ನಕಲಿ ಚಿನ್ನ ತೋರಿಸಿ ವಂಚಿಸುತ್ತಿದ್ದ ಚಾಣಾಕ್ಷರ ತಂಡ ಕಂಬಿ ಹಿಂದೆ
ಮೈಸೂರು, ಅಕ್ಟೋಬರ್ 6: ನಕಲಿ ಚಿನ್ನ ತೋರಿಸಿ ಹಣ ಪಡೆದು, ಆ ಬಳಿಕ ವಂಚಿಸುತ್ತಿದ್ದ ಮಹಿಳೆಯೂ ಸೇರಿದಂತೆ ನಾಲ್ವರು ವಂಚಕರ ತಂಡವನ್ನು ಹುಣಸೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆ ಪೈಕಿ ಒಬ್ಬ ತಲೆ ಮರೆಸಿಕೊಂಡಿದ್ದಾನೆ.
ಮೈಸೂರು: ಹಲವು ದಿನಗಳಿಂದ ದ್ವಿಚಕ್ರ ವಾಹನ ಕದಿಯುತ್ತಿದ್ದ ಕಳ್ಳ ಸೆರೆ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಶಿಕಾರಿಪುರದ ಬಳಿಯ ತುಪ್ಪದಮಡು ಗ್ರಾಮದ ಶಶಿಕುಮಾರ್ (25), ಕೆಆರ್ ಎಸ್ ನ ಗೋಮಯ(28), ಹುಣಸೂರು ತಾಲೂಕಿನ 2ನೇ ಪಕ್ಷಿರಾಜಪುರದ ಬೋಟಿ ಉಮೇಶ ಮತ್ತು ಮಹಿಳೆ ಪುಟಾಯಿ ಬಂಧಿತರು.
ಮಂಡ್ಯದ ಶಶಿಕುಮಾರ್ ಈ ತಂಡದ ಮುಖ್ಯಸ್ಥನಾಗಿದ್ದು, ಈತನ ಸಾರಥ್ಯದಲ್ಲಿ ವಂಚನೆಗೆ ಸ್ಕೆಚ್ ತಯಾರಾಗುತ್ತಿತ್ತು. ಇವನು ಕೊಡಗಿನ ವಿರಾಜಪೇಟೆ ತಾಲೂಕಿನ ಎಮ್ಮೆಮಾಡು ನಿವಾಸಿ ಆಲಿ ಅವರಿಗೆ ಕರೆ ಮಾಡಿ, ಜಮೀನಿನಲ್ಲಿ ಜೆಸಿಬಿ ಮೂಲಕ ಹೊಂಡ ತೆಗೆಯುವಾಗ ಸುಮಾರು 3 ಕೆ.ಜಿಯಷ್ಟು ಹಳೆಯ ಚಿನ್ನ ಸಿಕ್ಕಿದೆ. ಒಂದು ಕೋಟಿ ರುಪಾಯಿ ಬೆಲೆ ಬಾಳುತ್ತದೆ. ಅದನ್ನು ಕಡಿಮೆ ಬೆಲೆಗೆ ನೀಡುತ್ತೇವೆ ಎಂದು ತಿಳಿಸಿದ್ದ.
ಅಲಿ ತನ್ನ ಸ್ನೇಹಿತ ನಾಪೋಕ್ಲು ಬಳಿಯ ಚೋಣಕೆರೆ ನಿವಾಸಿ ಮೂಸಾರ ಮಗ ಮಜೀದ್ ಗೆ ವಿಷಯ ತಿಳಿಸಿ, ಮತ್ತಿಬ್ಬರು ಸ್ನೇಹಿತರನ್ನು ಕರೆದುಕೊಂಡು ನಗರದ ಬಸ್ ನಿಲ್ದಾಣದ ಬಳಿ ಬಂದು, ಶಶಿಕುಮಾರ್ ಗೆ ಕರೆ ಮಾಡಿದ್ದಾರೆ. ಈ ವೇಳೆ ಭೇಟಿ ಮಾಡಿದ ಶಶಿಕುಮಾರ್ ನಗರದ ಹೊರವಲಯದ ಎಪಿಎಂಸಿ ಬಳಿಯ ಜಮೀನಿನಲ್ಲಿ ಮೊದಲೇ ಹುದುಗಿಸಿಟ್ಟಿದ್ದ ನಕಲಿ ಚಿನ್ನವನ್ನು ತೋರಿಸಿದ್ದಾನೆ.
ವ್ಯಾಪಾರದಲ್ಲಿ ಚೌಕಾಸಿ ಮಾಡಿ, ಕೊನೆಗೆ 10 ಲಕ್ಷ ರುಪಾಯಿ ಕೊಟ್ಟರೆ ಚಿನ್ನ ನೀಡುವುದಾಗಿ ಶಶಿಕುಮಾರ್ ಹೇಳಿದಾಗ ಚಿನ್ನವನ್ನು ಪರೀಕ್ಷೆ ಮಾಡಿಸಬೇಕೆಂದು ಮಜೀದ್ ತಿಳಿದ್ದಾರೆ. ಈ ವೇಳೆ ಮುಂಗಡವಾಗಿ ಒಂದು ಸಾವಿರ ನೀಡಿ ಒಂದು ತುಂಡು ಚಿನ್ನವನ್ನು ಪಡೆದುಕೊಂಡ ಆಲಿ ಮತ್ತು ಸ್ನೇಹಿತರು ಅದನ್ನು ಪಟ್ಟಣದಲ್ಲಿ ಪರೀಕ್ಷಿಸಿದಾಗ ನಕಲಿ ಚಿನ್ನವೆಂಬುದು ಗೊತ್ತಾಗಿದೆ. ತಕ್ಷಣ ಅವರು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಎಸ್ ಐ ಷಣ್ಮುಗಂ ಮತ್ತು ತಂಡ ಎಪಿಎಂಸಿ ಬಳಿಗೆ ತೆರಳಿದಾಗ ಅದಾಗಲೇ ಐವರು ಹುಣಸೂರು ನಗರದ ಕಡೆಗೆ ನಡೆದು ಬರುತ್ತಿರುವುದು ಕಾಣಿಸಿದೆ. ಅವರನ್ನು ಹಿಡಿಯಲೆತ್ನಿಸಿದ ವೇಳೆ ಪಕ್ಷಿರಾಜಪುರದ ನಿಶಾನ್ ಎಂಬಾತ ಪರಾರಿಯಾಗಿದ್ದಾನೆ.
ಉಳಿದ ನಾಲ್ವರು ಸಿಕ್ಕಿಬಿದ್ದಿದ್ದು, ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈಗಾಗಲೇ ಅನೇಕ ಕಡೆ ಇಂತಹ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಗಳು ಚಾಣಾಕ್ಷರಾಗಿದ್ದು, ಅಮಾಯಕರನ್ನು ಬಲೆಗೆ ಬೀಳಿಸಿಕೊಳ್ಳಲು ಹೊರ ರಾಜ್ಯದವರಂತೆ ತೆಲುಗಿನಲ್ಲಿ ಮಾತನಾಡುತ್ತಿದ್ದರು. ಜತೆಗೆ ನಯವಾಗಿ ಮಾತನಾಡುತ್ತಾ ವ್ಯವಹಾರ ಕುದುರಿಸಿ, ನಕಲಿ ಚಿನ್ನ ನೀಡಿ ಹಣ ಪಡೆದು ಪರಾರಿಯಾಗುತ್ತಿದ್ದರು ಎಂದು ತಿಳಿದುಬಂದಿದೆ.