ಮನೆ ಕಳೆದುಕೊಂಡ ಸಂತ್ರಸ್ತರಿಗೆ ಹಣ ಬಿಡುಗಡೆ; ಸಚಿವ ಸೋಮಣ್ಣ
ಮೈಸೂರು ,ನವೆಂಬರ್ 13: ಕಳೆದ ಮಳೆಗಾಲದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಲು ಹಣ ಬಿಡುಗಡೆ ಮಾಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಮಾಹಿತಿ ನೀಡಿದರು.
ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, "ಇಲವಾಲ ಬಳಿಯ 496 ಎಕರೆ ಸಾಕಷ್ಟು ಗೊಂದಲಮಯವಾಗಿತ್ತು. ಸೈಟ್ ನಿರ್ಮಾಣ ಮಾಡಿದ ಬಳಿಕ ಜನರಿಗೆ ಅದು ಸಿಕ್ಕಿರಲಿಲ್ಲ. ಸಾಕಷ್ಟು ಮಂದಿ ಬೇಸರ ವ್ಯಕ್ತಪಡಿಸಿ ನನ್ನನ್ನು ಭೇಟಿ ಮಾಡಿದ್ದರು. ಆ ವೇಳೆ ಜಾಗ ಕೊಟ್ಟವರಿಗೆ ನಾನು ಸಾಂತ್ವನದ ಮಾತನ್ನು ಹೇಳಿದ್ದೆ. ಬಳಿಕ ಜಾಗ ಕೊಟ್ಟವರಿಗೆ ಸಾಂತ್ವನ ನಿವೇಶನ ಕೊಡಬೇಕು ಎಂದು ಚರ್ಚೆ ಆಗಿತ್ತು. ಇದಕ್ಕೆ ಜಿ.ಟಿ ದೇವೇಗೌಡರ ಸಹಕಾರವಿದೆ. ಇದೀಗ ನಿವೇಶನ ಕೊಟ್ಟವರಿಗೆ ಸಾಂತ್ವನ ನಿವೇಶನ ಕೊಡುತ್ತಿದ್ದೇವೆ" ಎಂದರು.
ಸಂತ್ರಸ್ತರಿಗೆ ಮನೆ ಹಂಚಿಕೆಯಲ್ಲಿ ಅಕ್ರಮ; ಅಧಿಕಾರಿ ಅಮಾನತಿಗೆ ಸೋಮಣ್ಣ ಆದೇಶ
ಕಳೆದ ಬಾರಿ ಮನೆ ಕಳೆದುಕೊಂಡರಿಗೆ ಮನೆ ಕಟ್ಟಲು ಹಣ ಬಿಡುಗಡೆ ಮಾಡಲಾಗಿದೆ. ಕಳೆದ ಬಾರಿ 65 ಸಾವಿರ ಮನೆಗಳು ಬಿದ್ದುಹೋಗಿದ್ದವು. ಅದಕ್ಕಾಗಿ 1710 ಕೋಟಿ ಹಣ ಬಿಡುಗಡೆ ಆಗಿದೆ. ಮೊದಲ ಕಂತು 1 ಲಕ್ಷವನ್ನು ಎಲ್ಲರಿಗೂ ನೀಡಿದ್ದೇವೆ. ಆದರೆ ಎರಡನೇ ಕಂತಿನ ಹಣವನ್ನು 6-7 ಸಾವಿರ ಮನೆ ಮಾಲೀಕರು ಮಾತ್ರ ತೆಗೆದುಕೊಂಡಿದ್ದಾರೆ. ವಸತಿ ಇಲಾಖೆಯಲ್ಲಿ ಹಣದ ಕೊರತೆ ಇಲ್ಲ. ಶಾಶ್ವತ ಸ್ಥಳಾಂತರಕ್ಕೆ ಕೆಲವರು ಒಪ್ಪುತ್ತಿಲ್ಲ. ಮನೆ ನಿರ್ಮಾಣ ಆಗಿದ್ದರೂ ಜನರು ಹೋಗಿಲ್ಲ. ರಾಜ್ಯಾದ್ಯಂತ ಉಪನಗರ ನಿರ್ಮಾಣಕ್ಕೆ ಚಿಂತನೆ ಮಾಡಿದ್ದೇವೆ ಎಂದರು.
ಇದೇ ಸಂದರ್ಭ ಯತ್ನಾಳ್ ಅವರ ಕುರಿತು ಮಾತನಾಡಿ, "ಯತ್ನಾಳ್ ಪಕ್ಷದಲ್ಲೇ ಇದ್ದಾರೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದೆ. ಅದನ್ನು ಸರಿ ಮಾಡಿಕೊಳ್ಳುತ್ತೇವೆ. ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿ. ಅವರು ಪ್ರಶ್ನಾತೀತ ನಾಯಕ. ಅವರ ಪರವಾಗಿ ನಾನು ಅವರ ಮನವೊಲಿಸುವ ಕೆಲಸ ಮಾಡಿಲ್ಲ. ಯತ್ನಾಳ್ ಕೂಡ ನಮ್ಮ ಪಕ್ಷದ ಹಿರಿಯ ನಾಯಕನಾಗಿದ್ದಾರೆ. ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ" ಎಂದು ಸ್ಟಷ್ಟಪಡಿಸಿದರು.