ಸಾಲಮನ್ನಾ ನೋಂದಣಿಗೆ ಮೈಸೂರು ಜಿಲ್ಲೆಯಲ್ಲಿ ಮುಂದಡಿಯಿಟ್ಟ ಅನ್ನದಾತರು
ಮೈಸೂರು, ಜನವರಿ 11 : ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಬೆಳೆ ಸಾಲ ಪಡೆದ ಮೈಸೂರು ಜಿಲ್ಲೆಯ 63,500 ರೈತರ ಪೈಕಿ ಶೇ. 88ರಷ್ಟು ಮಂದಿ ಬೆಳೆ ಸಾಲ ಮನ್ನಾ ಯೋಜನೆಯ ಲಾಭ ಪಡೆಯಲು ಸ್ವಯಂ ಘೋಷಣೆ ಮಾಡಿದ್ದಾರೆ.
ನೋಂದಣಿಗೆ ಸರ್ಕಾರ ನಿಗದಿಪಡಿಸಿದ್ದ ಗಡುವು ಕೊನೆಗೊಂಡಿದ್ದು, 55,832 ರೈತರು ಸ್ವಯಂ ಘೋಷಣಾ ಪತ್ರಕ್ಕೆ ಸಹಿ ಹಾಕಿದ್ದಾರೆ. ಇನ್ನೂ 7,668 ರೈತರು ನೋಂದಣಿ ಮಾಡಿಕೊಳ್ಳಲು ಬಾಕಿ ಇದ್ದು, ಸಮಯಾವಕಾಶ ವಿಸ್ತರಿಸುವ ಸಾಧ್ಯತೆ ಇದೆ.
ಸಾಲಮನ್ನಾ ಆಗಲು ರೈತರು ಈ ದಾಖಲೆಗಳನ್ನು ಕಡ್ಡಾಯವಾಗಿ ಕೊಡಬೇಕು
ಹಲವಾರು ಬ್ಯಾಂಕ್ ಶಾಖೆಗಳಲ್ಲಿ ಡಿ.15ರಿಂದಲೇ ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ಹೆಸರು ಹಾಗೂ ವಿವರಗಳನ್ನು ನೋಂದಾಯಿಸಿದ್ದಾರೆ. ಸ್ವಯಂ ದೃಢೀಕರಣ ಪತ್ರದೊಂದಿಗೆ ಆಧಾರ್ ಕಾರ್ಡ್, ಪಡಿತರ ಚೀಟಿಯ ನಕಲು ಪ್ರತಿ ಹಾಗೂ ಸಾಲ ಪಡೆದ ಜಮೀನಿನ ಸರ್ವೇ ಸಂಖ್ಯೆಯ (ಪಹಣಿ) ಮಾಹಿತಿಯನ್ನು ನೀಡಿದ್ದಾರೆ.
ರೈತರ ಸಾಲಮನ್ನಾ ವಿಳಂಬಕ್ಕೆ ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ
2 ಲಕ್ಷದವರೆಗಿನ ಬೆಳೆ ಸಾಲಮನ್ನಾ ಮಾಡುವ ಯೋಜನೆ ಇದಾಗಿದೆ. ಸುಸ್ತಿ ಸಾಲ, ಪುನರಾವರ್ತಿತ ಸಾಲ, ಅನುತ್ಪಾದಕ ಆಸ್ತಿ ಸಾಲಗಳನ್ನು ಒಳಗೊಂಡಂತೆ 2009ರ ಏಪ್ರಿಲ್ 1ರಿಂದ 2017ರ ಡಿ. 31ರವರೆಗೆ ವಾಣಿಜ್ಯ ಬ್ಯಾಂಕ್ಗಳಲ್ಲಿ ಬಾಕಿ ಇರುವ ರೈತರ ಬೆಳೆ ಸಾಲಗಳ ನೋಂದಣಿ ಪ್ರಕ್ರಿಯೆಗೆ ಅವಕಾಶ ನೀಡಲಾಗಿದೆ.
