ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಾಗ್ದಾಳಿಗೆ ಕಾಂಗ್ರೆಸ್ ಬೇಸ್ತು!
ಮೈಸೂರು, ಫೆ 2: ಸದ್ಯ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ, ಅದನ್ನು ಕೇಂದ್ರ ಸರಕಾರ ನಿಭಾಯಿಸುತ್ತಿರುವ ರೀತಿಯ ಬಗ್ಗೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ದೊರೆಸ್ವಾಮಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ದ ಬೇಸರ ವ್ಯಕ್ತ ಪಡಿಸಿದ್ದು ಹೀಗೆ, "ದೇಶ ಹೊತ್ತಿ ಉರಿಯುತ್ತಿದ್ದರೂ ಕಾಂಗ್ರೆಸ್ ಸತ್ತು ಹೋಗಿದೆ"ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ದೆಹಲಿಯಲ್ಲಿ ದಿಕ್ಕು ತಪ್ಪುತ್ತಿದೆಯೇ ರೈತರ ಪ್ರತಿಭಟನೆ: ಏನಿದು ಕೇಜ್ರಿವಾಲ್ ಕೈವಾಡದ ಶಂಕೆ?
"ನಿಮ್ಮ ತಾತ ನೆಹರೂ ಅವರನ್ನು ನೋಡಿ ಕಲಿತುಕೊಳ್ಳಿ, ಅವರ ಜೀವನ ಚರಿತ್ರೆಯನ್ನು ಸರಿಯಾಗಿ ಓದಿಕೊಳ್ಳಿ. ನೀವಂತೂ ಮನೆಬಿಟ್ಟು ಹೊರಬರುತ್ತಿಲ್ಲ"ಎಂದು ರಾಹುಲ್ ಗಾಂಧಿ ವಿರುದ್ದ ದೊರೆಸ್ವಾಮಿ ಕಿಡಿಕಾರಿದ್ದಾರೆ.
"ದೇಶದ ಪರಿಸ್ಥಿತಿ ಸರಿಯಿಲ್ಲ. ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಪ್ರಮುಖ ವಿರೋಧ ಪಕ್ಷವಾಗಿ ಕಾಂಗ್ರೆಸ್ ಏನು ಮಾಡುತ್ತಿದೆ. ಇದನ್ನು ಸರಿಯಾಗಿ ನಿಭಾಯಿಸಿ, ಸಾಧ್ಯವಾಗದಿದ್ದಲ್ಲಿ ನಿಮ್ಮ ಕುಟುಂಬದಿಂದ ಹೊರತಾಗಿ ಬೇರೆ ಯಾರಿಗಾದರೂ ಅಧ್ಯಕ್ಷ ಸ್ಥಾನವನ್ನು ನೀಡಿ"ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ದೊರೆಸ್ವಾಮಿ ಸಲಹೆಯನ್ನು ನೀಡಿದ್ದಾರೆ.
ಗಾದೆ ಮಾತಿನೊಂದಿಗೆ ಜೆಡಿಎಸ್ ವರಿಷ್ಠ ದೇವೇಗೌಡ್ರ ವಿರುದ್ದವೂ ಸಿಟ್ಟಾದ ದೊರೆಸ್ವಾಮಿ, "ಆರು ಕೊಟ್ಟರೆ ಅತ್ತೆಯ ಕಡೆ, ಮೂರು ಕೊಟ್ಟರೆ ಸೊಸೆಯ ಕಡೆಗೆ ಎನ್ನುವ ರೀತಿಯಲ್ಲಿ ದೇವೇಗೌಡ್ರು ನಡೆದುಕೊಳ್ಳುತ್ತಿದ್ದಾರೆ. ಇವರನ್ನೆಲ್ಲಾ ನಂಬಿದರೆ ಹೋರಾಟ ದಡ ಸೇರಲು ಸಾಧ್ಯವೇ"ಎಂದು ಪ್ರಶ್ನಿಸಿದ್ದಾರೆ.
"ರೈತರು ಆಕ್ರಮಣಕಾರಿಯಾಗಿ ನುಗ್ಗಿದರು, ಆಸ್ತಿಪಾಸ್ತಿ ನಾಶ ಮಾಡಿದರು"
"ಈ ವಯಸ್ಸಿನಲ್ಲೂ ಜಾತ್ಯಾತೀತವಾಗಿ ನೂರಾರು ಜನರನ್ನು ಕರೆದುಕೊಂಡು ದೆಹಲಿಗೆ ಹೋಗಿ ಪ್ರತಿಭಟನೆ ಮಾಡಲು ನಾನು ಸಿದ್ದನಿದ್ದೇನೆ"ಎಂದು ದೊರೆಸ್ವಾಮಿ ಹೇಳುವ ಮೂಲಕ ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.