ವಿದೇಶಿಗರಿಗೆ ಜಂಬೂಸವಾರಿ ವೀಕ್ಷಣೆಗೆ ಉಚಿತ ಪಾಸು
ಮೈಸೂರು, ಸೆಪ್ಟೆಂಬರ್ 21: ಮೈಸೂರು ದಸರಾ ಜಂಬೂಸವಾರಿ ವೀಕ್ಷಣೆಗಾಗಿ ಜಿಲ್ಲೆ, ರಾಜ್ಯ, ಹೊರ ರಾಜ್ಯಗಳಿಂದ ಮಾತ್ರವಲ್ಲ ವಿದೇಶದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಾರೆ. ಅದರಲ್ಲಿಯೂ ವಿದೇಶದಿಂದ ಬರುವ ಪ್ರವಾಸಿಗರ ಪೈಕಿ ಕೆಲವರಿಗೆ ಮಾತ್ರ ಅರಮನೆ ಆವರಣದಲ್ಲಿ ಕುಳಿತು ವೀಕ್ಷಿಸಲು ಅವಕಾಶವಿರುತ್ತದೆ. ಉಳಿದಂತೆ ಹೆಚ್ಚಿನವರು ರಸ್ತೆ ಬದಿ ನೂಕು ನುಗ್ಗಲಿನಲ್ಲಿ ನಿಂತು ವೀಕ್ಷಿಸಬೇಕಾಗುತ್ತದೆ.
ಇಂತಹ ವಿದೇಶಿ ಪ್ರವಾಸಿಗರ ಅನುಕೂಲಕ್ಕಾಗಿ ಇದೀಗ ಕಲ್ಪವೃಕ್ಷ ಟ್ರಸ್ಟ್, ಮತ್ತು ಜನಚೇತನ ಟ್ರಸ್ಟ್ ಉಚಿತ ಪಾಸು ನೀಡುವ ಕಾರ್ಯಕ್ಕೆ ಮುಂದಾಗಿದೆ. ಜಂಬೂಸವಾರಿ ನಡೆಯುವ ದಿನ ಅಂದರೆ ಅ.8ರಂದು ಜಂಬೂಸವಾರಿ ಸಾಗುವ ಹಾದಿಯ ಸಯ್ಯಾಜಿರಾವ್ ರಸ್ತೆಯ ಆರ್ಯುವೇದ ಕಾಲೇಜಿನ ಮುಂಭಾಗ ವ್ಯವಸ್ಥೆ ಮಾಡಲಾಗುತ್ತಿದೆ. ಸಂಪೂರ್ಣ ಟ್ರಸ್ಟ್ನ ಖರ್ಚಿನಲ್ಲಿಯೇ ಶಾಮಿಯಾನ ಅಳವಡಿಸಿ 1500 ಮಂದಿ ಕುಳಿತು ಜಂಬೂಸವಾರಿ ವೀಕ್ಷಿಸಲು ಅನುವು ಮಾಡಿಕೊಡಲಾಗುತ್ತಿದೆ. ಉಚಿತವಾಗಿ ಬಿಸ್ಲರಿ ನೀರು, ಬಿಸ್ಕತ್ ಜತೆಗೆ ಜಂಬೂ ಸವಾರಿಯ ಕಲಾ ತಂಡಗಳು ಮತ್ತು ಸ್ತಬ್ದ ಚಿತ್ರಗಳು ಸೇರಿದಂತೆ ಹಲವು ವಿಚಾರಗಳ ಕುರಿತು ವೀಕ್ಷಕ ವಿವರಣೆಯನ್ನು ಆಂಗ್ಲಭಾಷೆಯಲ್ಲಿ ನೀಡಲು ಕ್ರಮ ಕೈಗೊಳ್ಳಲಾಗಿದೆ.
ದಸರಾ ಹಿನ್ನೆಲೆ ಸಚಿವ ಸೋಮಣ್ಣ ಅವರಿಂದ ಸ್ವಚ್ಛತಾ ಪರಿಶೀಲನೆ
ಕಳೆದ ಕೆಲ ವರ್ಷಗಳಿಂದ ವಿದೇಶಿಗರಿಗಾಗಿಯೇ ಈ ವ್ಯವಸ್ಥೆಯನ್ನು ಮೈಸೂರಿನ ಕಲ್ಪವೃಕ್ಷ ಟ್ರಸ್ಟ್ ಮತ್ತು ಜನಚೇತನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಮಾಡುತ್ತಾ ಬಂದಿದ್ದು ವಿದೇಶಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಇದರಿಂದ ಎಲ್ಲೆಂದರಲ್ಲಿ ನಿಂತು ನೋಡುವ ಬದಲಾಗಿ ಆರಾಮದಾಯಕವಾಗಿ ಮೆರವಣಿಗೆ ವೀಕ್ಷಿಸಿ ಮೈಸೂರಿಗರ ಆತಿಥ್ಯವನ್ನು ಸ್ವೀಕರಿಸಿ ಅವರವರ ದೇಶಗಳಲ್ಲಿ ಮೈಸೂರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ಸಹಕಾರಿಯಾಗುತ್ತದೆ ಎಂಬುದು ಸಂಘಟಕರ ಅಭಿಪ್ರಾಯ.
ಇದೀಗ ವಿದೇಶಿ ಪ್ರವಾಸಿಗರ ಉಚಿತ ಪಾಸನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸೋಮಣ್ಣ ಅವರು ಬಿಡುಗಡೆಗೊಳಿಸಿದ್ದು, ಸಂದರ್ಭ ಕಲ್ಪವೃಕ್ಷ ಟ್ರಸ್ಟ್ನ ಎ.ಜಿ.ದೇವರಾಜು, ಎಸ್. ಪ್ರಶಾಂತ್, ಜನಚೇತನ ಟ್ರಸ್ಟ್ನ ಅಧ್ಯಕ್ಷರಾದ ಪ್ರಸನ್ನ.ಎನ್.ಗೌಡ, ಬೆಟ್ಟೇಗೌಡ, ಲಕ್ಷ್ಮೀದೇವಿ ಹಾಗೂ ಶೇಖರ್ ಉಪಸ್ಥಿತರಿದ್ದರು.
ಸೆ.30ರಿಂದ ಸಂಭ್ರಮದ ಮಹಿಳಾ ಮತ್ತು ಮಕ್ಕಳ ದಸರಾ ಆರಂಭ
ವಿದೇಶಿ ಪ್ರವಾಸಿಗರಿಗೆ ಉಚಿತ ಪಾಸು ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ದೇವರಾಜು-9164837773, ಪ್ರಶಾಂತ್- 984405624೪ ಅವರನ್ನು ಸಂಪರ್ಕಿಸಬಹುದಾಗಿದೆ.