ಡಿ.ಕೆ.ಶಿ ಬೆನ್ನಿಗೆ ನಿಂತ ಧೃವನಾರಾಯಣ್: ಬಿಜೆಪಿ ಪ್ರಶ್ನೆಗೆ ಉತ್ತರ
ಮೈಸೂರು, ಡಿಸೆಂಬರ್ 28: ಡಿ.ಕೆ.ಶಿವಕುಮಾರ್ ರಿಂದ ಏಸು ಪ್ರತಿಮೆ ನಿರ್ಮಾಣಕ್ಕೆ ಮುಂದಾಳತ್ವ ವಿಚಾರಕ್ಕೆ ಮೈಸೂರಿನಲ್ಲಿಂದು ಮಾಜಿ ಸಂಸದ ಧೃವನಾರಾಯಣ್ ಪ್ರತಿಕ್ರಿಯಿಸಿ ಬಿಜೆಪಿಯವರ ಮನಸ್ಸಿಲ್ಲಿ ಎಂಥ ವಿಷ ಇದೆ ಅಂತ ಇದರಲ್ಲೇ ಗೊತ್ತಾಗುತ್ತೆ. ಕ್ರಿಶ್ಚಿಯನ್ನರ ಭಾವನೆಗಳಿಗೆ ಬೆಲೆ ಕೊಡದ ಬಿಜೆಪಿಯವರ ಹೇಳಿಕೆಗಳು ಅಕ್ಷಮ್ಯ ಅಪರಾಧ ಎಂದು ವಾಗ್ದಾಳಿ ನಡೆಸಿದರು.
ಮೃಗಗಳಿಗೆ ಮಾನವೀಯತೆ ಇರುತ್ತೆ. ಆದ್ರೆ ಬಿಜೆಪಿ ನಾಯಕರಿಗೆ ಮಾನವೀಯತೆ ಇಲ್ಲ. ಇವರೆಲ್ಲ ಮನುಷ್ಯರ..? ಸ್ಥಳೀಯ ಜನರ ಮನವಿಗೆ ಸ್ಪಂದಿಸೋದು ಶಾಸಕರ ಕರ್ತವ್ಯ. ಅದಕ್ಕಾಗಿ ಡಿಕೆಶಿ ಸರ್ಕಾರದಿಂದ ಜಾಗ ಕೊಡಿಸಿ ತಾವು ಹಣ ನೀಡಿದ್ದಾರೆ. ಇದನ್ನು ಬಿಜೆಪಿ ನಾಯಕರು ಟೀಕಿಸೋದು ಸರಿಯಲ್ಲ ಎಂದರು.
ಕ್ತೈಸ್ತ ಮಿಷನರಿಗಳು ಸ್ವಾತಂತ್ರ್ಯ ಪೂರ್ವದಿಂದಲೂ ಸೇವೆ ಮಾಡುತ್ತಿವೆ. ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೆ ಕೊಡುಗೆ ನೀಡಿದೆ. ಅಂತ ಸಮುದಾಯವನ್ನು, ಧರ್ಮವನ್ನು ಅವಮಾನಿಸೋದು ಸರಿಯಲ್ಲ. ಅದೆಷ್ಟು ಬಿಜೆಪಿ ನಾಯಕರು, ಅವರ ಮಕ್ಕಳು ಕ್ರೈಸ್ತ ಮಿಷನರಿ ಶಾಲೆಯಲ್ಲಿ ಓದಿಲ್ಲ. ಡಿಕೆಶಿ ಟೀಕಿಸುವ ಪ್ರತಾಪ್ಸಿಂಹ ಮಂಗಳೂರಿನಲ್ಲಿ ಓದಿದ ಕಾಲೇಜು ಯಾವುದು ಎಂದು ಪ್ರಶ್ನಿಸಿದರು. ಇವರೆಲ್ಲ ಕ್ರೈಸ್ತ ಸಮುದಾಯವನ್ನು ಅವಮಾನಿಸಿದ್ದಾರೆ. ಇದಕ್ಕೆ ಸೋನಿಯಾ ಗಾಂಧಿ ಹೆಸರು ತಳುಕು ಹಾಕೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿಎಎ ಕಾಯ್ದೆಯನ್ನು ಧರ್ಮಾಧಾರಿತವಾಗಿ ಜಾರಿ ಮಾಡ್ತಿದ್ದಾರೆ. ಈಗ ಕ್ರೀಶ್ಚಿಯನ್ನರ ಭಾವನೆಗಳಿಗೆ ಬೆಲೆ ಕೊಡ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏನು ಮಾಡಲು ಹೋಗ್ತಿವೆ. ಆ ಈಶ್ವರಪ್ಪನವರಿಗಂತು ಮನುಷ್ಯತ್ವವೇ ಇಲ್ಲ ಬಿಡಿ. ಅವರು ಕ್ರಿಶ್ಚಿಯನ್ನರಿಗೆ ನೋವಾಗುವ ಮಾತುಗಳನ್ನು ಆಡಿರೋದು ಎಷ್ಟು ಸರಿ ಎಂದರು.
