"ಕೊಟ್ಟ ಕುದುರೆ ಏರದವರು ನಾವಲ್ಲ, ಬಿಜೆಪಿಯವರು..."
ಮೈಸೂರು, ಜುಲೈ 10: "ಮೋದಿಯವರೇ ನೀವು ಆತ್ಮನಿರ್ಭರ ಭಾರತ ಮಾಡಲ್ಲ. ಆತ್ಮಹತ್ಯೆ ಭಾರತ ಮಾಡುವುದಕ್ಕೆ ಹೊರಟಿದ್ದೀರ. ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿದ್ದೀರ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮೊನ್ನೆ ಏಕಪಾತ್ರಾಭಿನಯದ ರೀತಿ ಮಾತಾಡಿದ್ದಾರೆ. ಅದು ಜನರ ಜೊತೆ ಮಾಡಿರುವ ಸಂವಾದವಲ್ಲ" ಎಂದು ಟೀಕಿಸಿದ್ದಾರೆ ಮಾಜಿ ಸಂಸದ ಧ್ರುವನಾರಾಯಣ್.
ಇಂದು ಮೈಸೂರಿನಲ್ಲಿ ಮಾತನಾಡಿದ ಧ್ರುವ ನಾರಾಯಣ್, "ಅನಂತಕುಮಾರ್ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಸಕಾರಾತ್ಮಕವಾಗಿ ಚಿಂತಿಸುತ್ತಿದ್ದರು. ನನಗೆ ಅನಂತಕುಮಾರ್ ಅವರ ಬಗ್ಗೆ ಅಪಾರ ಗೌರವವಿದೆ. ಬಿ.ಎಲ್. ಸಂತೋಷ್ ಕೂಡ ಅವರಂತೆಯೇ ಬೆಳೆಯುತ್ತಾರೆ ಎಂದುಕೊಂಡಿದ್ದೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಸಂತೋಷ್ ನಡೆದುಕೊಳ್ಳುತ್ತಿದ್ದಾರೆ" ಎಂದರು.
ಕರ್ನಾಟಕ ಬಿಜೆಪಿಯ ಒಳಗುಟ್ಟನ್ನು ಟ್ವೀಟ್ ಮೂಲಕ ಬಹಿರಂಗಗೊಳಿಸಿದ ಸಿದ್ದರಾಮಯ್ಯ
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಮ್ಮ ಭಾಷಣದಲ್ಲಿ ಕೊಟ್ಟ ಕುದುರೆ ಏರದವನು ವೀರನು ಅಲ್ಲ ಶೂರನು ಅಲ್ಲ ಎಂದಿದ್ದು, ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಧ್ರುವ ನಾರಾಯಣ್, "ಕೊಟ್ಟ ಕುದುರೆ ಏರದವರು ಕಾಂಗ್ರೆಸ್ನವರಲ್ಲ, ಬಿಜೆಪಿಯವರು. ಮೋದಿಗೆ ಈ ಮಾತು ಅನ್ವಯ ಆಗುತ್ತೆ.
ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಿತಿ ಹೀನಾಯವಾಗಿದೆ. 117 ದೇಶಗಳಲ್ಲಿ ಭಾರತ 102ನೇ ಸ್ಥಾನದಲ್ಲಿದೆ. ಪಾಕಿಸ್ತಾನ, ನೇಪಾಳ, ಬುರ್ಕಿನಾ ಫಾಸೋ ದೇಶಗಳೆ ನಮಗಿಂತ ಉತ್ತಮ ಸ್ಥಿತಿಯಲ್ಲಿದೆ. ಇದಕ್ಕೆ ಮೋದಿ ತೆಗೆದುಕೊಂಡ ನಿರ್ಧಾರಗಳೇ ಕಾರಣ" ಎಂದು ದೂರಿದರು.
"5 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಅಪೌಷ್ಟಿಕತೆ ಕಾಡುತ್ತಿದೆ. ಮಕ್ಕಳ ಹಸಿವು ನೀಗಿಸಲು ಮೋದಿ ಕೈಯಲ್ಲಿ ಆಗಲಿಲ್ಲ. ಹಸಿವು ನೀಗಿಸುವಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಭಾರತದ ಸ್ಥಾನ 55ಕ್ಕೆ ಇಳಿದಿತ್ತು. ಕೊಟ್ಟ ಕುದುರೆ ಏರಲು ಆಗದವರು ಮೋದಿ ಹೊರತು ಕಾಂಗ್ರೆಸ್ ಅಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂಬೈನಲ್ಲಿನ ಅಂಬೇಡ್ಕರ್ ಮನೆ ಮೇಲೆ ದಾಳಿ ಖಂಡಿಸಿದ ಅವರು ಅಂಬೇಡ್ಕರ್ ದೇಶದ ಆಸ್ತಿ ಎನ್ನುವ ಮೂಲಕ ಭಾರತದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕೊಡುಗೆ ಸ್ಮರಿಸಿದರು. ದಾಳಿ ಮಾಡಿದ ಕಿಡಿಗೇಡಿಗಳ ಬಂಧಿಸುವಂತೆ ಆಗ್ರಹಿಸಿದರು. ಯಾರೇ ಈ ದಾಳಿ ಮಾಡಿದರೂ ಈ ಕೂಡಲೇ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು .ನಾವೆಲ್ಲರೂ ಹಾಗೂ ಕಾಂಗ್ರೆಸ್ ಪಕ್ಷ ಈ ಕೃತ್ಯವನ್ನು ಖಂಡಿಸುತ್ತದೆ ಎಂದರು.