"ಫ್ರೀ ಕಾಶ್ಮೀರ್" ಪ್ರಕರಣ: ನಳಿನಿ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ
ಮೈಸೂರು, ಜನವರಿ 14: ಜೆಎನ್ ಯುನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಖಂಡಿಸಿ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಆವರಣದಲ್ಲಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ "ಫ್ರೀ ಕಾಶ್ಮೀರ್' ಫಲಕ ಹಿಡಿದಿದ್ದ ಯುವತಿ ನಳಿನಿ ಪರ ಯಾರೂ ವಕಾಲತ್ತು ವಹಿಸಬಾರದೆಂಬ ನಿರ್ಣಯ ಕೈಗೊಂಡಿರುವುದಾಗಿ ಮೈಸೂರು ವಕೀಲರ ಅಧ್ಯಕ್ಷ ಆನಂದ್ ಕುಮಾರ್ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲೇ ನಳಿನಿ "ನೋ ಹ್ಯುಮಾನಿಟಿ" ಎಂದು ಕೋರ್ಟ್ ಆವರಣದಲ್ಲೇ ಕೂಗಾಡಿದ ಘಟನೆಯೂ ನಡೆದಿದೆ.
"ಫ್ರೀ ಕಾಶ್ಮೀರ" ಎಂಬ ನಾಮಫಲಕ ಪ್ರದರ್ಶನ ಮಾಡಿದ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿ ನಳಿನಿ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಆದರೆ ಅವರ ಪರ ವಾದ ಮಾಡಿದ್ದ ಯುವ ವಕೀಲ ಪೃಥ್ವಿ ಕಿರಣ್ ಅವರು ವಕಾಲತ್ತಿನಿಂದ ಹಿಂದೆ ಸರಿದಿದ್ದಾರೆ.
ಪ್ರತಿಭಟನೆಯಲ್ಲಿ "ಫ್ರೀ ಕಾಶ್ಮೀರ್" ಫಲಕ ವಿವಾದ; ಫಲಕ ಹಿಡಿದ ನಳಿನಿ ಹೇಳುವುದೇನು?
ಪ್ರಕರಣದ ಗಂಭೀರತೆಯನ್ನು ಅರಿತು ದೇಶದ್ರೋಹ ಕೃತ್ಯವೆಸಗಿರುವವರ ಪರ ವಕಾಲತ್ತು ವಹಿಸುವುದಿಲ್ಲ ಎಂದು ವಕೀಲ ಕಿರಣ್ ಹೇಳಿದ್ದಾರೆ.
ಮೈಸೂರಿನ ಘನತೆ ಉಳಿಸಲು ಈ ನಿರ್ಧಾರ ಎಂದ ವಕೀಲರು
ಕಿರಣ್ ಅವರು ಈ ಹಿಂದೆ ನಳಿನಿ ಅವರ ಪರ ವಕಾಲತ್ತು ವಹಿಸಿದ್ದರು. ಆದರೆ ಈಗ ಅದರಿಂದ ಹಿಂದೆ ಸರಿದಿದ್ದಾರೆ. ಇದೇ ರೀತಿ ನಮ್ಮ ಸಂಘದ ಯಾವೊಬ್ಬ ವಕೀಲರೂ ಇಂತಹ ಕೃತ್ಯವನ್ನೆಸಗಿ ಶಾಂತವಾಗಿದ್ದ ಮೈಸೂರಿನ ವಾತಾವರಣವನ್ನು ಬದಲಿಸಲು ಯತ್ನಿಸಿರುವ ಶಕ್ತಿಗಳಿಗೆ ವಕಾಲತ್ತು ವಹಿಸಬಾರದು ಎಂದು ಎಲ್ಲ ಸದಸ್ಯರಿಗೂ ಅಧ್ಯಕ್ಷರು ತಿಳಿಸಬೇಕೆಂದು ಮನವಿ ಮೂಲಕ ಕೋರಿದ್ದಾರೆ.
ಮೈಸೂರು ವಕೀಲರ ಸಂಘ ತನ್ನದೇ ಆದ ಘನತೆ ಹೊಂದಿದೆ. ಈ ಹಿಂದೆಯೂ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾದವರ ಕೃತ್ಯವನ್ನು ಸಂಘ ನೇರವಾಗಿ ಖಂಡಿಸಿದೆ. ಅಷ್ಟೇ ಅಲ್ಲ ಅವರ ಪರ ವಕಾಲತ್ತು ವಹಿಸದೆ ದಿಟ್ಟ ನಿರ್ಧಾರ ಕೈಗೊಂಡು ಇಡೀ ದೇಶಕ್ಕೇ ಮಾದರಿಯಾಗಿದೆ ಎಂದು ವಕೀಲರ ಸಂಘದ ಸದಸ್ಯರು ತಿಳಿಸಿದ್ದಾರೆ.
