ಮೈಸೂರಿನಿಂದ ಮತ್ತಷ್ಟು ವಿಮಾನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್
ಮೈಸೂರು, ಜುಲೈ 9: ಕೆಲವೇ ದಿನಗಳ ಕೆಳಗೆ ಬೆಂಗಳೂರಿಗೆ ಉಡಾನ್ -3 ಯೋಜನೆಯಡಿ ಮೈಸೂರಿನಿಂದ ವಿಮಾನಯಾನ ಆರಂಭವಾದ ಬೆನ್ನಲ್ಲೇ, ಇದೇ ಜುಲೈ 19ರಿಂದ ಮತ್ತಷ್ಟು ವಿಮಾನಗಳು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಕೊಚ್ಚಿ, ಗೋವಾ ಹಾಗೂ ಹೈದರಾಬಾದ್ಗೆ ಸಂಚರಿಸಲು ಸಿದ್ಧವಾಗಿವೆ.
ಎಟಿಆರ್ 72 ಆಸನಗಳುಳ್ಳ ವಿಮಾನ ಕಾರ್ಯಾಚರಣೆಯನ್ನು ಏರ್ ಇಂಡಿಯಾದ ಅಲಯನ್ಸ್ ಏರ್ ಸಂಸ್ಥೆ ನಡೆಸಲಿದೆ. ಒಂದೇ ವಿಮಾನ ದಿನವಿಡೀ ವಿವಿಧ ನಗರಗಳನ್ನು ಸಂಪರ್ಕಿಸಲಿದೆ. ಹೈದರಾಬಾದ್ನಿಂದ ಬೆಳಿಗ್ಗೆ 6.05ಕ್ಕೆ ಹೊರಟು ಮೈಸೂರಿಗೆ 7.50ಕ್ಕೆ ಬರಲಿದೆ. ಮೈಸೂರಿನಿಂದ ಬೆಳಿಗ್ಗೆ 8.15ಕ್ಕೆ ಹೊರಟು 9.45ಕ್ಕೆ ಕೊಚ್ಚಿ ತಲುಪುತ್ತದೆ. ಕೊಚ್ಚಿಯಿಂದ ಬೆಳಿಗ್ಗೆ 10.10ಕ್ಕೆ ಹೊರಟು 11.40ಕ್ಕೆ ಮೈಸೂರಿಗೆ ಬರಲಿದೆ.
ಜೂ. 7ರಿಂದ ಮೈಸೂರು -ಬೆಂಗಳೂರು ವಿಮಾನಯಾನಕ್ಕೆ ಗ್ರೀನ್ ಸಿಗ್ನಲ್
ಮೈಸೂರಿನಿಂದ ಮಧ್ಯಾಹ್ನ 12.10ಕ್ಕೆ ನಿರ್ಗಮಿಸಿ 1.05ಕ್ಕೆ ಬೆಂಗಳೂರಿಗೆ ತಲುಪುತ್ತದೆ. ಬೆಂಗಳೂರಿನಿಂದ ಮಧ್ಯಾಹ್ನ 1.50ಕ್ಕೆ ಹೊರಟು 2.50ಕ್ಕೆ ಮೈಸೂರಿಗೆ ಬರಲಿದೆ. ಮೈಸೂರಿನಿಂದ ಮಧ್ಯಾಹ್ನ 3.20ಕ್ಕೆ ಹೊರಟು ಸಂಜೆ 4.50ಕ್ಕೆ ಗೋವಾಕ್ಕೆ ಬಂದಿಳಿಯಲಿದೆ. ಗೋವಾದಿಂದ ಸಂಜೆ 5.20ಕ್ಕೆ ನಿರ್ಗಮಿಸಿ ಮೈಸೂರಿಗೆ 6.50ಕ್ಕೆ ಬರಲಿದೆ. ಮೈಸೂರಿನಿಂದ ರಾತ್ರಿ 7.20ಕ್ಕೆ ಹೊರಟು 9.05ಕ್ಕೆ ಹೈದರಾಬಾದ್ ತಲುಪಲಿದೆ.
ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಡಿ ಈ ಸೇವೆ ಒದಗಿಸಲು ನಾಗರಿಕ ವಿಮಾನಯಾನ ಸಚಿವಾಲಯ ಜನವರಿಯಲ್ಲಿ ಅನುಮತಿ ನೀಡಿತ್ತು. ಸಂಸದ ಪ್ರತಾಪಸಿಂಹ ಅವರು ವಿವಿಧ ವಿಮಾನಯಾನ ಕಂಪನಿಗಳ ಮುಖ್ಯಸ್ಥರು ಹಾಗೂ ನಾಗರಿಕ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಇದರೊಂದಿಗೆ ಪ್ರವಾಸಿಗಳ ಸ್ವರ್ಗ ಕೇರಳ, ಗೋವಾ ಹಾಗೂ ಹೈದರಾಬಾದ್ನೊಂದಿಗೆ ಪ್ರವಾಸಿಗರ ತಾಣ ಮೈಸೂರಿಗೆ ಸಂಪರ್ಕ ಏರ್ಪಡಲಿದೆ.