ಹುಣಸೂರಲ್ಲಿ ಜಿಟಿ ದೇವೇಗೌಡಗೆ ಭಾರೀ ಬೇಡಿಕೆ
Recommended Video
ಮೈಸೂರು,ನವೆಂಬರ್ 15: ಕರ್ನಾಟಕದಲ್ಲಿ ಸದ್ಯ ನಡೆಯುವ ವಿಧಾನಸಭಾ ಉಪ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರವೂ ಒಂದು. ಅಲ್ಲಿ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ. ಈ ಕ್ಷೇತ್ರದಲ್ಲಿ ತನ್ನದೇ ವೋಟ್ ಬ್ಯಾಂಕ್ ಹೊಂದಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ಭಾರೀ ಬೇಡಿಕೆ ಹೊಂದಿದ್ದಾರೆ.
ಸದ್ಯ ಜಿಟಿಡಿ ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿರುವದರಿಂದ ಅವರ ನಡೆ ಏನು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡತೊಡಗಿದೆ. ಜಿ.ಟಿ,ದೇವೇಗೌಡರು ಯಾರಿಗೆ ಬೆಂಬಲ ಕೊಡುತ್ತಾರೋ ಅವರ ಗೆಲುವು ಸುಲಭವಾಗಲಿದೆ ಎನ್ನುವುದು ಕ್ಷೇತ್ರದ ಜನರ ಲೆಕ್ಕಾಚಾರ.
ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಹೆಚ್.ವಿಶ್ವನಾಥ್, ಕಾಂಗ್ರೆಸ್ ನಿಂದ ಹೆಚ್.ಪಿ. ಮಂಜುನಾಥ್ ಮತ್ತು ಜೆಡಿಎಸ್ ನಿಂದ ಸೋಮಶೇಖರ್ ಕಣಕ್ಕಿಳಿಯಲಿದ್ಧಾರೆ. ಈ ಮೂರು ಅಭ್ಯರ್ಥಿಗಳು ಜಿಟಿಡಿಯವರ ಬೆಂಬಲ ಪಡೆಯಲು ಪ್ರಯತ್ನ ಪಡುತ್ತಿದ್ದಾರೆ.
ಮೂರು ಪಕ್ಷಗಳಲ್ಲಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿರುವ ದೇವೇಗೌಡರಿಗೆ ಈಗ ಫುಲ್ ಡಿಮ್ಯಾಂಡ್ ಬಂದಿದೆ. ಈ ಕ್ಷೇತ್ರದಲ್ಲಿ 20 ವರ್ಷಗಳಿಂದ ಒಡನಾಟ ಹೊಂದಿರುವುದರಿಂದ ಸಹಜವಾಗಿಯೇ ಜನರು ಮತ್ತು ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳ ಪರಿಚಯ ಸಾಕಷ್ಟಿದೆ.
ಹುಣಸೂರು ಕ್ಷೇತ್ರದಲ್ಲಿ ಜಿಟಿಡಿ ಪುತ್ರ ಹರೀಶ್ ಗೂ ಜನ ಬೆಂಬಲವಿರುವುದರಿಂದ ಬಿಜೆಪಿ ಟಿಕೆಟ್ ನೀಡಲು ಅವರ ಅಭಿಮಾನಿಗಳು ಒತ್ತಾಯಿಸಿದ್ದರು. ಅಲ್ಲಿ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಅವರಿಗೆ ಟಿಕೆಟ್ ದೊರಕಿದ ಕಾರಣ ತಮ್ಮ ಪುತ್ರನನ್ನು ಕಣಕ್ಕಿಳಿಸಬೇಕೆಂಬ ಜಿಟಿಡಿ ಬಯಕೆ ಸಾಕಾರಗೊಳ್ಳಲಿಲ್ಲ. ಸದ್ಯ ಅವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಚುನಾವಣೆ ವೇಳೆ ದೇವೇಗೌಡರು ಯಾರಿಗೆ ಬೆಂಬಲ ನೀಡುತ್ತಾರೋ ಕಾದು ನೋಡಬೇಕು.