ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗೆ ಜಿ.ಪರಮೇಶ್ವರ್ ತೀಕ್ಷ್ಣ ಪ್ರತಿಕ್ರಿಯೆ
ಮೈಸೂರು, ಜೂನ್ 24: ರಾಜ್ಯ ಕಾಂಗ್ರೆಸ್ನಲ್ಲಿ ಎದ್ದಿರುವ ಮುಂದಿನ ಸಿಎಂ ಯಾರು? ಎಂಬ ಚರ್ಚೆಗೆ ಸಂಬಂಧಿಸಿದಂತೆ "ಸಮಯ, ಸಂದರ್ಭ ಬರಲಿ ಆಗ ಅದನ್ನು ಹೇಳುತ್ತೇನೆ,'' ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನ್ನನ್ನು ಭಾವಿ ಸಿಎಂ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು. ನಾನು ಆ ರೀತಿ ಕೂಗಬೇಡಿ ಎಂದು ಹೇಳಿದ್ದೇನೆ. ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಈಗಲೇ ಈ ವಿಚಾರ ಚರ್ಚೆ ಸರಿಯಲ್ಲ. ಹೀಗಾಗಿ ಆ ಸಮಯ, ಸಂದರ್ಭ ಬರಲಿ ಆಗ ಅದನ್ನು ಹೇಳುತ್ತೇನೆ,'' ಎಂದು ನೀವು ಸಿಎಂ ರೇಸ್ನಲ್ಲಿ ಇದ್ದೀರಾ ಅನ್ನುವ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದರು.
ಕಾಂಗ್ರೆಸ್ನ ಆಂತರಿಕ ಕಲಹ ಒಪ್ಪಿಕೊಂಡ ಯತೀಂದ್ರ ಸಿದ್ದರಾಮಯ್ಯ
"ಅಲ್ಲದೇ ನಾವೆಲ್ಲ ಗೆಲ್ಲಬೇಕು, ಬಹುಮತ ಬರಬೇಕು, ಬಂದಮೇಲೆ ಶಾಸಕರು ಅಭಿಪ್ರಾಯ ಹೇಳುತ್ತಾರೆ. ಅಲ್ಲಿಯವರೆಗೆ ಕಾಂಗ್ರೆಸ್ ಶಾಸಕರು ಶಾಸಕಾಂಗ ಸಭೆಯಲ್ಲಿ ನಿರ್ದಿಷ್ಟವಾಗಿ ಇಂತವರೇ ಮುಖ್ಯಮಂತ್ರಿ ಎಂದು ಹೆಸರು ಸೂಚಿಸಿಲ್ಲ. ಕೇವಲ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದು, ಇದೇ ಸಂಸ್ಕೃತಿ ಮುಂದೆಯೂ ಇರಲಿದೆ,'' ಎಂದರು.
ಇದೇ ವೇಳೆ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂಬ ಕೈ ಕಾರ್ಯಕರ್ತರು ಘೋಷಣೆ ಕೂಗಿರುವ ಬಗ್ಗೆ ಟಾಂಗ್ ನೀಡಿದ ಡಾ.ಜಿ. ಪರಮೇಶ್ವರ್, "ನಮ್ಮ ಸ್ನೇಹಿತರಲ್ಲಿ, ಹಿರಿಯರಲ್ಲಿ ಮನವಿ ಮಾಡುತ್ತೇನೆ. ಸಿಎಂ ವಿಚಾರದ ಚರ್ಚೆ ನಿಲ್ಲಿಸಿ, ಇದನ್ನು ಇನ್ನು ಬೆಳೆಸಬೇಡಿ,'' ಎಂದು ಮನವಿ ಮಾಡಿದರು.
"ಇನ್ನು ಬಿಜೆಪಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿ. ಪರಮೇಶ್ವರ್, ಬಿಜೆಪಿ ಕಾರ್ಯಕರ್ತರು ತಾವೇ ವ್ಯಾಕ್ಸಿನ್ ತಯಾರಿಸಿ ಹಂಚುತ್ತಿರುವ ರೀತಿ ವರ್ತಿಸುತ್ತಿದ್ದು, ಇದು ಸರಿಯಾದ ಕ್ರಮವಲ್ಲ. ಬಿಜೆಪಿ ಕಾರ್ಯಕರ್ತರು ಬೇಕಾದರೆ ತಮ್ಮ ಹಣದಲ್ಲಿ ಹಂಚಿ ಪ್ರಚಾರ ಪಡೆಯಲಿ. ಅದು ಬಿಟ್ಟು ಸರ್ಕಾರ ಹಂಚುತ್ತಿರುವ ವ್ಯಾಕ್ಸಿನ್ನಲ್ಲಿ ಪಕ್ಷದ ಪ್ರಚಾರ ಒಳೆಯದ್ದಲ್ಲ,'' ಎಂದು ಟೀಕಿಸಿದರು.
"ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣದಲ್ಲಿ ವಿಫಲವಾಗಿವೆ. ಕೋವಿಡ್ ನಿಯಂತ್ರಣದ ಪೂರ್ವ ಸಿದ್ಧತೆ ಸರಿಯಾಗಿ ಮಾಡಲಿಲ್ಲ. ಖಾಸಗಿ ಆಸ್ಪತ್ರೆಗಳನ್ನು ಇನ್ನೂ ವಿಶ್ವಾಸಕ್ಕೆ ಪಡೆದುಕೊಂಡಿಲ್ಲ. ಇದು ಸರ್ಕಾರದ ವಿಫಲತೆ, ಇದರಿಂದ ಹೆಚ್ಚಿನ ಸಾವುಗಳು ಆಗಿವೆ,'' ಎಂದು ಆರೋಪಿಸಿದರು.