ಸಿದ್ದರಾಮಯ್ಯ ಬೆಂಬಲಕ್ಕೆ ಧ್ರುವ ನಾರಾಯಣ್; ಚಳವಳಿಯ ಎಚ್ಚರಿಕೆ
ಮೈಸೂರು, ಜುಲೈ 15: ಅಕ್ರಮಗಳ ಕುರಿತು ಪ್ರಶ್ನಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸಂಸದ ವಿ. ಶ್ರೀನಿವಾಸಪ್ರಸಾದ್ ಹೇಳಿಕೆಗೆ ಮಾಜಿ ಸಂಸದ ಆರ್.ಧ್ರುವನಾರಾಯಣ ತಿರುಗೇಟು ನೀಡಿದ್ದಾರೆ.
Recommended Video
"ಕೋವಿಡ್ ನಿಯಂತ್ರಣ ಮಾಡಲು ಪರಿಕರಗಳನ್ನು ಖರೀದಿಸುವಾಗ ನಡೆದಿರುವ ಅಕ್ರಮದ ಬಗ್ಗೆ ಪ್ರತಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಸಮರ್ಥವಾಗಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕೋವಿಡ್ ನಿಯಂತ್ರಣ ಪರಿಕರಗಳನ್ನು ಖರೀದಿಸುವ ವಿಚಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಲೆಕ್ಕಕೊಡಿ ಎಂದು ಚಳವಳಿ ನಡೆಸಲಿದೆ" ಎಂದು ವಾಗ್ದಾಳಿ ನಡೆಸಿದರು.
"ಕೊಟ್ಟ ಕುದುರೆ ಏರದವರು ನಾವಲ್ಲ, ಬಿಜೆಪಿಯವರು..."
ಇದೇ ಸಂದರ್ಭದಲ್ಲಿ, ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ರೈತರ, ಬಡವರ ಪಾಲಿಗೆ ಮರಣ ಶಾಸನ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ರಾಜ್ಯಪಾಲರ ಸಮ್ಮತಿ ನೀಡಿರುವುದು ನೋವಿನ ಸಂಗತಿ. ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುವ ಮೊದಲು ಸದನದಲ್ಲಿ ಚರ್ಚೆಯಾಗಬೇಕು. ಭೂ ಸುಧಾರಣಾ ಕಾಯ್ದೆ 63ರ ಪ್ರಕಾರ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬ 108 ಎಕರೆ ಜಮೀನು ಹೊಂದಲು ಅವಕಾಶವಿತ್ತು. ಆದರೆ ಪ್ರಸ್ತುತ ಕಾಯ್ದೆ ತಿದ್ದುಪಡಿಯಿಂದ 216 ಎಕರೆ ಜಮೀನು ಹೊಂದಬಹುದಾಗಿದೆ. ಇದರಿಂದ ಹಣವಿರುವವರು ಯಾರು ಬೇಕಾದರೂ ಕೃಷಿ ಭೂಮಿಯನ್ನು ಕೊಳ್ಳಬಹುದಾಗಿದೆ ಎಂದರು.
ಆಹಾರ ಉತ್ಪಾದನೆ ಸಮಸ್ಯೆ ಆಗಿದ್ದರೆ ಅಂತಹ ಸಮಯದಲ್ಲಿ ಈ ಕಾಯ್ದೆ ಜಾರಿಗೆ ತರಬಹುದಿತ್ತು. ಆದರೆ ನಮ್ಮ ದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲೇ ಆಹಾರ ದಾಸ್ತಾನಿದೆ. ಹೀಗಾಗಿ ಭೂ ಸುಧಾರಣೆ ಕಾಯ್ದೆ ರೈತರ, ಬಡವರ ಪಾಲಿಗೆ ಮರಣ ಶಾಸನವಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಇದನ್ನ ಗಂಭೀರವಾಗಿ ಪರಿಗಣಿಸಿ ರಾಜ್ಯವ್ಯಾಪಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.