ಮೈಸೂರು ದಸರಾ; ವೀರನಹೊಸಳ್ಳಿಯಿಂದ ಮೈಸೂರಿಗೆ ಗಜಪಯಣ
ಮೈಸೂರು, ಅಕ್ಟೋಬರ್ 1: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಈ ಬಾರಿ ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆಯಲಿದ್ದು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಇಂದು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳ ತಂಡ ಇಂದು ಮೈಸೂರಿಗೆ ಬಂದಿಳಿಯಲಿದೆ.
ವೀರನಹೊಸಳ್ಳಿಯಲ್ಲಿ ಪೂಜೆ ನೆರವೇರಿಸಿ ಸಾಂಪ್ರದಾಯಿಕವಾಗಿ ಕರೆತರುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಹಿನ್ನೆಲೆಯಲ್ಲಿ, ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಗಜಪಯಣದ ಜವಾಬ್ದಾರಿಯನ್ನು ಔಪಚಾರಿಕವಾಗಿ ಹಮ್ಮಿಕೊಂಡಿತ್ತು.
ಇಂದು ವೀರನ ಹೊಸಹಳ್ಳಿಯಿಂದ ಹೊರಟ ಗಜಪಡೆ ಮೈಸೂರಿನ ಅರಣ್ಯ ಭವನಕ್ಕೆ ಮಧ್ಯಾಹ್ನದ ವೇಳೆ ಬಂದಿಳಿಯಲಿದ್ದು, ಕ್ಯಾಪ್ಟನ್ ಅಭಿಮನ್ಯು ತಂಡವನ್ನು ಸ್ವಾಗತಿಸಲು ಅರಮನೆ ನಗರಿ ಸಿದ್ಧವಾಗಿದೆ. ಗಜಪಡೆ ಸ್ವಾಗತಕ್ಕೆ ಅರಣ್ಯ ಭವನದಲ್ಲಿ ಸಕಲ ಸಿದ್ಧತೆ ಮಾಡಲಾಗುತ್ತಿದ್ದು, ಆನೆಗಳು ಅರಣ್ಯ ಭವನದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ.
ವೀರನ ಹೊಸಹಳ್ಳಿಯಲ್ಲಿ ಗಜಪಡೆಗೆ ಬೆಳಿಗ್ಗೆ 10 ರಿಂದ 11ರ ಒಳಗೆ ಪೂಜೆ ನೆರವೇರಿಸಲಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನತ್ತ ಗಜಪಡೆ ಪ್ರಯಾಣ ಬೆಳೆಸಿದೆ. ಪೂಜೆ ಕಾರ್ಯಕ್ರಮದಲ್ಲಿ ಕೇವಲ ಅಧಿಕಾರಿಗಳಷ್ಟೇ ಭಾಗಿಯಾಗಿದ್ದರು. ಗಜಪಯಣ ಪೂಜಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಭಾಗಿಯಾಗಿರಲಿಲ್ಲ.
ದಸರಾ ಹಬ್ಬಕ್ಕೂ ಮುಂಚಿತ ನಡೆಯುವ ಈ ಗಜಪಯಣ, ಪ್ರತಿ ವರ್ಷವೂ ಮೆರವಣಿಗೆ ಹಾಗೂ ಇನ್ನಿತರ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನಡೆಯುತ್ತಿತ್ತು. ಆದರೆ, ಈ ವರ್ಷ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಮೆರವಣಿಗೆಗೆ ಅವಕಾಶ ಇಲ್ಲ.