ಬಿಜೆಪಿಯವರದ್ದು ಧಮನಕಾರಿ ಮನಸ್ಥಿತಿ. ಹಿಂದೂ ಧರ್ಮ ಬಿಟ್ಟು ಬೇರೆ ಏನು ಇರಬಾರದು ಅನ್ನೋ ಭಾವನೆ ಇಟ್ಟುಕೊಂಡಿದ್ದಾರೆ. ಇವರ ಮೂಲ ಅಜೆಂಡ ಪ್ರಚೋದನಕಾರಿ ಹೇಳಿಕೆ ಮೂಲಕ ಮತ ಸೆಳೆಯೋದು. ಬಿಜೆಪಿಯವರು ಮೊದಲು ಅಸೃಶ್ಯತೆ ಬಗ್ಗೆ ಮಾತನಾಡಲಿ. ಹಿಂದೂ ಧರ್ಮದಲ್ಲಿರುವ ಅಸಮಾನತೆ ಬಗ್ಗೆ ತಮ್ಮ ನಿಲುವು ಹೇಳಲಿ. ಆ ಈಶ್ವರಪ್ಪ ಅಂತು ಎಲ್ಲರಿಗೂ ಅವಮಾನ ಮಾಡ್ತಿದ್ದಾರೆ. ಒಬ್ಬ ಮಂತ್ರಿಯಾಗಿ ಹೇಗೆ ಇರಬೇಕು ಎಂಬುದೇ ಆ ಮನುಷ್ಯನಿಗೆ ಗೊತ್ತಿಲ್ಲ ಎಂದು ಏಕವಚನದಲ್ಲಿಯೇ ಹರಿಹಾಯ್ದರು.
ನಾನು ಶಾಸಕನಾಗಿದ್ದಾಗ ಸಿ.ಟಿ.ರವಿ ನನಗೆ ಹೇಳುತ್ತಿದ್ದರು. ಯಾಕೆ ಶಾಲೆ ಕಾಲೇಜಿನ ಫೈಲ್ ತರ್ತಿರಾ. ಅದನ್ಯಾಕೆ ಮಾಡೋಕೆ ಹೋಗ್ತಿರಿ. ನಾವು ನೋಡಿ ವರ್ಷಕ್ಕೊಮ್ಮೆ ದತ್ತ ಪೀಠ ಮೆರವಣಿಗೆ ಮಾಡಿ ಗೆದ್ದು ಬರ್ತೀವಿ. ನೀವು ಹಾಗೆ ಮಾಡಿ ಅಂತ ಸಲಹೆ ಕೊಟ್ಟಿದ್ರು. ನಳಿನ್ ಕುಮಾರ್ ಕಟೀಲ್ ಸಂಸತ್ ಗೆ ಬಾರದೆ ಉತ್ಸವದಲ್ಲಿ ಭಾಗಿಯಾಗ್ತಿದ್ರು. ಸಂಸತ್ ಬಿಟ್ಟು ಉತ್ಸವದಲ್ಲಿ ಭಾಗಿಯಾಗ್ತಿರಾ ಅಂತ ಕೇಳೀದ್ರೆ ನಮಗೆ ಸಂಸತ್ ಗಿಂತ ಉತ್ಸವನೇ ಹೆಚ್ಚು ಅಂತ ಹೇಳ್ತಿದ್ರು. ಇಂತಹ ಮನಸ್ಥಿತಿ ಇರುವಂತವರು ಬಿಜೆಪಿ ನಾಯಕರುಗಳು. ಇವರುಗಳಿಗೆ ಅಭಿವೃದ್ಧಿ ಬೇಡ. ಧರ್ಮದ ಮಧ್ಯ ಕಂದಕ ಸೃಷ್ಟಿಸುವುದೇ ಇವರ ಕೆಲಸ ಎಂದು ಕಿಡಿ ಕಾರಿದರು.