ನಾಡ ಕಚೇರಿ ಸಿಬ್ಬಂದಿ ನಿಯೋಜನೆ
ರೈತರ ನೆರವಿಗಾಗಿ 200 ಗ್ರಾಮ ಲೆಕ್ಕಿಗರು, ನಾಡ ಕಚೇರಿಗಳ ಸಿಬ್ಬಂದಿ ನಿಯೋಜಿಸಲಾಗಿದೆ. ಮನೆ ಮನೆಗಳಿಗೆ ತೆರಳಿ ಮಾಹಿತಿ ಪಡೆದು ನೋಂದಣಿ ಮಾಡಿಸಿಕೊಳ್ಳಲಾಗುತ್ತಿದೆ. ನಾನಾ ಕಾರಣಗಳಿಂದ ಬೇರೆ ಊರುಗಳಲ್ಲಿರುವ ರೈತರು ತಮ್ಮ ಹೆಸರು ನೋಂದಣಿ ಮಾಡಿಲ್ಲ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ನ ವ್ಯವಸ್ಥಾಪಕ ವೆಂಕಟಾಚಲಪತಿ ತಿಳಿಸಿದರು.
ತಂತ್ರಾಂಶ ಅಭಿವೃದ್ಧಿಪಡಿಸಿದೆ
ಮೈಸೂರು ನಗರದ ಶಾಖೆಗಳಲ್ಲಿ ಸಾಲ ಮಾಡಿದವರು ಬೇರೆ ಯಾವುದೋ ವಿಳಾಸದಲ್ಲಿರುತ್ತಾರೆ. ಕೆಲವರು ಐದಾರು ಕಡೆ ಸಾಲ ಪಡೆದಿರುತ್ತಾರೆ. ಅಂಥವರನ್ನು ಹುಡುಕಲಾಗುತ್ತಿದೆ. ಕೆಲ ರೈತರು ನೋಂದಣಿ ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದರು. ನೋಂದಣಿ ಮಾಡಿಕೊಂಡ ರೈತರ ವಿವರ ದಾಖಲಿಸಲು ಕಂದಾಯ ಇಲಾಖೆಯು ತಂತ್ರಾಂಶ ಅಭಿವೃದ್ಧಿಪಡಿಸಿದೆ. ಈ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ವೆಂಕಟಾಚಲಪತಿ ಮಾಹಿತಿ ನೀಡಿದ್ದಾರೆ.
ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ
530ಕ್ಕೂ ಅಧಿಕ ಬ್ಯಾಂಕ್ ಶಾಖೆಗಳಿವೆ
ಬ್ಯಾಂಕ್ಗಳಿಗೆ ಬಂದ ಸ್ವಯಂ ದೃಢೀಕರಣ ಪತ್ರಗಳಲ್ಲಿ ಸಾಲಮನ್ನಾ ಯೋಜನೆಗೆ ಅನರ್ಹ ಎಂಬುದು ಕಂಡುಬಂದಲ್ಲಿ ತಹಶೀಲ್ದಾರ್ ನೇತೃತ್ವದ ಮತ್ತೊಂದು ಸಮಿತಿ ಅಂಥ ಅರ್ಜಿಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸಲಿದೆ. ಜಿಲ್ಲೆಯಲ್ಲಿ 530ಕ್ಕೂ ಅಧಿಕ ಬ್ಯಾಂಕ್ ಶಾಖೆಗಳಿವೆ. ಅದರಲ್ಲಿ ಗ್ರಾಮೀಣ ಪ್ರದೇಶದಲ್ಲಿ 160 ಹಾಗೂ ಅರೆ ನಗರ ಪ್ರದೇಶದಲ್ಲಿ 80 ಶಾಖೆಗಳಿವೆ.
526 ಕೋಟಿ ಸಾಲ ಮಾಡಿದ್ದಾರೆ
ಸಹಕಾರಿ ಬ್ಯಾಂಕ್ಗಳಲ್ಲಿ ಸಾಲಮನ್ನಾ ಪಡೆದ ಫಲಾನುಭವಿಗಳು ವಾಣಿಜ್ಯ ಬ್ಯಾಂಕ್ ಬೆಳೆ ಸಾಲಮನ್ನಾ ಯೋಜನೆಗೆ ಅರ್ಹರಿರುವುದಿಲ್ಲ. ಸಹಕಾರಿ ಬ್ಯಾಂಕ್ಗಳಲ್ಲಿಯೇ ಜಿಲ್ಲೆಯ 65 ಸಾವಿರಕ್ಕೂ ಅಧಿಕ ರೈತರು ಸುಮಾರು ₹ 526 ಕೋಟಿ ಸಾಲ ಮಾಡಿದ್ದಾರೆ. ಇವರಲ್ಲಿ ಸಣ್ಣ ರೈತರು 52 ಸಾವಿರ, ಮಧ್ಯಮ ರೈತರು 13 ಸಾವಿರ ಇದ್ದಾರೆ.