ಮೈಸೂರಿನ ಹೆಸರಿಗೆ ಮಸಿ ಬಳಿದವರಿಗೆ ಬೆಂಬಲ ಕೊಡಲ್ಲ ಎಂದ ವಕೀಲರು
ಮೈಸೂರು ವಕೀಲರ ಸಂಘ ತನ್ನದೇ ಆದ ಘನತೆ ಹೊಂದಿದೆ. ಈ ಹಿಂದೆಯೂ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾದವರ ಕೃತ್ಯವನ್ನು ಸಂಘ ನೇರವಾಗಿ ಖಂಡಿಸಿದೆ. ಅವರ ಪರ ವಕಾಲತ್ತು ವಹಿಸದೆ ದಿಟ್ಟ ನಿರ್ಧಾರ ಕೈಗೊಂಡು ಇಡೀ ದೇಶಕ್ಕೇ ಮಾದರಿಯಾಗಿದೆ. ಶಂಕಿತ ಉಗ್ರರಾದ ಫಹಾದ್ ಮತ್ತು ಅಲಿ ಇರಬಹುದು ಅಥವಾ ಬೇರೆ ಯಾವುದೇ ದೇಶದ್ರೋಹದಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವವರ ಪರ ವಕಾಲತ್ತು ವಹಿಸಿಲ್ಲ. ಇಂತಹ ಕೃತ್ಯ ದೇಶದ ಯಾವುದೇ ಮೂಲೆಯಲ್ಲಿ ನಡೆದರೂ ಅದನ್ನು ಖಂಡಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ ಹೆಗ್ಗಳಿಕೆ ಮೈಸೂರು ವಕೀಲರ ಸಂಘಕ್ಕಿದೆ ಎಂದು ಹೇಳಿದ್ದಾರೆ.
ಇದೇ ಪರಂಪರೆ ಮುಂದುವರಿಸುವ ಮಹತ್ತರ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಹೀಗಾಗಿ ಈ ಪ್ರಕರಣದಲ್ಲಿ ವಕಾಲತ್ತು ವಹಿಸದಂತೆ ನಿರ್ಣಯ ಮಂಡಿಸಬೇಕು ಎಂದು ವಕೀಲರ ಸಂಘದ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ವಕಾಲತ್ತಿನಿಂದ ಹಿಂದೆ ಸರಿದ ಕಿರಿಯ ವಕೀಲ
ಮೈಸೂರು ಸಾಂಸ್ಕೃತಿಕ ನಗರಿ. ದೇಶದ್ರೋಹದಂತಹ ಪ್ರಕರಣಗಳ ಪರವಾಗಿ ನಿಲ್ಲಬಾರದು ಎಂದು ತೀರ್ಮಾನಿಸಿದ್ದೇವೆ ಎಂದು ಮೈಸೂರು ವಕೀಲರ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಹೇಳಿಕೆ.
ಮಾನಸ ಗಂಗೋತ್ರಿಯಲ್ಲಿ ನಳಿನಿ ಎಂಬ ಯುವತಿ ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶನ ಮಾಡಿದ್ದರು. ಅವರಿಗೆ ಈಗ ಮಧ್ಯಂತರ ಜಾಮೀನು ಸಿಕ್ಕಿದೆ. ಆಗ ವಾದ ಮಂಡಿಸಿದ್ದ ವಕೀಲ ಪೃಥ್ವಿ ಕಿರಣ್ ಈ ಪ್ರಕರಣದಿಂದ ನಿವೃತ್ತಿ ಹೊಂದಿದ್ದಾರೆ. ಇಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಕಾಲತ್ತು ವಹಿಸಬಾರದು ಎಂಬ ನಿರ್ಧಾರ ಕೈಗೊಂಡಿದ್ದೇವೆ. ಹೊರಗಿನ ವಕೀಲರೂ ವಕಾಲತ್ತು ವಹಿಸದಂತೆ ಮನವಿ ಮಾಡುತ್ತೇವೆ.
ಕೋರ್ಟ್ ಆವರಣದಲ್ಲೇ ಕೂಗಾಡಿದ ನಳಿನಿ
ವಕೀಲರು ವಕಾಲತ್ತು ವಹಿಸದಿರಲು ನಿರ್ಧರಿಸಿ ಮನವಿ ಸಲ್ಲಿಸುತ್ತಿದ್ದಂತೆ, ಇತ್ತ ನಳಿನಿ "ನೋ ಹ್ಯುಮಾನಿಟಿ' ಎಂದು ಕೋರ್ಟ್ ಆವರಣದಲ್ಲೇ ಕೂಗಾಡಿ ರಂಪಾಟ ಮಾಡಿದ್ದಾರೆ. ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡಲು ನಳಿನಿ ಅವರು ಮುಂದಾದಾಗ ಅವರ ತಾಯಿ ಬಲವಂತವಾಗಿ ಕೋರ್ಟ್ ಆವರಣದಿಂದ ಕರೆದೊಯ್ದರು.