸೂರಿಗೆ ಪ್ರಯಾಣ ಬೆಳೆಸಲಿವೆ.
ಮಡಿಕೇರಿಯಲ್ಲಿ ಈ ಬಾರಿ ದಸರಾ ಆಚರಣೆ ಹೇಗಿರುತ್ತೆ?; ಡಿಸಿ ಮಾಹಿತಿ
ದಸರಾ ಹಬ್ಬಕ್ಕೂ ಮುಂಚಿತ ನಡೆಯುವ ಈ ಗಜಪಯಣ, ಪ್ರತಿ ವರ್ಷವೂ ಮೆರವಣಿಗೆ ಹಾಗೂ ಇನ್ನಿತರ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನಡೆಯುತ್ತಿತ್ತು. ಆದರೆ, ಈ ವರ್ಷ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಮೆರವಣಿಗೆಗೆ ಅವಕಾಶ ಇಲ್ಲ. ಹಾಗಾಗಿ ಔಪಚಾರಿಕವಾಗಿ ಗಜಪಯಣಕ್ಕೆ ಚಾಲನೆ ಸಿಗಲಿದೆ.
ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು, ವಿಕ್ರಮ್, ವಿಜಯ, ಗೋಪಿ ಮತ್ತು ಕಾವೇರಿ ಆನೆಗಳನ್ನು ಮೈಸೂರಿನ ಅರಣ್ಯ ಭವನಕ್ಕೆ ಕರೆತರಲಾಗುತ್ತದೆ. ನಂತರ ಅಕ್ಟೋಬರ್ 2 ರಂದು ಅರಮನೆಯ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಗಜಪಡೆಗೆ ಸ್ವಾಗತ ಕೋರಲಾಗುತ್ತದೆ.