ಎಚ್.ಡಿ.ಕೋಟೆ; ಈಜಲು ಹೋಗಿ ನೀರು ಪಾಲಾದ ನಾಲ್ವರು ಬಾಲಕರು
ಮೈಸೂರು, ಫೆಬ್ರವರಿ 22: ಕೆರೆಯಲ್ಲಿ ಈಜಲು ಹೋದ ನಾಲ್ವರು ಬಾಲಕರು ನೀರು ಪಾಲಾಗಿರುವ ಘಟನೆ ಮೈಸೂರಿನ ಎಚ್.ಡಿ ಕೋಟೆ ತಾಲೂಕಿನ ಜಿ.ಜಿ.ಕಾಲೊನಿಯಲ್ಲಿ ನಡೆದಿದೆ.
ಕಿರಣ್ (14), ಕೆಂಡಗಣ್ಣ (12) ಮತ್ತವರ ಸಹೋದರರಾದ ರೋಹಿತ್ (10) ಹಾಗೂ ಯಶ್ವಂತ್ (8) ಈಜಲು ಹೋಗಿ ಸಾವನ್ನಪ್ಪಿದವರು. ಶಿವರಾತ್ರಿ ಹಬ್ಬದಂದು ಶಾಲೆಗೆ ರಜೆಯಿದ್ದ ಕಾರಣ ನಾಲ್ವರು ಬಾಲಕರು, ತಮ್ಮ ಕಾಲೊನಿಯಿಂದ 1 ಕಿ.ಮೀ. ದೂರವಿರುವ ಮಲಬಾರ್ ಶೆಡ್ ಕೆರೆಗೆ ಸಂಜೆ ನಾಲ್ಕು ಗಂಟೆಗೆ ಈಜಲು ಹೋಗಿದ್ದರು. ಬಾಲಕರು ಸುಮಾರು 2 ಗಂಟೆಗಳ ಕಾಲ ಕೆರೆಯಲ್ಲಿ ಈಜಾಡಿದ್ದಾರೆ. ಕೆರೆ ಮಧ್ಯದಲ್ಲಿ ಆಳವಿದ್ದ ಕಡೆ ಬಾಲಕನೊಬ್ಬ ಈಜಿಕೊಂಡು ಹೋಗಿದ್ದು, ಈ ವೇಳೆ, ಸುಸ್ತಾಗಿ ನಿಸ್ಸಹಾಯಕನಾಗಿ ಮುಳುಗಿದ್ದಾನೆ.
ಬೆಂಗಳೂರಿನ ಕಲ್ಕೆರೆ ಕೆರೆಯಲ್ಲಿ ಟೆಕ್ಕಿ ಸಚಿನ್ ಶವ ಪತ್ತೆ
ಆತನನ್ನು ರಕ್ಷಿಸಲು ಒಬ್ಬರಂತೆ ಒಬ್ಬರಾಗಿ ಹೋದ ಬಾಲಕರು ಮೃತಪಟ್ಟಿದ್ದಾರೆ. ನಾಲ್ವರು ಬಾಲಕರ ಮೃತದೇಹವನ್ನು ಗ್ರಾಮಸ್ಥರು ಹೊರತೆಗೆದಿದ್ದಾರೆ. ಈ ಸಂಬಂಧ ಎಚ್.ಡಿ.ಕೋಟೆ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.